ದೊಡ್ಡಬಳ್ಳಾಪುರ: ನಗರದ ಹೊರಭಾಗದಲ್ಲಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಕಾವೇರಿ ನೀರು ಹರಿಸಲು ಆರ್ ಎಲ್ ಜಾಲಪ್ಪ ನವರು ಯಲಹಂಕದಿಂದ ದಶಕಗಳ ಹಿಂದೆಯೇ ಪೈಪ್ಲೈನ್ ಅಳವಡಿಸಲಾಗಿದೆ. ಈ ಪೈಪ್ಲೈನ್ ಮೂಲಕ ಕಾವೇರಿ ನೀರನ್ನು ಕುಡಿಯಲು ನಗರಕ್ಕೆ ನೀಡಬೇಕೆಂದು ಶಾಸಕ ಧೀರಜ್ ಮುನಿರಾಜು ಮನವಿ ಮಾಡಿದರು.
ಹಿರಿಯ ರಾಜಕಾರಣಿ ಆರ್.ಎಲ್.ಜಾಲಪ್ಪ ಜನ್ಮಶತಮಾ-ನೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತಾ ಮಾತನಾಡಿದ ಅವರು ವೇಗವಾಗಿ ಬೆಳೆಯುತ್ತಿರುವ ನಮ್ಮ ನಗರ ಹಾಗೂ ತಾಲ್ಲೂಕಿಗೆ ಕುಡಿಯುವ ನೀರಿನ ಬವಣೆ ನೀಗಲು ಕಾವೇರಿ ನೀರು ಅನಿವಾರ್ಯವಾಗಿದೆ ಎಂದರು.

ಶಂಕುಸ್ಥಾಪನೆ ಮಾಡಲಾಗಿರುವ ಜಿಲ್ಲಾ ಆಸ್ಪತ್ರೆಗೆ ಬಜೆಟ್ನಲ್ಲಿ ನಿಗದಿಯಾಗಿರುವ ಹಣವನ್ನು ಬಿಡುಗಡೆ ಮಾಡುವ ಮೂಲಕ ಕಾಮಗಾರಿ ಪೂರ್ಣಗೊಳಿಸಲು ಅನುವು ಮಾಡಿಕೊಡಬೇಕು ಎಂದರು. ತಾಲ್ಲೂಕಿನಲ್ಲಿ ಸಾವಿರಾರು ಕುಟುಂಬಗಳು ನಿವೇಶನ ರಹಿತರಿಗಾಗಿ ಜೀವನ ಸಾಗಿಸುತ್ತಿದ್ದು, ಅಂತಹ ಕುಟುಂಬಗಳಿಗೆ ನಿವೇಶನ ಮಾಡಲು 40 ಎಕರೆ ಜಮೀನು ಮೀಸಲಿಡಲಾಗಿದೆ. ರಾಜ್ಯ ಸರ್ಕಾರದಿಂದ ಗುಂಪು ಮನೆಗಳನ್ನು ನಿರ್ಮಿಸಲು ಮಂಜುರಾತಿ ನೀಡಬೇಕು ಎಂದರು.

ನಗರದಲ್ಲಿ ಸುಸಜ್ಜಿತ ಕೃಷಿ ಮಾರುಕಟ್ಟೆ ನಿರ್ಮಾಣವಾಗಲು ತಾಲ್ಲೂಕಿನ ಹಿರಿಯ ರಾಜಕಾರಣಿ ಆರ್.ಎಲ್.ಜಾಲಪ್ಪ ಅವರು ಪ್ರಮುಖ ಕಾರಣ. ಹಾಗಾಗಿ ನಗರದ ಎಪಿಎಂಸಿ ಮಾರುಕಟ್ಟೆಗೆ ಜಾಲಪ್ಪ ಅವರ ಹೆಸರು ನಾಮಕರಣ ಮಾಡುವಂತೆ ಮನವಿ ಮಾಡಿದರು.
ಮುಖ್ಯಮಂತ್ರಿಗಳು ತಮ್ಮ ಭಾಷಣದಲ್ಲಿ ತಾಲ್ಲೂಕಿನ ಯಾವುದೇ ಮನವಿಗಳ ಬಗ್ಗೆಯೂ ಪ್ರಸ್ತಾಪವನೆ ಮಾಡದೇ ಜಾಲಪ್ಪ ಹಾಗೂ ತಮ್ಮ ಒಡನಾಟ ನೆನೆದರು.
