ದೊಡ್ಡಬಳ್ಳಾಪುರ : ಎಲ್ಲೆಡೆ ಭ್ರಷ್ಟಾಚಾರ ತುಂಬಿ ಹೋಗಿದ್ದು, ಅಧಿಕಾರಿಗಳ ನಿರ್ಲಕ್ಷವೇ ರೈತರ ಸಮಸ್ಯೆಗಳಿಗೆ ಕಾರಣವಾಗಿದೆ, ರೈತರು ತಮ್ಮ ಹೊಲ ಗದ್ದೆಗಳಿಗೆ ತಲುಪುವ ಮಾರ್ಗಗಳನ್ನು ಕೆಲ ಪ್ರಭಾವಿ ವ್ಯಕ್ತಿಗಳು ಬೇಲಿ ಹಾಕುವ ಮುಖಾಂತರ ರೈತರಿಗೆ ಅಡ್ಡಿ ಉಂಟು ಮಾಡುತ್ತಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೆ ಆರ್ ಎಸ್ ಘಟಕದ ಅಧ್ಯಕ್ಷ ಶಿವಶಂಕರ್ ಆರೋಪಿಸಿದರು.

ಗುರುವಾರ ನಗರದ ತಾಲೂಕು ಕಚೇರಿ ಮುಂಭಾಗ ತೂಬಗೆರೆ ಹೋಬಳಿಯ ಮೇಲಿನ ನಾಯಕರಾಂಡಹಳ್ಳಿ ರೈತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕೆಲ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಪ್ರತಿನಿತ್ಯ ರೈತರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿದ್ದಲ್ಲಿ ಸಮಸ್ಯೆಗಳು ಶೀಘ್ರಗತಿಯಲ್ಲಿ ಪರಿಹಾರ ಗೊಳ್ಳುತ್ತವೆ. ರೈತರ ಬೆಂಬಲಕ್ಕೆ ಕೆಆರ್ಎಸ್ ಪಕ್ಷವು ಸದಾ ಸಿದ್ಧವಿರುತ್ತದೆ. ಇದು ಕೇವಲ ಸಾಂಕೇತಿಕ ಹೋರಾಟ ಮಾತ್ರ ರೈತರ ಸಮಸ್ಯೆ ಬಗೆಯದೇ ಇದ್ದ ಪಕ್ಷದಲ್ಲಿ ಮುಂದೆ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಆಡಳಿತಾತ್ಮಕವಾಗಿ ಪ್ರತಿಯೊಂದು ಕಾರ್ಯಕ್ಕೂ ದೊಡ್ಡಬಳ್ಳಾಪುರ ತಾಲೂಕಿಗೆ ಸೇರುವ ನಮ್ಮ ತೂಬಗೆರೆ ಹೋಬಳಿಗೆ ಶಾಸಕರು ಮಾತ್ರ ದೇವನಹಳ್ಳಿ ವಿಧಾನಸಭಾ ಕ್ಷೇತ್ರದವರು ಹಾಗಾಗಿ ನಮ್ಮ ಸಮಸ್ಯೆ ಯಾರ ಬಳಿ ಹೇಳಿಕೊಳ್ಳಬೇಕೆಂಬುದೇ ಅರ್ಥವಾಗುವುದಿಲ್ಲ ಎಂದು ರೈತರು ತಮ್ಮ ನೋವನ್ನು ಹೇಳಿಕೊಂಡರು.
ರೈತ ಶ್ರೀನಿವಾಸಯ್ಯ ಮಾತನಾಡಿ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ತೂಬಗೆರೆ ಹೋಬಳಿಯ ಮೇಲಿನ ನಾಯಕರಾಂಡಹಳ್ಳಿ ಗ್ರಾಮದಲ್ಲಿ ಸುಮಾರು 100 ಎಕರೆ ಗೋಮಾಳ ಪ್ರದೇಶವನ್ನು ರೈತರಿಗೆ ಹಂಚಿಕೆ ಮಾಡಿದ್ದು ರೈತರು ತಮ್ಮ ಜಾಗಗಳಿಗೆ ತೆರಳಲು ಕಾಲುದಾರಿಯಾಗಲಿ ಬಂಡಿ ದಾರಿಯಾಗಲಿ ಯಾವುದೇ ಮಾರ್ಗದ ವ್ಯವಸ್ಥೆ ಇಲ್ಲ ಈ ಕುರಿತು ಹಲವು ಬಾರಿ ಮನವಿ ಮಾಡಿದ್ದೇವೆ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳದೆ ಇದ್ದ ಪಕ್ಷದಲ್ಲಿ ದನ ಕರುಗಳ ಸಮೇತ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತೂಬಗೆರೆ ಹೋಬಳಿಯ ರೈತ ಮುಖಂಡರು, ಕೆಆರ್ಎಸ್ ಪಕ್ಷದ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
