
ಲಿಂಗಸಗೂರು: ಪ್ರಾಚ್ಯವಸ್ತುಗಳು ನಮ್ಮ ನಾಡಿನ ಸಾಂಸ್ಕೃತಿಕ ಇತಿಹಾಸವನ್ನು ಸಾರುತ್ತಿದ್ದು ಅಂತಹ ಪಳಿಯುಳಿಕೆಗಳು ವಿನಾಶದ ಅಂಚಿನಲ್ಲಿದ್ದು ಅವುಗಳನ್ನು ರಕ್ಷಣೆ ಮಾಡುವುದರಿಂದ ಮುಂದಿನ ಪೀಳಿಗೆ ಇತಿಹಾಸ ಅರಿಯಲು ಸಹಾಯಕವಾಗುತ್ತದೆ ಎಂದು ಸಹಾಯಕ ಆಯುಕ್ತರಾಗಿದ್ದ ಶಿಂಧೆ ಅವಿನಾಶ್ ಅಭಿಪ್ರಾಯಪಟ್ಟರು .
ಪಟ್ಟಣದ ಸಹಾಯಕ ಆಯುಕ್ತರ ಕಛೇರಿ ಸಮೀಪದ ಕೊಠಡಿಯೊಂದರಲ್ಲಿ ಆಯೋಜನೆ ಮಾಡಲಾಗಿದ್ದ ಪ್ರಾಚ್ಯವಸ್ತುಗಳ ಸಂಗ್ರಹ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನಮ್ಮ ನಾಡಿನ ಇತಿಹಾಸವನ್ನು ಗುರುತಿಸಲು ಹಿಂದಿನ ಪಳಿಯುಳಿಕೆ ನಮಗೆ ಮುಖ್ಯವಾದ ಆಧಾರವಾಗಿದ್ದು ಅಂತಹ ಪಳಿಯುಳಿಕೆಗಳು ವಿನಾಶದ ಅಂಚಿನಲ್ಲಿವೆ ಅಂತಹ ನಶಿಸುತ್ತಿರುವ ಪಳಿಯುಳಿಕೆ ಇತಿಹಾಸದ ಆಕರಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ನೋಡಲು ಸಿಗುವಂತೆ ಮಾಡುವುದು ಉತ್ತಮ ಕೆಲಸವಾಗಿದೆ ಅಂತಹ ಕೆಲಸವನ್ನು ಚಾರಣ ಬಳಗ ಮಾಡುತ್ತಿದ್ದು ಉತ್ತಮವಾಗಿ ನಡೆಯಲಿ ಎಂದು ಹಾರೈಸಿದರು.
ಸ್ಥಳೀಯ ಚಾರಣ ಬಳಗವು ತಾಲೂಕಿನಲ್ಲಿ ವಿನಾಶದ ಅಂಚಿನಲ್ಲಿರುವ ಇತಿಹಾಸದ ಕುರುಹುಗಳನ್ನು ಹುಡುಕಿ ತಂದು ಒಂದೆಡೆ ಸಂಗ್ರಹಿಸುವ ಕೆಲಸಕ್ಕೆ ಮುಂದಾಗಿದ್ದು ಈ ಕಾರ್ಯಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಹಾಯಕ ಆಯುಕ್ತ ಶಿಂಧೆ ಅವಿನಾಶರವರು ತಾಲ್ಲೂಕಿನ ಎಸಿ ಕಛೇರಿಯ ಪಕ್ಕದಲ್ಲಿರುವ ಕೊಠಡಿಯೊಂದನ್ನು ನೀಡಿ ಅದರಲ್ಲಿ ಸಂಗ್ರಹ ಮಾಡಲು ಅವಕಾಶ ನೀಡಿದ್ದಾರೆ, ಆದರೆ ಈ ಕಾರ್ಯವು ಪ್ರಾರಂಭವಾಗುವ ಮುನ್ನವೇ ಅವರಿಗೆ ಬೇರೆಡೆಗೆ ವರ್ಗಾವಣೆಯಾಗಿದ್ದು ಚಾರಣ ಬಳಗವು ಪುನಃ ಅವರನ್ನು ಕರೆಯಿಸಿ ಅವರಿಂದಲೆ ಪ್ರಾಚ್ಯವಸ್ತು ಸಂಗ್ರಹಾಲಯವನ್ನು ಉದ್ಘಾಟನೆ ಮಾಡಿಸಿದ್ದೇವೆ ಎಂದು ಚಾರಣ ಬಳಗದ ರಾಜೇಶ್ ನಾಯಕ ತಿಳಿಸಿದರು.
ಈ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ಆದಿ ಮಾನವನ ಶಿಲಾಕೊಡಲಿಗಳು, ಮಣಿಗಳು, ಗಡಿಗೆಯ ತುಣುಕುಗಳು, ನಂತರದ ಕಾಲದ ಮೂರ್ತಿಗಳು ಶಾಸನಗಳು ಸೇರಿದಂತೆ ವಿವಿಧ ಪರಿಕರಗಳನ್ನು ಸಂಗ್ರಹ ಮಾಡಲಾಗಿದೆ.ನಮ್ಮ ತಂಡ ಪ್ರತಿ ರವಿವಾರ ಸಂಗ್ರಹ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.
ಚಾರಣ ಬಳಗದ ವತಿಯಿಂದ ಸಹಾಯಕ ಆಯುಕ್ತರಿಗೆ ಸನ್ಮಾನ ಮಾಡಲಾಯಿತು .
ಈ ಸಂದರ್ಭದಲ್ಲಿ ರಾಜೇಶನಾಯಕ,ಅಶೋಕನಾಯಕ, ಬಸವರಾಜ ಆನ್ವರಿ, ಸಿದ್ದಾರೂಢ,ಅಮಜಯನಾಐಕ ಶಿವಂಗಿ, ಬಸವರಾಜ ಬೈಲಗುಡ್ಡ,ವೆಂಕೋಬ, ಸಿದ್ದುಸರ್ಜಾಪುರ, ಚಂದ್ರು ಕರಡಕಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.