ದೊಡ್ಡಬಳ್ಳಾಪುರ: ಭಾರತೀಯ ಸೇನಾಪಡೆಗಳು ಭಯೋತ್ಪಾದಕರ ವಿರುದ್ದ ನಡೆಸಿದ ಆಪರೇಷನ್ ಸಿಂಧೂರ್ ಯಶಸ್ವಿಯಾದ ಹಿನ್ನಲೆ ಸೇನಾ ಪಡೆಗಳ ಪರಾಕ್ರಮವನ್ನು ಸ್ಮರಿಸಿ ಹಾಗೂ ಉಗ್ರವಾದವನ್ನು ಖಂಡಿಸಿ ಇಲ್ಲಿನ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ ಲಯನ್ಸ್ ಕ್ಲಬ್ ಆಫ್ ಆರ್.ಎಲ್.ಜಾಲಪ್ಪ ಇನ್ಸ್ಟಿಟ್ಯೂಷನ್ಸ್ ನೇತೃತ್ವದಲ್ಲಿ ಬೃಹತ್ ವಿದ್ಯಾರ್ಥಿ ಜಾಥಾ ಶನಿವಾರ ನಡೆಯಿತು.

ನೆಲದಾಂಜನೇಯಸ್ವಾಮಿ ದೇವಾಲಯ, ಬಸವ ಭವನ ವೃತ್ತ ಹಾಗೂ ಕೆಸಿಪಿ ವೃತ್ತದ ಬಳಿಯಿಂದ 3 ಪ್ರತ್ಯೇಕ ಜಾಥಾಗಳು ಹೊರಟು ಭಗತ್ಸಿಂಗ್ ಕ್ರೀಡಾಂಗಣದಲ್ಲಿ ಸುಮಾರು 2 ಸಾವಿರ ವಿದ್ಯಾರ್ಥಿಗಳು ಬಂದು ಸೇರಿದರು. ಬಳಿಕ, ಭಗತ್ಸಿಂಗ್ ಕ್ರೀಡಾಂಗಣದ ಬಳಿಯಿಂದ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದ ಬಳಿಗೆ, ನಗರದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ರಾಷ್ಟ್ರಧ್ವಜ ಹಿಡಿದು, 500 ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಜಾಥಾ ನಡೆಸಿದರು. ಜಾಥಾದಲ್ಲಿ ದೇಶಭಕ್ತಿ ಸಾರುವ ಹಾಗೂ ಉಗ್ರವಾದವನ್ನು ಖಂಡಿಸುವ ಘೋಷಣೆಗಳು ಮೊಳಗಿದವು.
ಶಾಂತಿನಗರದಲ್ಲಿ ಮುತ್ಯಾಲಮ್ಮ ಸಾಂಸ್ಕೃತಿಕ ಸೇವಾ ಸಮಿತಿ ವತಿಯಿಂದ ಜಾಥಾದಲ್ಲಿನ ವಿದ್ಯಾರ್ಥಿಗಳ ಮೇಲೆ ಹೂ ಮಳೆಗರೆದು ಸ್ವಾಗತಿಸಲಾಯಿತು. ಮಾರ್ಗಮಧ್ಯೆ ಪುಟಾಣಿ ಮಕ್ಕಳು ರಾಷ್ಟ್ರ ಧ್ವಜ ಹಿಡಿದು ಜಾಥಾವನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು.

ಭಗತ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಸೇನಾನಿ ವಿಜಯೇಂದ್ರ ರಾವ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅವರು ಮಾತನಾಡಿ, ದೇಶದ ಮುಂದಿನ ಪ್ರಜೆಗಳಾದ ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಮೂಡಬೇಕು. ಇಂದು ದೇಶವನ್ನು ಕಾಯುತ್ತಿರುವ ನಮ್ಮಂತಹ ಸೈನಿಕರು, ಹಗಲು ರಾತ್ರಿ, ಚಳಿ ಮಳೆ ಎನ್ನದೇ ದೇಶವನ್ನು ಕಾಯುತ್ತಿದ್ದಾರೆ. ಅವರಿಗೆ ಇಡೀ ದೇಶ ನೀಡುತ್ತಿರುವ ಬೆಂಬಲ ರೋಮಾಂಚಕವಾಗಿದೆ. ದೇಶ ಸೇವೆ ಎಂದರೆ ಯುದ್ಧ ಭೂಮಿಯಲ್ಲಿಯೇ ಹೋರಾಟ ನಡೆಸಬೇಕೆಂದೇನಿಲ್ಲ. ನೀವಿರುವ ಸ್ಥಳದಲ್ಲಿಯೇ ದೇಶ ಭಕ್ತಿ ತೋರಿಸಬಹುದು. ನಮ್ಮ ದೇಶ ಎನ್ನುವ ಅಭಿಮಾನ ಪ್ರತಿಯೊಬ್ಬರಲ್ಲಿಯೂ ಮೂಡಬೇಕಿದ್ದು, ಇದು ಸೈನಿಕರಿಗೆ ಉತ್ಸಾಹ ತುಂಬಲಿದೆ. ಕಾರ್ಯಾಚರಣೆ ಹಾಗೂ ಯುದ್ದಕ್ಕೆ ವ್ಯತ್ಯಾಸವಿದ್ದು, ಆಪರೇಷನ್ ಸಿಂಧೂರ, ಹಾಗೂ ಕಾರ್ಗಿಲ್ ಎನ್ನುವುದು ಕಾರ್ಯಾಚರಣೆಯಾಗಿದ್ದು, ದೇಶದ ಯೋಧರು ಉಗ್ರರನ್ನು ದಮನ ಮಾಡಿರುವುದು ನಾವು ಹಬ್ಬದಂತೆ ಸಂಭ್ರಮಿಸಬೇಕಿದೆ. ಈ ಹಿಂದೆ ನಾವು ಕಾರ್ಗಿಲ್ ಕಾರ್ಯಾಚರನೆಯಲ್ಲಿ ಮೈನಸ್ 15 ಡಿಗ್ರಿ ಕೊರೆಯುವ ಚಳಿಯಲ್ಲಿ ಯುದ್ದ ಭೂಮಿಯಲ್ಲಿ ಹೋರಾಟ ನಡೆಸಿದ್ದ ಘಟನೆಯನ್ನು ಸ್ಮರಿಸಿದ ಅವರು, ಇಂದು ದೇಶದ ಸೈನ್ಯ ಬಲಿಷ್ಟವಾಗಿದ್ದು, ಅತ್ಯಾಧುನಿಕ ಯುದ್ದ ಸಾಮಗ್ರಿಗಳಿವೆ ಯಾವುದೇ ದೇಶ ಆಕ್ರಮಣ ಮಾಡಿದರು ಹಿಮ್ಮೆಟ್ಟಿಸುವ ಶಕ್ತಿ ಭಾರತಕ್ಕಿದೆ ಎಂದರು.
ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಆಪರೇಷನ್ ಸಿಂಧೂರ್ ಯಶಸ್ವಿಯಾದ ಹಿನ್ನಲೆ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ವಿಜಯೆಂದ್ರ ರಾವ್ ಅವರನ್ನು ಸನ್ಮಾನಿಸಲಾಯಿತು.

ಶ್ರೀ ದೇವರಾಜ ಅರಸು ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ದೇಶದ ತಂಟೆಗೆ ಬಂದ ಪಾಕಿಸ್ತಾನಕ್ಕೆ ನಮ್ಮ ಸೈನಿಕರು ತಕ್ಕ ಪಾಠ ಕಲಿಸಿದ್ದು, ಇಡೀ ದೇಶ ಸೈನಿಕರ ಕಾರ್ಯಕ್ಷಮತೆಗೆ ಮೆಚ್ಚುಗೆ ಸೂಚಿಸಿ ಬೆಂಬಲಿಸ್ತಿದೆ. ಇಂದು ನಾವು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ ಎಂದರೆ ಅದಕ್ಕೆ ನಮ್ಮ ಸೈನಿಕರು ಕಾರಣ. ಉಗ್ರವಾದ, ಭಯೋತ್ಪಾದನೆಗಳು ಜಗತ್ತಿಗೆ ಮಾರಕವಾಗಿದ್ದು, ಇವು ಅಳಿಯಬೇಕು. ದೇಶದಲ್ಲಿ ಶಾಂತಿ ನೆಲೆಸಬೇಕು ಎಂದರು.

ಲಯನ್ಸ್ ಕ್ಲಬ್ನ ವೀರಭದ್ರ ಗೌಡ, ನಾಗರತ್ನ, ಆರ್ಎಲ್ಜೆಐಟಿ ಪ್ರಾಂಶುಪಾಲ ಡಾ.ವಿಜಯ್ಕಾರ್ತಿಕ್, ಲಯನ್ಸ್ ಕ್ಲಬ್ ಆಫ್ ಆರ್.ಎಲ್.ಜಾಲಪ್ಪ ಇನ್ಸ್ಟಿಟ್ಯೂಷನ್ಸ್ ಅಧ್ಯಕ್ಷ ಜೆ.ಆರ್.ರಾಕೇಶ್, ಉಪಾಧ್ಯಕ್ಷ ಕೆ.ಆರ್.ರವಿಕಿರಣ್, ಮಾಜಿ ಅಧ್ಯಕ್ಷ ಡಾ.ಶ್ರೀನಿವಾಸ ರೆಡ್ಡಿ, ಕಾರ್ಯದರ್ಶಿ ಕೆ.ಸಿ.ನಾಗರಾಜ್, ಎಇಇ ಐ.ಎಂ.ರಮೇಶ್ ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ದಾದಾಫೀರ್, ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ಶೈಕ್ಷಣಿಕ ಘಟಕಗಳ ಪ್ರಾಂಶುಪಾಲರು, ಪ್ರಾಧ್ಯಾಪಕರು, ವಿಭಾಗಗಳ ಮುಖ್ಯಸ್ಥರು, ಲಯನ್ಸ್ ಕ್ಲಬ್ ಪದಾಧಿಕಾರಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಜರಿದ್ದರು.
