ದೊಡ್ಡಬಳ್ಳಾಪುರ : ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮಿ ಚೌದರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಅವರು ತುರ್ತು ಸಂದರ್ಭಗಳಲ್ಲಿ ಯಾವುದೇ ವಿಳಂಬ ಮಾಡದೇ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ರಮೇಶ್ ರವರಿಗೆ ತಿಳಿಸಿದರು.

ಔಷಧಿ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿದ ಅವರು ಆಸ್ಪತ್ರೆಗೆ ಒಳರೋಗಿ ಹಾಗೂ ಹೊರರೋಗಿಗಳೊಂದಿಗೆ ಸಂವಾದ ನಡೆಸಿದರು ಆಸ್ಪತ್ರೆಯಲ್ಲಿ ಲಭ್ಯವಿರುವ ಔಷಧಿಗಳ ಬಗ್ಗೆ ಮಾಹಿತಿ ಪಡೆದರು. ಸಾರ್ವಜನಿಕರಿಗೆ ಲಭ್ಯವಿರುವ ಔಷಧಿಗಳನ್ನು ನೀಡುವಂತೆ ತಿಳಿಸಿದರು.
ಆಸ್ಪತ್ರೆ ವಿರುದ್ಧ ನಿಲ್ಲದ ಆರೋಪ
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮಿ ಚೌದರಿ ಭೇಟಿ ನೀಡಿದ ಸಂದರ್ಭ ಸ್ಕ್ಯಾನಿಂಗ್ ಮಾಡಿಸಲು ಟೋಕನ್ ಖಾಲಿಯಾಗಿದೆ ಎಂದು ಟೋಕನ್ ನೀಡಿಲ್ಲ,ಅಲ್ಲದೇ ಟೋಕನ್ ಇಲ್ಲದೆ ಸ್ಕ್ಯಾನಿಂಗ್ ಮಾಡಿಸಲು 500 ರೂಪಾಯಿ ಬೇಡಿಕೆ ಇಡುತ್ತಾರೆ. ವೈದ್ಯರು ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ, ಔಷಧಿಗಳನ್ನು ಖಾಸಗಿ ಮೆಡಿಕಲ್ ನಲ್ಲಿ ಬರೆದುಕೊಡುತ್ತಾರೆ ಎಂಬ ಹಲವು ಆರೋಪಗಳನ್ನು ಸಾರ್ವಜನಿಕರು ಮಾಡಿದರು. ಸ್ಕ್ಯಾನಿಂಗ್ ಮಾಡಿಸಲು ಬಂದು ಕಾದು ಕುಳಿತಿದ್ದ ವೃದ್ಧರನ್ನು ನೋಡಿದ ನಾಗಲಕ್ಷ್ಮಿ ಚೌದರಿ ಅವರು ಕೊಂಚ ಗರಂ ಆಗಿಯೇ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ. ರಮೇಶ್ ರವರಿಗೆ ಎಚ್ಚರಿಕೆ ನೀಡಿದರು. ತುರ್ತು ಸಂದರ್ಭಗಳಲ್ಲಿ ಟೋಕನ್ ಗೆ ಕಾಯದೆ ಚಿಕಿತ್ಸೆ ಸೌಲಭ್ಯ ಒದಗಿಸಬೇಕೆಂದು ತಿಳಿಸಿದರು.

ನಂತರ ಪ್ರಸೂತಿ ವಿಭಾಗಕ್ಕೆ ಭೇಟಿ ನೀಡಿದ ಅವರು ಲಭ್ಯವಿರುವ ಉಪಕರಣಗಳು ಹಾಗೂ ಔಷಧಿಗಳನ್ನು ಕುರಿತಂತೆ ತಾವೇ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ವೈದ್ಯರಿಂದ ಮಾಹಿತಿ ಪಡೆದರು. ಯಾವುದೇ ರೀತಿಯಲ್ಲಿ ಹಣ ಪಡೆಯದಂತೆ ಸಂಪೂರ್ಣ ಉಚಿತವಾಗಿ ಸೇವೆ ಸಲ್ಲಿಸುವಂತೆ ಸಿಬ್ಬಂದಿ ವರ್ಗಕ್ಕೆ ತಿಳಿಸಿದರು.

