
ದೊಡ್ಡಬಳ್ಳಾಪುರ ಏಪ್ರಿಲ್ 17 ( ವಿಜಯಮಿತ್ರ ) : ಕನ್ನಡ ಚಲನಚಿತ್ರ ರಂಗದಲ್ಲಿ ನಟ, ನಿರ್ದೇಶಕ, ನಿರ್ಮಾಪಕ, ವಿತರಕ ಹೀಗೆ ಬಹುಮುಖ ಪ್ರತಿಭೆಯೊಂದಿಗೆ ಚಿತ್ರ ರಂಗದಲ್ಲಿ ಸಕ್ರಿಯರಾಗಿದ್ದ ದ್ವಾರಕೀಶ್ ಅವರ ಸಾಧನೆಗೆ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ದೊರೆಯಬೇಕಾಗಿದೆ ಎಂದು ಜವಾಹರ್ ನವೋದಯ ವಿದ್ಯಾಲಯದ ನಿವೃತ್ತ ಅಧ್ಯಾಪಕ ವಿ.ಎಸ್.ಹೆಗಡೆ ತಿಳಿಸಿದರು.
ಅವರು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ಸಹಯೋಗದಲ್ಲಿ ಕನ್ನಡ ಜಾಗೃತ ಭವನದಲ್ಲಿ ನಡೆದ ಕನ್ನಡದ ಹಿರಿಯ ನಟ, ನಿರ್ದೇಶಕ ಮತ್ತು ನಿರ್ಮಾಪಕ ದ್ವಾರಕೀಶ್ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಚಲನಚಿತ್ರಗಳಲ್ಲಿ ನಾಯಕ ನಟ ದೊರೆಯುವ ಪ್ರಾಮುಖ್ಯತೆ ಹಾಸ್ಯನಟನಿಗೂ ದೊರೆಯುವಂತೆ ಆದದ್ದು ದ್ವಾರಕೀಶ್ ಮೊದಲಾದ ಹಾಸ್ಯ ನಟರಿಂದ. ಕನ್ನಡ ಚಿತ್ರರಂಗವನ್ನು ಎತ್ತರಕ್ಕೆ ಕೊಂಡೊಯ್ದವರಲ್ಲಿ ದ್ವಾರಕೀಶ್ ಪ್ರಮುಖರಾಗಿದ್ದಾರೆ ಎಂದರು.
ಕನ್ನಡಪರ ಹಿರಿಯ ಹೋರಾಟಗಾರ ತ.ನ.ಪ್ರಭುದೇವ್ ಮಾತನಾಡಿ, ಕನ್ನಡ ಚಿತ್ರರಂಗದಲ್ಲಿ ಸಾಹಸ ಪ್ರವೃತ್ತಿಯುಳ್ಳವರು ದ್ವಾರಕೀಶ್. ಕನ್ನಡ ಚಿತ್ರರಂಗಕ್ಕೆ ಅನೇಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದವರು. ವಿದೇಶಗಳಲ್ಲಿ ಚಿತ್ರೀಕರಣ ಮಾಡುವ ಮೂಲಕ ಕನ್ನಡ ಚಿತ್ರರಂಗದ ವ್ಯಾಪ್ತಿಯನ್ನು ವಿಸ್ತರಿಸಿದರು. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ ದ್ವಾರಕೀಶ್ ತಮ್ಮ ಸ್ವಂತ ಜೀವನದಲ್ಲಿ ಸಾಕಷ್ಟು ನೋವು ನಲಿವು ಕಂಡವರು ಎಂದರು.
ಕನ್ನಡ ಪಕ್ಷದ ಮುಖಂಡ ಸಂಜೀವವಾಯಕ್ ಮಾತನಾಡಿ, ಉತ್ತಮ ಚಲನಚಿತ್ರಗಳಲ್ಲಿ ನಟನೆ ಮತ್ತು ಸದಾಭಿರುಚಿ ಚಿತ್ರಗಳ ನಿರ್ಮಾಣ ಮತ್ತು ನಿರ್ದೇಶನ ಮಾಡಿರುವ ದ್ವಾರಕೀಶ್ ಕನ್ನಡ ಮನಸ್ಸುಗಳನ್ನು ಗೆದ್ದಿದ್ದಾರೆ. ಕನ್ನಡ ನಾಡು ನುಡಿ ವಿಚಾರದ ಕಾಳಜಿ ಹೊಂದಿದ್ದ ಅವರು ಕನ್ನಡ ನಾಡು ಪಕ್ಷದಿಂದ ವಿಧಾನಸಭೆ ಚುನಾವಣೆಗೂ ಸ್ಪರ್ಧೆ ಮಾಡಿದ್ದರು. ಚಿತ್ರರಂಗದಲ್ಲಿ ಕನ್ನಡಿಗರು ಸಾಧನೆ ಮಾಡಬಲ್ಲರು ಎಂಬುದನ್ನು ಭಾರತೀಯ ಚಿತ್ರರಂಗಕ್ಕೆ ತೋರಿಸಿಕೊಟ್ಟರು ಎಂದರು.
ದ್ವಾರಕೀಶ್ ನುಡಿನಮನ ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಕೋಶಾಧ್ಯಕ್ಷ. ಸಾ.ಲ.ಕಮಲನಾಥ್, ಕಸಬಾ ಹೋಬಳಿ ಘಟಕದ ಕೋಶಾಧ್ಯಕ್ಷ ಜಿ.ಸುರೇಶ್, ದೊಡ್ಡಬಳ್ಳಾಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗರಾಜು ಶಿರವಾರ, ಕನ್ನಡ ಜಾಗೃತ ಪರಿಷತ್ತು ಕಾರ್ಯದರ್ಶಿ ಡಿ.ಪಿ.ಆಂಜನೇಯ, ಕನ್ನಡ ಪಕ್ಷದ ಅಧ್ಯಕ್ಷ ಡಿ.ವೆಂಕಟೇಶ್, ಕಾರ್ಯದರ್ಶಿ ಮುನಿಪಾಪಣ್ಣ, ಸ್ಕೌಟ್ ಮತ್ತು ಗೈಡ್ ಜಿಲ್ಲಾ ಸಹಾಯಕ ಆಯುಕ್ತರ ವೆಂಕಟರಾಜು, ಕನ್ನಡ ಸಂಘಟನೆಯ ಪದಾಧಿಕಾರಿಗಳಾದ ಸೂರ್ಯನಾರಾಯಣ್ ( ಸೂರಿ), ದರ್ಗಾಜೋಗಿಹಳ್ಳಿಮಲ್ಲೇಶ್, ಜನಪರ ಚಂದ್ರು ಮೊದಲಾದವರು ಭಾಗವಹಿಸಿದ್ದರು.