ದೊಡ್ಡಬಳ್ಳಾಪುರ : ರಾಜಘಟ್ಟ ಗ್ರಾಮದ ಮಾರುತಿ ಶಾಲೆಯಲ್ಲಿ 2007ರಿಂದ 2010ನೇ ಸಾಲಿನ ವಿದ್ಯಾರ್ಥಿಗಳು ಗುರು ವಂದನ ಕಾರ್ಯಕ್ರಮವನ್ನು ಆಚರಿಸಿದರು.
ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಶಾಲಾ ದಿನಗಳನ್ನು ನೆನೆದು ಶಿಕ್ಷಕರೊಂದಿಗೆ ಇದ್ದ ಒಡನಾಟವನ್ನು ಹಂಚಿಕೊಂಡರು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಲಾ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಶಾಲೆಯ ಮುಖ್ಯಪಾಧ್ಯಾಯರಾದ ಎಸ್ ಆದಿಶೇಷಪ್ಪ ಮಾತನಾಡಿ ಇಂತಹ ಕಾರ್ಯಕ್ರಮಗಳು ಶಿಕ್ಷಕರಿಗೆ ಮತ್ತಷ್ಟು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಲು ಸಹಕಾರಿಯಾಗಲಿವೆ, ಶಾಲೆ ಎಂದರೆ ಕೇವಲ ಕಲಿಕೆಯ ಸ್ಥಳವಲ್ಲ, ಇದೊಂದು ಜೀವನದ ಸಾರಾಂಶ ಕಲಿಸುವ ಮತ್ತು ಶಿಕ್ಷಕ ಹಾಗೂ ವಿದ್ಯಾರ್ಥಿಗಳ ನಡುವೆ ಉತ್ತಮ ಬಾಂಧವ್ಯ ಬೆಸೆಯುವ ಸ್ಥಳವಾಗಿದೆ. ವಿದ್ಯೆ ಕಲಿತ ನಂತರ ಶಾಲೆಯನ್ನು ಮರೆಯುವ ಕೆಲವರ ನಡುವೆ ಎಲ್ಲಾ ಹಳೆ ವಿದ್ಯಾರ್ಥಿಗಳು ಇಂದಿನ ಗುರುಗುಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ ಎಂದರು.
ಇಂತಹ ಕಾರ್ಯಕ್ರಮಗಳು ಮುಂದಿನ ಪೀಳಿಗೆಗೆ ಹಾಗೂ ಇಂದಿನ ಮಕ್ಕಳಿಗೆ ಮಾರ್ಗದರ್ಶನವಾಗಿದೆ, ಜೊತೆಗೆ ಮಕ್ಕಳಿಗೆ ಶಿಕ್ಷಕರ ಮೇಲೆ ಗೌರವವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದರು.

ಕಾರ್ಯಕ್ರಮ ಕುರಿತು ಹಳೆಯ ವಿದ್ಯಾರ್ಥಿ ರಾಜಘಟ್ಟ ಗಣೇಶ್ ಮಾತನಾಡಿ ಇಂದಿನ ಕಾರ್ಯಕ್ರಮ ಅತ್ಯಂತ ವಿಶೇಷವಾಗಿದೆ, ಕಾರಣ ಜೀವನದ ಪಾಠವನ್ನು ನಾವಿಲ್ಲಿ ಕಲಿತಿದ್ದೇವೆ, ನಮ್ಮ ಶಿಕ್ಷಕರು ಬೋಧನೆ ಅಷ್ಟೇ ಅಲ್ಲದೆ ಜೀವನದ ಸಾರಾಂಶವನ್ನು ತಿಳಿಸಿದ್ದಾರೆ, ನಮ್ಮ ಕಲಿಕೆ ಉತ್ತಮವಾಗಿರಲು, ಇಂದಿನ ಶಿಸ್ತು ಬದ್ಧ ಜೀವನಕ್ಕೆ ಕಾರಣ ನಮ್ಮ ಶಿಕ್ಷಕರು ನೀಡಿದ ಮಾರ್ಗದರ್ಶನ, ಅವರನ್ನು ಗೌರವಿಸಿ ಸನ್ಮಾನಿಸುವುದು ನಮ್ಮ ಕರ್ತವ್ಯವೆಂದು ಭಾವಿಸಿದ್ದೇವೆ . ಈ ಗುರುವಂದನಾ ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲಾ ನನ್ನ ಮಿತ್ರರಿಗೆ ಹೃದಯಪೂರ್ವಕ ಅಭಿನಂದನೆ ತಿಳಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಮಾರುತಿ ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
