ತೂಬಗೆರೆ : ಆಸೆಪಟ್ಟು ಟೊಮೆಟೊ ಬೇಸಾಯ ಮಾಡಲು ಮುಂದಾಗಿದ್ದ ರೈತನ ಪಾಡು, ಪರಿಹಾರಕ್ಕಾಗಿ ಅಲೆದಾಡುವಂತಾಗಿದೆ ಕೈಗೆ ಬಂದ ಟೊಮೆಟೊ ಬೆಳೆ ಮೊಳಕೆ ಹೊಡೆಯುತ್ತಿದ್ದು ರೈತ ಮಂಜುನಾಥ್ ಕಂಗಲಾಗಿದ್ದಾನೆ.

ಹೌದು ತಾಲೂಕಿನ ತೂಬಗೆರೆ ಹೋಬಳಿಯ ಕೊಂಡಸಂದ್ರ ಗ್ರಾಮದ ರೈತ ಮಂಜುನಾಥ್ ಸುಮಾರು ಒಂದು ಎಕರೆ ಪ್ರದೇಶದಲ್ಲಿ ಟೊಮೆಟೋ ಬೆಳೆದಿದ್ದು ಟೊಮೆಟೊ ಬೆಳೆ ಕಟಾವಿಗೆ ಬರುವ ಸಮಯ ಹಣ್ಣಿನಲ್ಲಿ ಮೊಳಕೆ ಬರುತ್ತಿದ್ದು ಮಾರುಕಟ್ಟೆಯಲ್ಲಿ ಮೊಳಕೆ ಬಂದಿರುವ ಟೊಮ್ಯಾಟೋ ಹಣ್ಣನ್ನು ವ್ಯಾಪಾರಸ್ಥರು ಕೊಳ್ಳದ ಕಾರಣ ರೈತರು ಕಂಗಾಲಾಗಿದ್ದಾರೆ.

ಸ್ಥಳೀಯ ಕಂಟನಕುಂಟೆ ಸಮೀಪದ ರಂಗನಾಥ ಸೀಡ್ಸ್ ನರ್ಸರಿಯಿಂದ 2071 ಬಯೋ ಸೀಡ್ಸ್ ಎಂಬ ಟೊಮೆಟೊ ಸಸಿ ತಳಿಯನ್ನು ಪಡೆದಿರುವುದಾಗಿ ರೈತರು ತಿಳಿಸಿದ್ದು . ಸಸಿ ನೀಡಿದ್ದ ನರ್ಸರಿ ಹಾಗೂ ಸಂಬಂಧಪಟ್ಟ ಕಂಪನಿಯವರು ಈ ಸಮಸ್ಯೆ ಕುರಿತು ಯಾವುದೇ ರೀತಿಯಾಗಿ ಸ್ಪಂದಿಸುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಈ ಕುರಿತು ರೈತ ಮಂಜುನಾಥ್ ಮಾತನಾಡಿ ಕಳೆದ ಹತ್ತು ವರ್ಷಗಳಿಂದ ಟೊಮೆಟೊ ಬೆಳೆ ಬೆಳೆಯುತ್ತಿದ್ದು. ಈ ಬಾರಿ ಸುಮಾರು ಒಂದು ಎಕರೆ ಪ್ರದೇಶದಲ್ಲಿ 2071 ಸೀಡ್ಸ್ ಟೊಮೊಟೊ ತಳಿಯ ಸಸಿಗಳನ್ನು ನಮ್ಮ ಹೊಲದಲ್ಲಿ ಹಾಕಿದ್ದೇನೆ.ಟೊಮೆಟೊ ಕಾಯಿ ಹಣ್ಣಾಗುವ ಸಂದರ್ಭದಲ್ಲಿ ಮೊಳಕೆ ಬರುತ್ತಿದೆ. ಸಮಯಕ್ಕೆ ಸರಿಯಾಗಿ ಸೂಕ್ತ ರೀತಿಯ ಪೋಷಕಾಂಶ , ಗೊಬ್ಬರ ಒದಗಿಸುತಿದ್ದೇವೆ ಆದರೂ ಈ ರೀತಿಯ ನೂತನ ಸಮಸ್ಯೆ ಕಾಣಿಸಿಕೊಂಡಿದ್ದು ಈ ಕುರಿತು ನರ್ಸರಿ ಹಾಗೂ ಕಂಪನಿಯವರಿಗೆ ಕರೆ ಮಾಡಿದಾಗ ಅವರಿಗೆ ಸಂಬಂಧವಿಲ್ಲ ಎಂಬಂತೆ ಮಾತನಾಡುತ್ತಿದ್ದಾರೆ. ಜೀವನೋಪಾಯಕ್ಕಾಗಿ ವ್ಯವಸಾಯ ಮಾಡುತ್ತಿದ್ದು ನಮಗೆ ದಾರಿ ಕಾಣದಂತಾಗಿದೆ . ಮಾರುಕಟ್ಟೆಯಲ್ಲಿ ಮೊಳಕೆ ಬಂದ ಟೊಮಾಟೊ ಹಣ್ಣುಗಳನ್ನು ವ್ಯಾಪಾರಸ್ಥರು ಖರೀದಿ ಮಾಡಲು ನಿರಾಕರಿಸುತ್ತಿದ್ದು. ಸಂಪೂರ್ಣ ಬೆಳೆ ವ್ಯರ್ಥವಾಗಿದೆ . ಸಾಲ ಮಾಡಿ ಈ ವ್ಯವಸಾಯಕ್ಕೆ ಬಂಡವಾಳ ಹೂಡಿದ್ದೇವೆ ನಮಗೆ ಕಂಪನಿ ಹಾಗೂ ನರ್ಸರಿ ವತಿಯಿಂದ ನಷ್ಟ ಪರಿಹಾರ ಬೇಕಿದೆ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದರು.

ಮನೆಯಲ್ಲಿ ಇದ್ದ ಬೆಲೆಬಾಳುವ ಒಡವೆಗಳನ್ನು ಒತ್ತೆ ಇಟ್ಟು ಸಾಲ ಮಾಡಿ ಟೊಮೆಟೋ ಬೆಳೆ ಬೆಳೆಯಲು ಮುಂದಾಗಿದ್ದೇವೆ ಆದರೆ ಟಮೊಟೊ ಹಣ್ಣುಗಳು ಮೊಳಕೆ ಹೊಡೆಯುತ್ತಿದ್ದು ಮಾರುಕಟ್ಟೆಯಲ್ಲಿ ಮಾರಲು ಸಾಧ್ಯವಾಗುತ್ತಿಲ್ಲ ಈ ಕುರಿತು ಕಂಪನಿಯವರಾಗಲಿ ನರ್ಸರಿಯವರಾಗಲಿ ಸಕಾರಾತ್ಮಕವಾಗಿ ಸ್ಪಂದಿಸದಿರುವುದು ಮತ್ತಷ್ಟು ನೋವು ತಂದಿದೆ. ನಮಗೆ ಆಗಿರುವ ನಷ್ಟಕ್ಕೆ ಪರಿಹಾರ ಕೊಡಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇವೆ ಎಂದು ರೈತ ಮಂಜುನಾಥ್ ಕುಟುಂಬಸ್ಥರು ಒತ್ತಾಯಿಸಿದರು.
ತಾನು ಬೆಳೆದ ಟೊಮೆಟೊ ಬೆಳೆ ಸೂಕ್ತ ಬೆಲೆ ದೊರೆಯುವ ಸಮಯದಲ್ಲಿ ಹೀಗಾಗಿರುವುದು ರೈತ ಮಂಜುನಾಥ್ ಮತ್ತು ಕುಟುಂಬಸ್ಥರಿಗೆ ಆಘಾತವನ್ನುಂಟು ಮಾಡಿದೆ. ಈ ಕುರಿತು ಸಂಬಂಧಪಟ್ಟ ಇಲಾಖೆ ಮತ್ತು ನರ್ಸರಿ ಹಾಗೂ ಕಂಪನಿಯವರು ಈ ಕೂಡಲೇ ಸ್ಥಳಕ್ಕೆ ಧಾವಿಸಿ ನೊಂದ ರೈತ ಕುಟುಂಬಕ್ಕೆ ಸಾಂತ್ವನ ಹೇಳುವ ಜೊತೆಗೆ ನಷ್ಟ ಪರಿಹಾರ ಘೋಷಣೆ ಮಾಡಬೇಕೆಂದು ಸ್ಥಳೀಯ ರೈತರು ತಿಳಿಸಿದ್ದಾರೆ.
