
ವಿಧಾನ ಸೌಧ : ಹಸಿರುಕ್ರಾಂತಿ ಹರಿಕಾರ, ರಾಷ್ಟ್ರ ನಾಯಕ, ಮಾಜಿ ಉಪ ಪ್ರಧಾನಿ ಸಮರ್ಥ ಸಂಸದೀಯ ಪಟು, ಸ್ವಾತಂತ್ರ್ಯ ಹೋರಾಟಗಾರ ಮತ್ತು ಹಿರಿಯ ದಲಿತ ಚೇತನ ಡಾ. ಬಾಬು ಜಗಜೀವನ್ ರಾಮ್ ರವರ 118ನೇ ಜನ್ಮ ದಿನೋತ್ಸವದ ಶುಭಾಷಯಗಳನ್ನು ಕೋರುತ್ತಾ ಮಾತನಾಡಿದರು.
ಬಾಬೂಜಿಯವರು ಇತರರಂಗಗಳಲ್ಲಿ ಸೇವೆ ಸಲ್ಲಿಸಿರುವಂತೆ “ಭಾರತ ಸಂವಿಧಾನ ರಚನೆ ಸಂಬಂಧವಾಗಿಯೂ ಅಷ್ಟೇ ಸಮರ್ಥವಾಗಿ ಸೇವೆ ಸಲ್ಲಿಸಿ, ಸಂವಿಧಾನ ಶಿಲ್ಪಿಗಳಲ್ಲಿ ಒಬ್ಬರಾಗಿದ್ದರು, ಸಂವಿಧಾನ ರಚನಾ ಸಮಿತಿಗಳಲ್ಲಿ ಬಾಬೂಜಿಯವರು ಕೆಲಸ ನಿರ್ವಹಿಸಿದ್ದಾರೆ.
ಜಗಜೀವನ್ ರಾಮ್ 1936 ರಿಂದ 1986 ರವರೆಗೆ ನಿರಂತರವಾಗಿ ಸಂಸತ್ತಿನ ಸದಸ್ಯರಾಗಿದ್ದರು ಮತ್ತು ಇದು ವಿಶ್ವ ದಾಖಲೆಯಾಗಿದೆ. ಭಾರತದಲ್ಲಿ ಅತಿ ಹೆಚ್ಚು ಕಾಲ (30 ವರ್ಷಗಳು) ಕ್ಯಾಬಿನೆಟ್ ಮಂತ್ರಿಯಾಗಿ ಸೇವೆ ಸಲ್ಲಿಸಿದ ಮತ್ತೊಂದು ದಾಖಲೆಯನ್ನೂ ಅವರು ಹೊಂದಿದ್ದಾರೆ.
ಬಾಬೂಜಿ ಕಾರ್ಮಿಕ ಮಂತ್ರಿಯಾಗಿದ್ದಾಗ ಕನಿಷ್ಠ ಕೂಲಿ ಮತ್ತು ಗೊತ್ತುವಳಿ ಕಾಯ್ದೆಯನ್ನು ಜಾರಿಗೆ ಕೊಟ್ಟರು ಮತ್ತು ಕಾರ್ಮಿಕ ಭವಿಷ್ಯನಿಧಿ, ಇ.ಎಸ್.ಐ. ಆಸ್ಪತ್ರೆ ಸೌಲಭ್ಯ, ಕಾರ್ಮಿಕರ ಮಕ್ಕಳ ಶಿಕ್ಷಣ ಮತ್ತು ಮದುವೆಗೆ ಧನಸಹಾಯ ಮುಂತಾದ ಅನುಕೂಲಗಳನ್ನು ಕಲ್ಪಿಸಿದರು.
ಬಾಬೂಜಿ ರವರು ಆಹಾರ ಮತ್ತು ಕೃಷಿ ಮಂತ್ರಿಯಾಗಿದ್ದಾಗ ದೇಶದಲ್ಲಿ ಆಹಾರ ಕೊರತೆಯನ್ನು ಮನಗಂಡು ವ್ಯವಸಾಯ ಪದ್ಧತಿಯಲ್ಲಿ ಅಮೂಲಾಗ್ರ ಬದಲಾವಣೆ ತಂದರು. ಕಡಿಮೆ ಬೆಲೆ ಮತ್ತು ಉಚಿತವಾಗಿ ಹೆಚ್ಚು ಇಳುವರಿ ತರುವಂಥ ಬೀಜದ ಕಾಳುಗಳು, ರಸಗೊಬ್ಬರ, ಕೀಟನಾಶಕಗಳು ಮತ್ತು ಆಧುನಿಕ ಉಪಕರಣಗಳನ್ನು ರೈತರಿಗೆ ವಿತರಿಸಿ, ರಾಷ್ಟ್ರದ ಆಹಾರ ಉತ್ಪತ್ತಿಯಲ್ಲಿ ಮುನ್ನಡೆ ಕಾಣುವಂತೆ ಮಾಡಿದ್ದರಿಂದ ಬಾಬೂಜಿಯವರನ್ನು “ಹಸಿರು ಕ್ರಾಂತಿಯ ಹರಿಕಾರ” ನೆಂದು ರಾಷ್ಟ್ರದ ಮಹಾಜನತೆ ಗೌರವದಿಂದ ಕರೆಯಿತು ಎಂದರು.
ಬಾಬೂಜಿ ರಕ್ಷಣಾ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ಸೈನ್ಯದಲ್ಲಿ ಜಾತಿ ಮತ್ತು ಪ್ರಾದೇಶಿಕ ಪ್ರಜ್ಞೆ ಮಾಯವಾಗಿ, ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಯ ಭಾವನೆ ಬೆಳೆಯುವಂತಾಯಿತು ದೇಶದ ಬಡವರ ಹಸಿವು ನೀಗಿಸುವ ಉದ್ದೇಶದಿಂದ FCI (Food Corporation of India) ಸ್ಥಾಪಿಸಿ ದೇಶದ ಅಸಂಖ್ಯಾತ ಹಸಿದವರಿಗೆ “ಅನ್ನದಾತ” ಆದರು.
ಡಾ. ಬಿ.ಆರ್. ಅಂಬೇಡ್ಕರ್ ರವರು ಒಬ್ಬ ಸಮಾಜ ಸುಧಾಕರಾಗಿ, ಸಮ ಸಮಾಜ ನಿರ್ಮಾಣ ಮಾಡಬೇಕೆನ್ನುವ ಅವರ ಹೋರಾಟ ಹಾಗೂ ಸಂವಿಧಾನದಲ್ಲಿ ನೀಡಿದ ಚಿಂತನೆಗಳನ್ನು ಡಾ. ಬಾಬು ಜೀವನರಾಮ್ ರವರು ಅವರ ಅಧಿಕಾರ ಅವಧಿಯಲ್ಲಿ ಜಾರಿಗೆ ತರಲು ಅಹರ್ನಹಿಸಿ ಶ್ರಮಿಸಿದರು. ಈ ಎರಡು ಚೇತನಗಳು ದಲಿತ ಸಮುದಾಯದ ಎರಡು ಕಣ್ಣುಗಳು ಇದ್ದಹಾಗೇ, ಇವರ ಚಿಂತನೆ, ಹೋರಾಟದ ಫಲವಾಗಿ, ತಳ ಸಮುದಾಯಗಳು ತಲೆ ಎತ್ತಿ ನಿಲ್ಲುವಂತಾಗಿ ಸಮಾಜದಲ್ಲಿ ಸಂವಿಧಾನತ್ಮಕ ಗೌರವ ಸ್ಥಾನ ಮಾನಗಳು ಲಭಿಸುವಂತಾಗಿದೆ ಎಂದರು.
ಡಾ. ಬಾಬು ಜಗಜೀವನರಾಮ್ ರವರು ವಿದ್ವತ್, ತಳ ಸಮುದಾಯಗಳ ಬಗ್ಗೆ ಇದ್ದ ಅವರ ಕಾಳಜಿ ಹಾಗೂ ಆಡಳಿತದ ದಕ್ಷತೆಯನ್ನು ಕಂಡು ಮಹಾತ್ಮ ಗಾಂಧಿಜಿಯವರು ಡಾ. ಬಾಬು ಜಗಜೀವನರಾಮ್ ಅವರನ್ನು “ಭಾರತದ ಪುಟವಿಟ್ಟ ಬಂಗಾರ” ಎಂದು ಸಂಭೋದಿಸಿದರು.
ಈ ಸಂದರ್ಭದಲ್ಲಿ ಉಪ ಮುಖ್ಯ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ , ವಿಧಾನ ಪರಿಷತ್ ನ ಸಭಾಪತಿ ಬಸವರಾಜ್ ಹೊರಟ್ಟಿ, ಸಚಿವರಾದ ಪರಮೇಶ್ವರ್,ಮಹದೇವಪ್ಪ,ಶಾಸಕ ಬಸವಂತಪ್ಪ,ಮುಖ್ಯ ಕಾರ್ಯದರ್ಶಿ ಶಾಲನಿ ರಜನೀಶ್,ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್,ಆಯುಕ್ತರಾದ ರಾಕೇಶ್ ಕುಮಾರ್ ಉಪಸ್ಥಿತರಿದ್ದರು.