
ದೊಡ್ಡಬಳ್ಳಾಪುರ:ಮಾಜಿ ಕೇಂದ್ರ ಸಚಿವ ಆರ್.ಎಲ್.ಜಾಲಪ್ಪ ಅವರ ಹಿರಿಯ ಪುತ್ರ ಹಾಗೂ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಅವರ ನಿಧನ ಹಿನ್ನಲೆ ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ಶೈಕ್ಷಣಿಕ ಘಟಕಗಳಲ್ಲಿ ಸೋಮವಾರ ಸಂತಾಪ ಸೂಚಕ ನುಡಿನಮನ ಕಾರ್ಯಕ್ರಮಗಳು ನಡೆದವು.
ಆರ್ಎಲ್ಜೆಐಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ದೇವರಾಜ ಅರಸ್ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಮತ್ತು ನರಸಿಂಹಸ್ವಾಮಿ ಕಿರಿಯ ಸಹೋದರ ಜೆ.ರಾಜೇಂದ್ರ ಪಾಲ್ಗೊಂಡು ಅಶ್ರುತರ್ಪಣ ಸಲ್ಲಿಸಿದರು. ಅವರು ಮಾತನಾಡಿ, ಸಹೃದಯಿ ಮನೋಸ್ಥಿತಿಯ ನರಸಿಂಹಸ್ವಾಮಿ ಅವರು ಎಲ್ಲ ಹಂತಗಳಲ್ಲಿ ಉತ್ತಮ ಮಾರ್ಗದರ್ಶಕರಾಗಿದ್ದರು. ಅವರ ಅಗಲಿಕೆ ನೋವು ತಂದಿದೆ ಎಂದು ಸ್ಮರಿಸಿದರು.
ಎಸ್ಡಿಯುಐಎಂ ಪ್ರಾಧ್ಯಾಪಕ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ಸಾಮಾಜಿಕ ಬದುಕಿನಲ್ಲಿ ಏರಿಳಿತಗಳನ್ನು ಕಂಡರೂ ಜನರ ವಿಶ್ವಾಸವನ್ನು ಪಡೆದಿದ್ದರು. ರಾಜಕಾರಣ ಮತ್ತು ವ್ಯಕ್ತಿಗತ ಬದುಕಿನಲ್ಲಿ ಗೆದ್ದು ಸೋತ ನರಸಿಂಹಸ್ವಾಮಿ ಅವರು, ದೊಡ್ಡಬಳ್ಳಾಪುರದ ಅಭಿವೃದ್ದಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಂತಾಪ:
ಇಲ್ಲಿನ ಆರ್.ಎಲ್.ಜಾಲಪ್ಪ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೆ.ನರಸಿಂಹಸ್ವಾಮಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಮೌನಾಚರಣೆಯ ಮೂಲಕ ಸಂತಾಪ ಸೂಚಿಸಿ, ಶ್ರದ್ದಾಂಜಲಿ ಅರ್ಪಿಸಲಾಯಿತು.
ಪ್ರಾಂಶುಪಾಲ ಪ್ರೊ.ನರಸಿಂಹರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ಪ್ರೊ.ಕೆ.ಆರ್.ರವಿಕಿರಣ್ ನರಸಿಂಹಸ್ವಾಮಿ ಅವರ ರಾಜಕೀಯ ಮತ್ತು ಸಾಮಾಜಿಕ ಬದುಕಿನ ಕುರಿತು ಮಾತನಾಡಿದರು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ವಸತಿ ಶಾಲೆಯಲ್ಲಿ ಶ್ರದ್ದಾಂಜಲಿ:
ಶ್ರೀ ದೇವರಾಜ ಅರಸ್ ಅಂತಾರಾಷ್ಟ್ರೀಯ ವಸತಿ ಶಾಲೆಯ ಆವರಣದಲ್ಲಿ ಪ್ರಾರ್ಥನೆಯ ವೇಳೆ ನರಸಿಂಹಸ್ವಾಮಿ ನುಡಿನಮನ ಆಯೋಜಿಸಲಾಗಿತ್ತು. ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೃತರ ಗೌರವಾರ್ಥ ಮೌನಾಚರಣೆ ನಡೆಯಿತು. ಪ್ರಾಂಶುಪಾಲ ಧನಂಜಯ್ ಅಧ್ಯಕ್ಷತೆ ವಹಿಸಿದ್ದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಜೆ.ಆರ್.ರಾಕೇಶ್, ಮಾನವ ಸಂಪನ್ಮೂಲ ನಿರ್ದೇಶಕ ಬಾಬು ರೆಡ್ಡಿ, ಅಕಾಡೆಮಿಕ್ ಡೀನ್ ಡಾ.ಶ್ರೀನಿವಾಸರೆಡ್ಡಿ, ಉಪಪ್ರಾಂಶುಪಾಲ ಡಾ.ಶಿವಪ್ರಸಾದ್, ಎಇಇ ರಮೇಶ್ಕುಮಾರ್, ಪಿಯು ಕಾಲೇಜು ಪ್ರಾಂಶುಪಾಲ ಮಹಂತೇಶಪ್ಪ, ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ನರಸಿಂಹರೆಡ್ಡಿ, ವಸತಿ ಶಾಲೆ ಪ್ರಾಂಶುಪಾಲ ಧನಂಜಯ್, ಪ್ರೌಢಶಾಲೆ ಮುಖ್ಯಶಿಕ್ಷಕ ಜಿಯಾವುಲ್ಲಾಖಾನ್, ಐಟಿಐ ಪ್ರಾಂಶುಪಾಲ ರವಿಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ದಾದಾಫೀರ್, ವ್ಯವಸ್ಥಾಪಕ ಎಸ್.ಯತಿನ್ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಸಿಬ್ಬಂದಿ ಹಾಜರಿದ್ದರು.