
ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಹೋಬಳಿ ಟಿ. ಹೊಸಹಳ್ಳಿ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತೋತ್ಸವ ಆಚರಣಾ ಸಮಿತಿ ವತಿಯಿಂದ 515 ನೇ ಕೆಂಪೇಗೌಡ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಸಂಸದ ಡಾ. ಕೆ ಸುಧಾಕರ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಭಾರತ ದೇಶದ ಸಾವಿರಾರು ಸಾಮಂತ ರಾಜರ ಪೈಕಿ ಕೆಂಪೇಗೌಡರು ಮಾತ್ರ ಅಜರಾಮರವಾಗಿದ್ದಾರೆ, ನಾಡಿನ ಒಳಿತಿಗಾಗಿ ತನ್ನ ಜೀವನವನ್ನು ಪಣವಿಟ್ಟು ಕೆಲಸ ಮಾಡಿದ ಧೀಮಂತ ನಾಯಕ. ಕೆಂಪೇಗೌಡರು ದಕ್ಷ ಮತ್ತು ದೂರದೃಷ್ಟಿಯಳ್ಳ ಆಡಳಿತಗಾರನಾಗಿದ್ದರು. ಇದರ ಫಲವಾಗಿ ಇಂದು ಬೆಂಗಳೂರು ಬೃಹದಾಕಾರವಾಗಿ ಬೆಳೆದು ವಿಶ್ವ ಭೂಪಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಇಂತಹ ಮಹನೀಯರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಪ್ಪಯ್ಯಣ್ಣನವರು ಮಾತನಾಡಿ, ನಾಡಪ್ರಭು ಕೆಂಪೇಗೌಡರ ಸಾಧನೆ ಇಂದಿನ ಯುವ ಪೀಳಿಗೆಗೆ ಆದರ್ಶವಾಗಲಿ. ಅವರ ಅನನ್ಯ ಸಾಧನೆಯ ಫಲವಾಗಿ ಇಂದು ಸಾವಿರಾರು ಜನ ಬೆಂಗಳೂರು ನಗರದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ ಎಂದು ಬಣ್ಣಿಸಿದರು.
ಇದಕ್ಕೂ ಮೊದಲು ಟಿ.ಹೊಸಹಳ್ಳಿ ಗ್ರಾಮಕ್ಕೆ ಪ್ರಪ್ರಥಮವಾಗಿ ಆಗಮಿಸಿದ ಸಂಸದ ಡಾ ಕೆ ಸುಧಾಕರ್ ರವರಿಗೆ ಊರಿನ ಗ್ರಾಮಸ್ಥರು, ಮಹಿಳೆಯರು ಪೂರ್ಣಕುಂಭದೊಂದಿಗೆ ಭರ್ಜರಿ ಸ್ವಾಗತ ಕೋರಿದರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಂಸದರೊಡನೆ ಫೋಟೋ ಕ್ಲಿಕ್ಕಿಸಿಕೊಂಡು ಆನಂದ ಪಟ್ಟರು.
ತೂಬಗೆರೆ ಪಂಚಾಯಿತಿ ಸದಸ್ಯ ಗಂಗಾಧರ್ (RGPN) ಮಾತನಾಡಿ ಟಿ. ಹೊಸಹಳ್ಳಿ ಗ್ರಾಮದಲ್ಲಿ ಇಂದು ನಾಡಪ್ರಭು ಕೆಂಪೇಗೌಡರ ಜಯಂತೋತ್ಸವವನ್ನು ಅದ್ದೂರಿಯಾಗಿ ಸ್ಥಳೀಯ ಮುಖಂಡರ ಹಾಗೂ ಯುವಕರ ಸಹಕಾರದಿಂದ ಆಚರಿಸಲಾಗಿದೆ. ಹಲವಾರು ದಿನಗಳ ಕನಸು ಇಂದು ನನಸಾಗಿದೆ. ನಮ್ಮಗ್ರಾಮಕ್ಕೆ ಚಿಕ್ಕಬಳ್ಳಾಪುರ ಲೋಕಸಭೆಯ ನೂತನ ಸಂಸದರಾದ ಡಾ. ಕೆ ಸುಧಾಕರ್ ರವರು ಆಗಮಿಸಿ ಶುಭಕೋರಿ ನಮ್ಮ ಕಾರ್ಯಕ್ರಮದ ಸೊಬಗನ್ನು ಮತ್ತಷ್ಟು ಹೆಚ್ಚಿಸಿದೆ. 3ನೇ ವರ್ಷದ ಕೆಂಪೇಗೌಡ ಜಯಂತೋತ್ಸವವನ್ನು ಅತ್ಯಂತ ಸಂತೋಷ ಮತ್ತು ಸಡಗರದಿಂದ ಆಚರಿಸಿದ್ದು ಮುಂದೆ ಈ ಕಾರ್ಯಕ್ರಮವು ಇನ್ನಷ್ಟು ಅದ್ದೂರಿಯಾಗಿ ನೆಡೆಯಲಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಗ್ರಾಮದ ಯುವಕರು ಒಟ್ಟಾಗಿ ಜಾತಿ ಭೇದ ಮರೆತು ಭಾಗಿಯಾಗಿ ಶ್ರಮಿಸಿರುವುದು ಶ್ಲಾಘನಿಯ ಎಂದರು.
ಖ್ಯಾತ ವಕೀಲರು ಹಾಗೂ ಬಿಜೆಪಿ ಪಕ್ಷದ ಯುವ ಮುಖಂಡ ಆರ್. ಪ್ರತಾಪ್ ಮಾತನಾಡಿ ಗ್ರಾಮದ ಯುವಕರು ಒಟ್ಟಾಗಿ ಸೇರಿ ಇಂದು ನಾಡಪ್ರಭು ಕೆಂಪೇಗೌಡರ 515ನೇ ಜಯಂತೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಕಾರ್ಯಕ್ರಮದಲ್ಲಿ ಸಂಸದ ಕೆ. ಸುಧಾಕರ್ ರವರ ಪಾಲ್ಗೊಳ್ಳುವಿಕೆ ಕಾರ್ಯಕ್ರಮದ ಮೆರಗನ್ನು ಮತ್ತಷ್ಟು ಹೆಚ್ಚಿಸಿದೆ. ಯುವಕರ ಹುಮ್ಮಸ್ಸು ಸದಾ ಹೀಗೆ ಇದ್ದು ಗ್ರಾಮದ ಅಭಿವೃದ್ಧಿ ಹೆಚ್ಚಿಸುವ ನಿಟ್ಟಿನಲ್ಲಿ ಸಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ತೆಂಗು ನಾರಿನ ಮಹಾಮಂಡಳಿ ಅಧ್ಯಕ್ಷ ವೆಂಕಟೇಶ್ ಬಾಬು,ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಕುರುವಿಗೆರೆ ನರಸಿಂಹಯ್ಯ, ಬಮೂಲ್ ನಿರ್ದೇಶಕ ಆನಂದ್, ವಕೀಲ ಪ್ರತಾಪ್, ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಪುರುಷೋತ್ತಮ್, ಯುವ ಮುಖಂಡ ಉದಯ ಆರಾಧ್ಯ, ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಪ್ಪ, ರೈತ ಮುಖಂಡ ವಾಸು, ಮುರುಳಿ, ಕೆಂಪೇಗೌಡ ಆಚರಣೆ ಸಮಿತಿಯ ಪದಾಧಿಕಾರಿಗಳಾದ ಆರ್.ಜಿ.ಪಿ.ಎನ್ ಗಂಗಾಧರ್, ಚನ್ನೇಗೌಡ, ಕುಮಾರ್, ಚಂದ್ರಪ್ಪ, ಚನ್ನಕೇಶವ, ಚಂದ್ರು, ಗೌಡ ಮುಂತಾದವರು ಭಾಗವಹಿಸಿದ್ದರು.