ಮಹಿಳೆಯೊಬ್ಬರ ಮೇಲೆ ಹಲ್ಲೆನಡೆಸಿ ಅವಾಚ್ಯಶಬ್ಧಗಳಿಂದ ನಿಂದಿಸಿದ ಆರೋಪ ಸಂಬಂಧ ‘ದಿಯಾ’ಸಿನಿಮಾದ ನಿರ್ಮಾಪಕ ಕೃಷ್ಣಚೈತನ್ಯ ವಿರುದ್ಧ ನಾಗರಿಕ ಹಕ್ಕು ಜಾರಿನಿರ್ದೇಶನಾಲಯ (ಡಿಸಿಆರ್ಇ) ಠಾಣೆಯಲ್ಲಿಎಫ್ಐಆರ್ ದಾಖಲಾಗಿದೆ.
ರಾಜ್ಯಸರಕಾರ ಡಿಸಿಆರ್ಇ ಠಾಣೆಗಳಿಗೆ ಮಾನ್ಯತೆ ನೀಡಿದ ಬಳಿಕ ರಾಜಧಾನಿಯಲ್ಲಿ ಜಾತಿದೌರ್ಜನ್ಯ ಸಂಬಂಧ ದಾಖಲಾದ ಮೊದಲ ಪ್ರಕರಣ ಇದಾಗಿದೆ. ನೇತಾಜಿ ನಗರದ ನಿವಾಸಿ ಶಶಿಕಲಾ (38) ಎಂಬುವವರು ನೀಡಿದ ದೂರಿನ ಅನ್ವಯ, ಚಿತ್ರ ನಿರ್ಮಾಪಕ ಕೃಷ್ಣಚೈತನ್ಯ, ಸತ್ಯನಾರಾಯಣ ರೆಡ್ಡಿ ಸೇರಿದಂತೆ ಇತರರ ವಿರುದ್ಧ ಪೂರ್ವವಿಭಾಗದ ಡಿಸಿಆರ್ಇ ಠಾಣೆಯಲ್ಲಿಆ.29ರಂದು ಪ್ರಕರಣ ದಾಖಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ, ಅತಿಕ್ರಮ ಪ್ರವೇಶ, ಹಲ್ಲೆ, ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪಗಳ ಅನ್ವಯ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವರ್ತೂರು ಹೋಬಳಿ ಕಸವನಹಳ್ಳಿ ಗ್ರಾಮದಲ್ಲಿರುವ 3 ಎಕರೆ 35 ಗುಂಟೆ ಜಮೀನನ್ನು ಭೋಗ್ಯಕ್ಕೆ ಪಡೆದಿರುವ ಶಶಿಕಲಾ ಹಾಗೂ ಕೋದಂಡಚಾರಿ ಎಂಬುವವರು ನರ್ಸರಿ ನಡೆಸುತ್ತಿದ್ದು ‘‘ಕೆಲದಿನಗಳ ಹಿಂದೆ ಜಮೀನಿನ ಬಳಿ ಕಾರಿನಲ್ಲಿಆಗಮಿಸಿದ್ದ ಕೃಷ್ಣಚೈತನ್ಯ,ಸತ್ಯನಾರಾಯಣ ರೆಡ್ಡಿ ಹಾಗೂ ಇತರರು ಅವಾಚ್ಯಶಬ್ಧಗಳಿಂದ ಜಾತಿನಿಂದನೆ ಮಾಡಿದ್ದಾರೆ.ಜತೆಗೆ,ದೇಹದ ಖಾಸಗಿ ಅಂಗಗಳನ್ನು ಮುಟ್ಟಿ ಹಲ್ಲೆನಡೆಸಿದ್ದಾರೆ.ಜಮೀನು ಸ್ಥಳ ಬಿಟ್ಟುಕೊಡದಿದ್ದರೆ ಕೊಲೆ ಮಾಡುವ ಬೆದರಿಕೆ ಒಡ್ಡಿದ್ದಾರೆ’’ ಎಂದು ಶಶಿಕಲಾ ದೂರಿನಲ್ಲಿಆರೋಪಿಸಿದ್ದಾರೆ.
ಸಂತ್ರಸ್ತೆ ಶಶಿಕಲಾ ಅವರು ಮೊದಲು ಬೆಳ್ಳಂದೂರು ಠಾಣೆಯಲ್ಲಿದೂರು ನೀಡಲು ತೆರಳಿದ್ದು ಅಲ್ಲಿನ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ.ಹಲವು ಬಾರಿ ದೂರು ನೀಡಿದರೂ ಸಬೂಬು ಹೇಳಿದ್ದಾರೆ.ಈ ನಿಟ್ಟಿನಲ್ಲಿಪರಿಶಿಷ್ಟ ಜಾತಿ ಹಾಗೂ ಪಂಗಡದ ಮೇಲಿನ ದೌರ್ಜನ್ಯ ತಡೆ ಕಾಯಿದೆ ಪ್ರಕರಣಗಳ ತನಿಖೆ ಸಲುವಾಗಿಯೇ ಸ್ಥಾಪಿಸಲಾಗಿರುವ ಡಿಸಿಆರ್ಇ ಠಾಣೆಯಲ್ಲಿಪ್ರಕರಣ ದಾಖಲಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿಆರೋಪಿಗಳು ಕೃತ್ಯ ಎಸಗಿರುವುದು ಕಂಡು ಬಂದಿದ್ದು ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.
ಆರೋಪಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗುವುದು ಎಂದು ಡಿಸಿಆರ್ಇ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
