ತಮಿಳುನಾಡು ಸರ್ಕಾರ ರುಪಾಯಿ ಚಿಹ್ನೆಯನ್ನು ತಮಿಳಿನಲ್ಲಿಯೇ ಸಿದ್ಧಪಡಿಸಿ ಅದನ್ನು ಬಳಸಲು ಆರಂಭಿಸಿದೆ ಈ ಬೆಳವಣಿಗೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ ಸ್ವಾಗತಿಸಿದ್ದಾರೆ.
ತಮಿಳುನಾಡು ಸರ್ಕಾರದ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರದ ಮುಂಗಡಪತ್ರವನ್ನು ಓದುವ ಒಂದು ದಿನ ಮೊದಲು ತಮಿಳುನಾಡು ಸರ್ಕಾರ ತಮಿಳು ಭಾಷೆಯ ” ರೂ ” ರುಪಾಯಿ ಚಿಹ್ನೆಯನ್ನು ಬಳಸುವ ನಿರ್ಧಾರ ಕೈಗೊಂಡಿದ್ದು. ತಮಿಳುನಾಡಿನಲ್ಲಿ ತಮಿಳು ಲಿಪಿಯ ರೂಪಾಯಿ ಸಂಕೇತವನ್ನು ಬಳಸುವ ಗಟ್ಟಿಯಾದ ತೀರ್ಮಾನ ಮಾಡಿದ್ದಾರೆ.
ಹೌದು ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ…ತಮಿಳಿಗರ ಸ್ವಾಭಿಮಾನದ ರಾಜಕಾರಣಕ್ಕೆ ಇದು ಸಾಕ್ಷಿ. ತಮಿಳಿಗರು ತಮ್ಮ ಮೇಲೆ ಇನ್ನೊಂದು ನುಡಿ ಹೇರಿಕೆಯಾಗುವುದನ್ನು ಎಂದೂ ಸಹಿಸೋದಿಲ್ಲ.ತಮಿಳುನಾಡು ಸರ್ಕಾರದ ಈ ಸ್ವಾಭಿಮಾನದ ನಡೆಯ ನಿರ್ಧಾರವನ್ನು ಅನುಸರಿಸಿ ಕರ್ನಾಟಕ ಸರ್ಕಾರವೂ ರುಪಾಯಿ ಚಿಹ್ನೆಯನ್ನು ಕನ್ನಡಲಿಪಿಗೆ ಅನುಗುಣವಾಗಿ ಬದಲಾಯಿಸಬೇಕು. ಕರ್ನಾಟಕದಲ್ಲಿ ಅದನ್ನೇ ಬಳಕೆಗೆ ತರಬೇಕು. ನಮ್ಮ ಅಸ್ಮಿತೆ ಇರುವುದು ಕನ್ನಡ ಲಿಪಿಯಲ್ಲಿ, ಇನ್ಯಾವುದೋ ದೇವನಾಗರಿ ಲಿಪಿಯಲ್ಲಲ್ಲ. ಹೀಗಾಗಿ ರುಪಾಯಿಗೊಂದು ಕನ್ನಡದ ಚಿಹ್ನೆ ಸಿದ್ಧಪಡಿಸಬೇಕು ಎಂದಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಎಲ್ಲ ಪರೀಕ್ಷೆಗಳೂ ಕನ್ನಡದಲ್ಲೇ ನಡೆಯಬೇಕು ಎಂದು ಇತ್ತೀಚಿಗಷ್ಟೇ ಆಗ್ರಹಿಸಿದ್ದೆ. ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾದ್ದರಿಂದ ಕರ್ನಾಟಕ ಸರ್ಕಾರದ ಸೇವೆಗೆ ನೇಮಕ ಆಗುವ ಅಧಿಕಾರಿಗಳು ಕನ್ನಡವನ್ನೇ ಬಳಸಬೇಕು, ಕನ್ನಡದ ಜ್ಞಾನವೇ ಅವರಿಗೆ ಅತಿಮುಖ್ಯ ಅರ್ಹತೆ. ಹೀಗಾಗಿ ಕನ್ನಡದಲ್ಲೇ ಕೆಪಿಎಸ್ಸಿ ನಡೆಸುವ ಪರೀಕ್ಷೆಗಳು ಮತ್ತು ಕರ್ನಾಟಕ ಸರ್ಕಾರದ ಸೇವೆಗೆ ನಡೆಯುವ ಇತರ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳೂ ಕನ್ನಡದಲ್ಲೇ ನಡೆಯಬೇಕು ಎಂದು ನಾನು ಹೇಳಿದ್ದೆ.ವಿಶೇಷವೆಂದರೆ ನನ್ನ ಆಗ್ರಹವನ್ನು ಮರಾಠಿ ನುಡಿಗೆ ಅನ್ವಯಿಸಿ ಮಹಾರಾಷ್ಟ್ರ ಸರ್ಕಾರ ಕಾಯ್ದೆ ರೂಪಿಸಿ ಜಾರಿ ಮಾಡಿದೆ. ಮಹಾರಾಷ್ಟ್ರ ಸರ್ಕಾರದ ಸೇವೆಗೆ ಸಿಬ್ಬಂದಿ ನೇಮಕಕ್ಕೆ ನಡೆಯುವ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳನ್ನು ಮರಾಠಿಯಲ್ಲೇ ನಡೆಸುವ ಕಾಯ್ದೆ ಜಾರಿಯಾಗಿದೆ. ಇದರ ಪರಿಣಾಮವಾಗಿ ಮರಾಠಿ ಮಾಧ್ಯಮದ ಓದುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತೆ. ಮರಾಠಿ ನುಡಿ ಬಳಸುವವರ ಸಂಖ್ಯೆಯೂ ಹೆಚ್ಚಾಗುತ್ತದೆ. ಈ ನಿರ್ಧಾರಕ್ಕೆ ಮಹಾರಾಷ್ಟ್ರ ಸರ್ಕಾರವನ್ನು ನಾನು ಅಭಿನಂದಿಸುತ್ತೇನೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರವೂ ಕೂಡಲೇ ಸೂಕ್ತ ಕಾನೂನು ರೂಪಿಸಿ ಕೆಪಿಎಸ್ಸಿ ಸೇರಿದಂತೆ ಕರ್ನಾಟಕ ಸರ್ಕಾರದ ಸೇವೆಗೆ ನೇಮಕವಾಗುವ ಅಧಿಕಾರಿ, ನೌಕರರ ಆಯ್ಕೆಗೆ ನಡೆಯುವ ಎಲ್ಲ ಪರೀಕ್ಷೆಗಳನ್ನೂ ಕನ್ನಡದಲ್ಲೇ ನಡೆಸುವ ತೀರ್ಮಾನ ಕೈಗೊಳ್ಳಬೇಕು ಎಂದು ಮತ್ತೊಮ್ಮೆ ಆಗ್ರಹಿಸುತ್ತೇನೆ. ತಮ್ಮ ನುಡಿ, ಸಂಸ್ಕೃತಿಯನ್ನ ರಕ್ಷಿಸಲು ನೆರೆಯ ರಾಜ್ಯಗಳು ಕೈಗೊಳ್ಳುತ್ತಿರುವ ತೀರ್ಮಾನಗಳನ್ನು ನೋಡಿಯಾದರೂ ರಾಜ್ಯ ಸರ್ಕಾರ ಕನ್ನಡ ಅಸ್ಮಿತೆ ಉಳಿಸಲು ಉತ್ತಮ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

