ದೊಡ್ಡಬಳ್ಳಾಪುರ: ಕೃಷಿ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ದೊಡ್ಡಬಳ್ಳಾಪುರ ಕೃಷಿಕ ಸಮಾಜದ ಸ್ಥಾನಗಳಿಗೆ ಚುನಾವಣೆ ನಡೆಯಿತು.ನೂತನ ಅಧ್ಯಕ್ಷ ಮುರುಳಿಧರ್.ಆರ್, ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ದೊಡ್ಡಬಳ್ಳಾಪುರ ಕೃಷಿಕ ಸಮಾಜದ ಅಧ್ಯಕ್ಷ ಸೇರಿದಂತೆ ಎಲ್ಲಾ ಸ್ಥಾನಗಳಿಗೆ ಆಯ್ಕೆಯಾದವರನ್ನು ಹೊರತುಪಡಿಸಿ ಬೇರೆಯವರು ತಮ್ಮ ನಾಮಪತ್ರಗಳನ್ನು ಸಲ್ಲಿಸದ ಹಿನ್ನೆಲೆ ಚುನಾವಣಾಧಿಕಾರಿಯಾಗಿದ್ದ ಸಹಾಯಕ ಕೃಷಿ ನಿರ್ದೇಶಕರು ಅವಿರೋಧ ಆಯ್ಕೆ ಪ್ರಕಟಿಸಿದ್ದಾರೆ.
ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳ ಅವಧಿ 5 ವರ್ಷಗಳಾಗಿದ್ದು, 2029-30ನೇ ಸಾಲಿನಲ್ಲಿ ಇವರ ಅವಧಿ ಅಂತ್ಯವಾಗಲಿದೆ .
ಈ ಕುರಿತು ನೂತನ ಅಧ್ಯಕ್ಷ ಆರ್.ಮುರುಳಿಧರ್ ಮಾತನಾಡಿ ಅಧ್ಯಕ್ಷನಾಗಿ ಕೃಷಿಕ ಸಮಾಜಕ್ಕೆ ಉತ್ತಮ ಕಟ್ಟಡ ನಿರ್ಮಾಣ ಮಾಡುವುದು ನನ್ನ ಮುಖ್ಯ ಉದ್ದೇಶ ವಾಗಿದೆ,ಈ ಕುರಿತು ಜಿಲ್ಲಾ ಉಸ್ತುವಾರಿ ಮಂತ್ರಿ ಹಾಗೂ ಆಹಾರ ಸಚಿವರಾದ ಕೆ.ಎಚ್.ಮುನಿಯಪ್ಪ ಅವರ ಬಳಿ ಮನವಿ ಮಾಡಲಾಗುವುದು. ಅಂತೆಯೇ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ನೇರವಾಗಿ ರೈತರಿಗೆ ತಲುಪಿಸುವ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಉಪಾಧ್ಯಕ್ಷರಾದ ಅರಸೇಗೌಡ.ಕೆ.ಎಚ್ ಮಾತನಾಡಿ, ಹಿರಿಯರ ಮಾರ್ಗದರ್ಶನಂತೆ ನಾನು ಕೆಲಸ ಮಾಡುತ್ತೇನೆ, ಅವರ ಹೆಸರಿಗೆ ಯಾವುದೇ ರೀತಿಯ ಚ್ಯುತಿ ಬಾರದಂತೆ ಕೆಲಸ ಮಾಡುವೆ, ಸ್ವತಃ ನಾನು ರೈತನಾಗಿ ರೈತರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರಿವು ನನಗೆ ಇರುವುದರಿಂದ ಕೃಷಿ ಇಲಾಖೆಯಿಂದ ರೈತರಿಗೆ ಸಿಗಬೇಕಾದ ಎಲ್ಲ ಸವಲತ್ತುಗಳನ್ನು ಕೊಡಿಸುವ ಕೆಲಸ ಮಾಡುವುದಾಗಿ ಹೇಳಿದರು.
ಕಾಂಗ್ರೆಸ್ ಮುಖಂಡರಾದ ರಂಗಪ್ಪ ಮಾತನಾಡಿ, ಕೆಲವು ದುಷ್ಟ ಶಕ್ತಿಗಳು ಕೃಷಿ ಸಮಾಜಕ್ಕೆ ಚುನಾವಣೆಯಾಗದಂತೆ ತಡೆದಿದ್ದರು, ಈಗ ಎಲ್ಲ ಪಕ್ಷದವರನ್ನು ಹೊಂದಾಣಿಕೆ ಮಾಡಿಕೊಂಡು ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಪರಸ್ಪರ ಹೊಂದಾಣಿಕೆ ಮೂಲಕ ಅಧಿಕಾರವನ್ನ ಹಂಚಿಕೆ ಮಾಡಲಾಗಿದ್ದು, ಮುಂದಿನ ಅವಧಿಯಲ್ಲೂ ಅಧಿಕಾರ ಹಂಚಿಕೆ ಮಾಡಿಕೊಂಡು ರೈತರ ಪರವಾಗಿ ಕೆಲಸ ಮಾಡುವ ಕೆಲಸ ಮಾಡುವುದಾಗಿ ತಿಳಿಸಿದರು.
ಕಾಂಗ್ರೆಸ್ ಮುಖಂಡರಾದ ಆರ್.ವಿ.ಮಹೇಶ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರೈತರ ಪರವಾಗಿದ್ದು, ರೈತರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಜನೆಗಳು ಜಾರಿಗೆ ಬರಲಿದ್ದು, ಅರ್ಹ ರೈತರನ್ನು ಗುರಿತಿಸಿ ಯೋಜನೆಯ ಲಾಭ ಸಿಗುವ ಪ್ರಮಾಣಿಕ ಕೆಲಸ ಮಾಡುವುದ್ದಾಗಿ ಹೇಳಿದರು.
ಅವಿರೋಧವಾಗಿ ಆಯ್ಕೆಯಾದ ದೊಡ್ಡಬಳ್ಳಾಪುರ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀನಿವಾಸ, ಎ.ರವೀಂದ್ರ, ಪಿ.ನಾಗರಾಜು, ಮಂಜುನಾಥ್, ಎಂ.ಗೋಪಾಲರೆಡ್ಡಿ, ಜಿ.ಆರ್.ಅಶೋಕ್, ಆರ್.ಕೃಷ್ಣಮೂರ್ತಿ,ಟಿ.ವಿ.ರವಿಕುಮಾರ್, ಆರ್.ಜಯರಾಮಯ್ಯ, ಕೆ.ನರಸಿಂಹಯ್ಯರವರನ್ನು ಅಭಿನಂದಿಸಲಾಯಿತು.
ಈ ವೇಳೆ ಅಧ್ಯಕ್ಷ ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ, ಜಿಲ್ಲಾ ಪಂಚಾಯತಿ ಸದಸ್ಯ ಅರವಿಂದ್, ದೇವನಹಳ್ಳಿ ರವಿ ಕುಮಾರ್, ಕಾಂಗ್ರೆಸ್ ಮುಖಂಡ ರವಿ ಸಿದ್ದಪ್ಪ, ಭೂ ಮಂಜೂರಾತಿ ಸದಸ್ಯ ಶ್ರೀಧರ್.ಜಿ.ಕೆ ಗಂಗಸಂದ್ರ , ವಕೀಲರಾದ ಆರ್ ವಿ ಶಿವಕುಮಾರ್ ಸೇರಿದಂತೆ ತಾಲೂಕಿನ ಮುಖಂಡರು ಇದ್ದರು.

