
ದೊಡ್ಡಬಳ್ಳಾಪುರ: ತೂಬಗೆರೆ ಹಲಸು ತನ್ನ ಬಣ್ಣ, ವಾಸನೆ ಮತ್ತು ರುಚಿಯಿಂದ ವಿಶೇಷವಾಗಿದ್ದು, ಈಗ ರಾಷ್ಟ್ರಮಟ್ಟದಲ್ಲಿ ಪೇಟೆಂಟ್ ಪಡೆದು ಪ್ರಸಿದ್ಧಿ ಪಡೆದಿವೆ.
ಕೇಂದ್ರ ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ ಬರುವ ‘ಸಸ್ಯ ಪ್ರಭೇದಗಳು ಮತ್ತು ರೈತರ ಹಕ್ಕುಗಳ ಸಂರಕ್ಷಣಾ ಪ್ರಾಧಿಕಾರ’ (ಪಿಪಿವಿಎಫ್ಆರ್ಎ) ದಿಂದ ಇತ್ತೀಚಿಗೆ ತೂಬಗೆರೆ ಸುತ್ತಮುತ್ತಲಿನ ಹಲಸು ತಳಿಗಳಿಗೆ, ಹಲಸಿನ ಹಣ್ಣಿನಲ್ಲೇ ಉತ್ಕೃಷ್ಟ ಎಂದು ಗುರುತಿಸಿರುವ ಹಕ್ಕು ಸ್ವಾಮ್ಯ (ಪೇಟೆಂಟ್) ಸಿಕ್ಕಿದೆ.
ಈ ನಿಟ್ಟಿನಲ್ಲಿ ತೂಬಗೆರೆ ಹಲಸು ಬೆಳೆಗಾರರ ಸಂಘ, ಜಿಲ್ಲಾ ತೋಟಗಾರಿಕೆ ಇಲಾಖೆ ಮತ್ತು ಭಾ.ಕೃ.ಅ.ಪ – ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಇವರುಗಳ ಸಹಯೋಗದೊಂದಿಗೆ “ಹಕ್ಕು ಸ್ವಾಮ್ಯ ಪ್ರಮಾಣಪತ್ರ ವಿತರಣೆ ಮತ್ತು ಕೃಷಿ – ವಿಜ್ಞಾನಿಗಳೊಂದಿಗೆ” ಸಂವಾದ ಕಾರ್ಯಕ್ರಮವನ್ನು ಬುಧವಾರ ಬೆಳಿಗ್ಗೆ 10 ಗಂಟೆ ತೂಬಗೆರೆ ಗ್ರಾಮದ ಸೋತೇನಹಳ್ಳಿ ರಸ್ತೆಯಲ್ಲಿರುವ ಕೃಷ್ಣಪ್ಪ ನವರ ತೋಟದಲ್ಲಿ ಆಯೋಜಿಸಲಾಗಿದೆ.
ರೈತರಿಗಾಗಿ ‘ಹಲಸಿನ ಸಾಗುವಳಿ ಮತ್ತು ಮಾರುಕಟ್ಟೆ’ ಹಲಸಿನ ಮೌಲ್ಯವರ್ಧಿತ ಪದಾರ್ಥಗಳು ಮತ್ತು ಹಲಸು ಹೆಚ್ಚುವ ಯಂತ್ರದ ಕುರಿತು ತಜ್ಞರು ಮಾಹಿತಿ ನೀಡಲಿದ್ದಾರೆ.
ಹಲಸು ಬೆಳೆಗಾರರು ಮತ್ತು ಆಸಕ್ತರು ಭಾಗವಹಿಸಬೇಕೆಂದು ಈ ಪ್ರಕಟಣೆಯ ಮೂಲಕ ಮನವಿ ಮಾಡಲಾಗಿದೆ.