ದೊಡ್ಡಬಳ್ಳಾಪುರ : ಜುಲೈ 7 ಭಾನುವಾರ ಬೆಳ್ಳಿ ರಥದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ನಗರಾದ್ಯಂತ ಮೆರವಣಿಗೆ ಮಾಡುವ ಮೂಲಕ ಅದ್ಧೂರಿಯಾಗಿ 515ನೇ ಕೆಂಪೇಗೌಡ ಜಯಂತೋತ್ಸವ ಆಚರಣೆ ಮಾಡಲಾಗುವುದು ಎಂದು ಕೆಂಪೇಗೌಡ ಜಯಂತೋತ್ಸವ ಸಮಿತಿ ಅಧ್ಯಕ್ಷ ಟಿ. ವಿ ಲಕ್ಷ್ಮೀನಾರಾಯಣ್ ತಿಳಿಸಿದರು.

ನಗರದ ಪಿಎಲ್ಡಿ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಮುದಾಯದ ಎಲ್ಲಾ ಮುಖಂಡರು ಪಕ್ಷಾತೀತವಾಗಿ ಜು. 7ರಂದು ಜಯಂತೋತ್ಸವವನ್ನು ಅದ್ದೂರಿ ಆಚರಿಸಲು ತೀರ್ಮಾನಿಸಲಾಗಿದೆ. ಕಾರ್ಯಕ್ರಮಕ್ಕೆ ಕೆಂಗೇರಿ ಶಾಖಾ ಮಠದ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಜೊತೆಗೆ ಸಮುದಾಯದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಹಧನ ನೀಡಲಾಗುವುದು ಎಂದು ತಿಳಿಸಿದರು.
ಒಕ್ಕಲಿಗರ ಸಂಘದ ನಿರ್ದೇಶಕ ಬಿ.ಮುನೇಗೌಡ ಮಾತನಾಡಿ
ತಾಲ್ಲೂಕಿನ ಎಲ್ಲಾ ಪಂಚಾಯಿತಿಗಳಿಂದ ಸಮುದಾಯದ ಜನತೆ ಆಗಮಿಸಲಿದ್ದು, .ವಿಶೇಷ ರೀತಿಯಲ್ಲಿ ಕಾರ್ಯಕ್ರಮವನ್ನು ಆಚರಿಸುವ ಯೋಜನೆ ಇದೆ ಹಾಗೂ ಸಮುದಾಯದ ಎಲ್ಲಾ ಮುಖಂಡರು ನಗರ ಭಾಗದಲ್ಲಿ ಕೆಂಪೇಗೌಡರ ಪುತ್ಥಳಿ ನಿರ್ಮಾಣಕ್ಕೆ ತೀರ್ಮಾನಿಸಿದ್ದು ಕೆಲವೇ ದಿನಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ ಎಂದರು. ಕೆರೆ ಕಟ್ಟೆ, ದೇವಸ್ಥಾನ, ನಗರ ಅಭಿವೃದ್ಧಿ, ಸೇರಿದಂತೆ ಅನೇಕ ವಿಷಯಗಳಿಗೆ ಪ್ರಾಮುಖ್ಯತೆ ನೀಡಿದ ಹೆಗ್ಗಳಿಕೆ ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ. ಇದು ಕೇವಲ ಒಂದು ಸಮುದಾಯದ ಹಬ್ಬವಲ್ಲ ಸರ್ವರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲಿ:
ರಾಜ್ಯದ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ವಿಚಾರಕ್ಕೆ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ. ಮುನೇಗೌಡ ನಮ್ಮ ಸಮುದಾಯದ ಯಾರಾದರೂ ಮುಖ್ಯಮಂತ್ರಿ ಆದರೆ ಸಂತೋಷವೇ. ದುಡಿಯುವ ಎತ್ತಿಗೆ ಅಧಿಕಾರ ನೀಡಬೇಕೇ ಹೊರತು ಮೇಯುವ ಎತ್ತಿಗಲ್ಲ ಎಂದು ಡಿಸಿಎಂ ಡಿಕೆಶಿ ಪರ ಬ್ಯಾಟ್ ಬಿಸಿದರು. ಕೆಂಪೇಗೌಡ ಜಯಂತೋತ್ಸವ ಸಮಿತಿ ಅಧ್ಯಕ್ಷ ಟಿ ವಿ ಲಕ್ಷ್ಮೀನಾರಾಯಣ್ ಪ್ರತಿಕ್ರಿಯೆ ನೀಡಿ ಡಿಕೆಶಿ ಅವರಿಗೂ ಒಂದು ಅವಕಾಶ ಸಿಗಲಿ. ನಮ್ಮ ಸಮುದಾಯದ ಮುಖಂಡರಾದ ಡಿಕೆ ಶಿವಕುಮಾರ್ ಈಗಾಗಲೇ ರಾಜ್ಯದ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ದೊರೆತರೆ ಸಂತೋಷವೇ ಎಂದರು.

ಸುದ್ದಿಗೋಷ್ಟಿಯಲ್ಲಿ ಕೆಂಪೇಗೌಡ ಆಚರಣಾ ಸಮಿತಿ ಅಧ್ಯಕ್ಷ ಟಿ.ವಿ ಲಕ್ಷ್ಮೀನಾರಾಯಣ ಮಾತನಾಡಿದರು.ಡಿಪಿಎ ಅಧ್ಯಕ್ಷ ಚುಂಚೇಗೌಡ, ಮುಖಂಡರಾದ ಎ. ನರಸಿಂಹಯ್ಯ, ಸತ್ಯನಾರಾಯಣ ಗೌಡ , ಲಕ್ಷ್ಮೀಪತಯ್ಯ, ಮನು, ಶಶಿಧರ್, ಹೆಚ್.ವಿಶ್ವಾಸ್ ಗೌಡ ಹಲವರು ಉಪಸ್ಥಿತರಿದ್ದರು.
