
ದೊಡ್ಡಬಳ್ಳಾಪುರ(ತೂಬಗೆರೆ): ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕನಿಸರ್ಗ ನಾರಾಯಣಸ್ವಾಮಿ ರವರ 56ನೇ ಹುಟ್ಟುಹಬ್ಬದ ಪ್ರಯುಕ್ತ ತೂಬಗೆರೆಯ ಆರ್ ಎಲ್ ಜಾಲಪ್ಪ ವೃದ್ಧಾಶ್ರಮದಲ್ಲಿ ನಾರಾಯಣಸ್ವಾಮಿ ಅಭಿಮಾನಿಗಳಿಂದ ವೃದ್ಧಾಶ್ರಮ ವಾಸಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡುವ ಮೂಲಕ ವಿಶೇಷವಾಗಿ ಆಚರಿಸಲಾಯಿತು.
ಹೋಬಳಿ ಜೆಡಿಎಸ್ ಅಧ್ಯಕ್ಷ ಜಗನ್ನಾಥ ಮಾತಾನಾಡಿ, ನಿಸರ್ಗ ನಾರಾಯಣಸ್ವಾಮಿ ಅವರ ವ್ಯಕ್ತಿತ್ವಕ್ಕೆ ಅನುಗುಣವಾಗಿ ಜನಪರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶೋಷಿತರು, ಬಡವರು ಮತ್ತು ನಿರ್ಗತಿಕರ ಪಾಲಿಗೆ ಸದಾ ಸ್ಪಂದಿಸುವ ಗುಣ ಅವರಲ್ಲಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಅವರ ಹುಟ್ಟುಹಬ್ಬದ ನಿಜವಾದ ಅರ್ಥವನ್ನು ಅಭಿಮಾನಿಗಳು ನೀಡಿದ್ದಾರೆ ಎಂದರು.
ಯುವ ಮುಖಂಡ ಉದಯ ಆರಾಧ್ಯ ಮಾತಾನಾಡಿ, ನಿಸರ್ಗ ನಾರಾಯಣಸ್ವಾಮಿ ರವರು ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದಾದ್ಯಂತ ತಮ್ಮದೇ ಆದ ವರ್ಚಸ್ಸನ್ನು ಮೂಡಿಸಿದ್ದಾರೆ. ಬಡ ಮಧ್ಯಮ ವರ್ಗದಲ್ಲಿ ಹುಟ್ಟಿ ಬೆಳೆದು ಇಂದು ಸಕ್ರಿಯ ರಾಜಕಾರಣದಲ್ಲಿ ಮಹತ್ತರ ಮೈಲಿಗಲ್ಲು ಸಾಧಿಸಿದ್ದು ಸಮಾಜ ಸೇವೆಗೆ ತಮ್ಮ ಆದಾಯದ ಬಹುಪಾಲನ್ನು ಮೀಸಲಿಟ್ಟಿರುವುದು ಶ್ಲಾಘನೀಯ. ತೂಬಗೆರೆ ಜನರ ಬಗ್ಗೆ ವಿಶೇಷ ಪ್ರೀತಿ, ಕಾಳಜಿ ಹೊಂದಿರುವ ನಾರಾಯಣಸ್ವಾಮಿ, ಶಾಸಕರಾಗಿದ್ದಾಗ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜುನಾಥ್, ಮುಖಂಡ ಶಶಿಕುಮಾರ್, ರೈತ ಮುಖಂಡ ನಾರಾಯಣಸ್ವಾಮಿ, ಯುವ ಮುಖಂಡ ಉದಯ ಆರಾಧ್ಯ, ನಾಗರಾಜು, ವಿಜಯ್, ಶಿವು ಮತ್ತಿತರರು ಹಾಜರಿದ್ದರು.