ಶಿಗ್ಗಾವಿ : ಸಣ್ಣಪ್ರಮಾಣದಲ್ಲಿ ಅದು ವ್ಯಾಪಾರ-ವಹಿವಾಟಿಗೆ ತೆರೆದುಕೊಂಡಿದ್ದ ಕೇಂದ್ರ ಮುಂದಿನ ಒಂದೆರಡು ತಿಂಗಳಿನಲ್ಲಿ ಬೀಜ, ಗೊಬ್ಬರಗಳು ಸೇರಿದಂತೆ ಪೂರ್ಣಪ್ರಮಾಣದ ವಹಿವಾಟು ಸಾಧ್ಯವಾಗಲಿದೆ ಎಂದು ಕೆ ಆರ್ ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣ ರೆಡ್ಡಿ ತಿಳಿಸಿದ್ದಾರೆ.
ಶಿಗ್ಗಾವಿಯಲ್ಲಿ ನೂತನ “KRS ರೈತ ಸಮೃದ್ಧಿ ಕೇಂದ್ರ”ವನ್ನು ಉದ್ಘಾಟಿಸಿ ಮಾತನಾಡಿದ ಅವರು ಜನಸಾಮಾನ್ಯರು ನ್ಯಾಯ, ನೀತಿ, ನೈತಿಕತೆ, ಕಾಯಕದಿಂದ ಬದುಕುವುದೇ ದೊಡ್ಡ ಸವಾಲಾಗಿರುವ ಇಂದಿನ ದಿನಗಳಲ್ಲಿ ಪರ್ಯಾಯ ಮತ್ತು ಸುಸ್ಥಿರ ಮಾರ್ಗಗಳ ಹುಡುಕಾಟದ ಭಾಗವಾಗಿ ಇದನ್ನು ಆರಂಭಿಸಲಾಗಿದೆ.
ವ್ಯವಸ್ಥೆಯೇ ಭ್ರಷ್ಟವಾಗಿರುವ ಮತ್ತು ದುಷ್ಟವಾಗಿರುವ ಈ ಸಂದರ್ಭದಲ್ಲಿ ಗ್ರಾಮೀಣ ಭಾಗದ ಬಡವರು ಮತ್ತು ರೈತರು ಅನ್ಯಾಯಕ್ಕೆ ಒಳಗಾಗದಿರುವುದು ಹೇಗೆ ಮತ್ತು ನ್ಯಾಯವಾಗಿ ಜೀವನ ಕಟ್ಟಿಕೊಳ್ಳುವ ಮಾರ್ಗಗಳೇನು ಎನ್ನುವ ನಿಟ್ಟಿನಲ್ಲಿ ಮಾದರಿಗಳನ್ನು ಯಾರಿಗಲ್ಲದಿದ್ದರೂ KRS ಪಕ್ಷದ ಸೈನಿಕರಿಗೆ ತೋರಿಸುವ ಕೆಲಸ ಮುಂದಿನ ದಿನಗಳಲ್ಲಿ ಇದರ ಮೂಲಕ ಆಗಲಿದೆ. ನಾವು ಶೀಘ್ರದಲ್ಲಿಯೇ ಆರಂಭಿಸಲಿರುವ ರೈತ ಉತ್ಪಾದಕ ಸಂಸ್ಥೆಗೆ(FPO) ಚಾಲಕ ಶಕ್ತಿಯಾಗಿ ಇದು ಕಾರ್ಯನಿರ್ವಹಿಸಲಿದೆ.
ವ್ಯಾಪಾರ, ವ್ಯವಹಾರ, ಸ್ವಂತಉದ್ದಿಮೆ, ಸ್ವಉದ್ಯೋಗ ಮಾಡಬಯಸುವ KRS ಪಕ್ಷದ ಕಾರ್ಯಕರ್ತರು, ಅದರಲ್ಲಿಯೂ ಯುವಕಾರ್ಯಕರ್ತರು, ಇಲ್ಲಿಗೆ ಬಂದು ವ್ಯಾಪಾರದ ಅನುಭವ ಪಡೆಯಬಹುದು. ಜೊತೆಗೆ ಜನಸಾಮಾನ್ಯರ ಜೊತೆಗೆ ಸಂಪರ್ಕ ಏರ್ಪಡಿಸಿಕೊಂಡು ಪ್ರಾಮಾಣಿಕ ರಾಜಕಾರಣ ಮಾಡುವುದು ಹೇಗೆ ಎನ್ನುವುದನ್ನೂ ಅರಿಯಬಹುದು. ಬನ್ನಿ ಎಂದು ಈ ಮೂಲಕ ಆಹ್ವಾನಿಸುತ್ತಿದ್ದೇನೆ. ಎಂದಿನಂತೆ ಉಚಿತ ಊಟ ಮತ್ತು ವಸತಿ ಸೌಲಭ್ಯ ಇರುತ್ತದೆ.
ಮುಂದಿನ ದಿನಗಳಲ್ಲಿ KRS ಪಕ್ಷದ ಆಸಕ್ತ ಸೈನಿಕರಿಗೆ ಉದ್ಯಮಶೀಲತೆ ಕುರಿತು ಇಲ್ಲಿ ತರಬೇತಿ ಕಾರ್ಯಾಗಾರಗಳನ್ನೂ ನಡೆಸಲಾಗುದು ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಕೆ ಆರ್ ಎಸ್ ಪಕ್ಷದ ಸೇನಾನಿಗಳು, ಪ್ರಮುಖರು ಉಪಸ್ಥಿತರಿದ್ದರು.

