ದೊಡ್ಡಬಳ್ಳಾಪುರ ( ವಿಜಯಮಿತ್ರ ): ಯುವ ಸಂಚಲನ (ರಿ.) ದೊಡ್ಡಬಳ್ಳಾಪುರ, ನಾಗರಕೆರೆ ಜೀವ ವೈವಿಧ್ಯತೆ ಸಂರಕ್ಷಣಾ ಸಮಿತಿ ಹಾಗೂ ಸಂವಿಧಾನ ಸಾಥಿ ಇವರ ಸಂಯುಕ್ತ ಆಶ್ರಯದಲ್ಲಿ ಸರಹು ಅಭಿಯಾನ (ಅರ್ಕಾವತಿ ನದಿ ಜಲ ಮೂಲಗಳ ಸಂರಕ್ಷಣೆಗಾಗಿ ಸಾಕ್ಷ್ಯಚಿತ್ರ ಪ್ರದರ್ಶನ) ದ ಉದ್ಘಾಟನಾ ಕಾರ್ಯಕ್ರಮಕ್ಕೆ ಶ್ರೀ ಸೂರ್ಯ ಪದವಿ ಪೂರ್ವ ಕಾಲೇಜು ದೊಡ್ಡಬಳ್ಳಾಪುರದಲ್ಲಿ ಸಸಿಗೆ ನೀರರೆಯುವ ಮೂಲಕ ಚಾಲನೆ ನೀಡಲಾಯಿತು.

ನದಿ, ಕೆರೆಗಳು ತುಂಬುವುದಿಲ್ಲ ಅನ್ನುವ ಆಶಯವನ್ನು ಹಿಂದಿನ ಎರಡು ವರ್ಷದ ಮಳೆಯೂ ಸುಳ್ಳಾಗಿಸಿದೆ ಅರ್ಕಾವತಿ ನದಿ ಮತ್ತೆ ಹರಿಯುವ ಭರವಸೆಯನ್ನು ಮೂಡಿಸಿದೆ. ಯುವಜನೆತೆಯೂ ಕೆರೆ,ನದಿ ಗಳ ಸಂರಕ್ಷಣೆಯ ಅರಿವನ್ನು ಹೊಂದಿರಬೇಕಿರುವುದು ಇಂದಿಗೆ ಅತೀ ಅವಶ್ಯಕ ಹಾಗಾಗಿ ಈ ಅಭಿಯಾನವೂ ನಮ್ಮ ಕೆರೆ ನದಿಗಳನ್ನು ಸುಸ್ಥಿರವಾಗಿ ಕಾಪಾಡಿಕೊಳ್ಳುವ ಜವಾಬ್ದಾರಿಯೊಂದಿಗೆ ತಾಲೂಕಿನ ಎಲ್ಲಾ ಕಾಲೇಜುಗಳನ್ನು ತಲುಪಲಿದೆ ಎಂದು ಯುವ ಸಂಚಲನದ ಅಧ್ಯಕ್ಷರಾದ ಚಿದಾನಂದ್ ರವರು ಪ್ರಾಸ್ತಾವಿಕ ನುಡಿಗಳಲ್ಲಿ ತಿಳಿಸಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರಾದ ಆರ್.ಆಂಜನೇಯ ರೆಡ್ಡಿಯವರು ಮಾತನಾಡಿ ನದಿಗಳಿಗೆ ತಾಯಿಯ ಸ್ಥಾನ ಕೊಟ್ಟಿರುವ ಹಾಗೂ ಪೂಜಿಸಬೇಕಾದ ಜನ ಇಂದು ಆ ನೀರನ್ನು ಕಲುಷಿತಗೊಳಿಸಿ ಹಾಳುಮಾಡುತ್ತಿದ್ದಾರೆ ಹಾಗೂ ಅಧಿಕಾರದ ಆಸೆಗೆ ಮುಂದಿನ ಪೀಳಿಗೆಗೆ ಜೋಪಾನ ಮಾಡಬೇಕಿದ್ದ ಪರಿಸರವನ್ನು ಹಣ ಮತ್ತು ಅಧಿಕಾರದ ಆಸೆಗೆ ಬಲಿಕೊಡಲಾಗುತ್ತಿದೆ. ಸಾಮಾಜಿಕ ಜವಾಬ್ದಾರಿಯನ್ನು ಮರೆತದ್ದರಿಂದ ಪರಿಸರ ಹಾಗೂ ಮಾನವನ ಮದ್ಯೆ ಏರ್ಪಟ್ಟಿರುವ ಕಂದಕವನ್ನು ವಿವರಿಸಿದರು. ಸರಹು ಅಭಿಯಾನವು ಇಂದು ಬಿತ್ತುತ್ತಿರುವ ಬೀಜವಾಗಿದ್ದು ಇದರ ಪ್ರತಿಫಲ ಮುಂದಿನ ದಿನಗಳಲ್ಲಿ ದೊರೆಯಲಿದೆ ಹಾಗೂ ಈ ಅಭಿಯಾನವನ್ನು ಬೇರೆ ಬೇರೆ ಜಿಲ್ಲೆಗಳಿಗೂ ವಿಸ್ತರಿಸಿ ಅರಿವನ್ನು ಮೂಡಿಸುವಅಗತ್ಯವಿದೆ ಎಂದು ತಿಳಿಸಿದರು.

ರಾಷ್ಟ್ರಪ್ರಶಸ್ತಿ ಮತ್ತು ರಾಜ್ಯಪ್ರಶಸ್ತಿ ವಿಜೇತ ಕೆ.ಮನೋಹರ್ ಮಾತನಾಡಿ ಸಾಮಾಜಿಕ ಕಳಕಳಿಯ ಚಟುವಟಿಕೆಗಳಲ್ಲಿ ಭಾಗವಹಿಸುವುದೇ ಸಂತಸ ಹಾಗೂ
ಎಲ್ಲಾ ನಾಗರಿಕತೆಗಳ ಉಗಮ ಸ್ಥಾನ ನದಿ ಮೂಲಗಳು ಆ ನದಿ ಮೂಲಗಳು ಸಂರಕ್ಷಣೆಯ ಜವಬ್ದಾರಿ ಪ್ರತಿಯೊಬ್ಬರದು ಆಗಿರಬೇಕು ಹಾಗೂ ಮುಂದಿನ ದಿನಗಳಲ್ಲಿ ಅರ್ಕಾವತಿ ನದಿ ಕುರಿತಂತೆ ಒಂದು ಸಾಕ್ಷ್ಯಚಿತ್ರ ತಯಾರಿಸಿ ಕೊಡುವ ಭರವಸೆ ನೀಡಿದರು.
ನೀರಿನ ಮಹತ್ವ ಹಾಗೂ ಮಿತ ಬಳಕೆ ತುಂಬಾ ಮುಖ್ಯ ಹಾಗೂ ನಾವು ಪರಿಸರಕ್ಕೆ ನಾವೇನು ಕೊಡುತ್ತಿದ್ದೇವೆ ಎಂಬ ಅರಿವಿರಬೇಕು ಮತ್ತು ಮಳೆ ನೀರಿನ ಸಂಗ್ರಹಣೆಯ ಮಹತ್ವದ ಅರಿವನ್ನು ಎಲ್ಲರೂ ಹೊಂದಿರಬೇಕು ಎಂದು ಡಾ.ಇಂದಿರಾ ರವರು ತಿಳಿಸಿದರು.
ಭೂಮಿಯ ಮೇಲೆ ಬಳಸಲು ಯೋಗ್ಯವಿರುವ ಅತಿ ಕಡಿಮೆ ಪ್ರಮಾಣದ ನೀರಿನ್ನು ಈಗಾಗಲೇ ಸಾಕಷ್ಟು ಕಲುಷಿತಗೊಳಿಸಿದ್ದೇವೆ. ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಯುವಜನತೆ ಅಂತರ್ಜಲದ ಅರಿವು ಹಾಗೂ ಪರಿಸರ ಕಾಳಜಿಯನ್ನು ಹೊಂದುವುದು ತೀರಾ ಅಗತ್ಯ ಎಂದು ಶ್ರೀ ಸೂರ್ಯ ಎಜುಕೇಷನ್ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಹೆಚ್.ಜಿ ವಿಜಯಕುಮಾರ್ ರವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಸೂರ್ಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಂ.ಸಿ ಮಂಜುನಾಥ್, ರಾಜಣ್ಣ ಏಕಾಶಿಪುರ, ವೆಂಕಟೇಶ್ ನಾಗದಳ, ಯುವ ಸಂಚಲನ ತಂಡದ ಸದಸ್ಯರಾದ ನವೀನ್, ಗಿರೀಶ್, ದಿವಾಕರ್, ಸರಸ್ವತಿ ಉಪಸ್ಥಿತರಿದ್ದರು.
