ದೊಡ್ಡಬಳ್ಳಾಪುರ : ವಿಷ ಕುಡಿದು ಜೀವನ್ಮರಣ ಹೋರಾಟ ನಡೆಸುತ್ತಿದ್ದ ಯುವಕನ ಜೀವವನ್ನು ಸಕಾಲಕ್ಕೆ ಬಂದ 112 ಪೊಲೀಸರು, ಆತನ ಜೀವ ಉಳಿಸಿದ್ದಾರೆ. 112 ಸಿಬ್ಬಂದಿಯಾದ ಮುನಿರಾಜು ಎಂ ಹಾಗೂ ಕಾಂತರಾಜು ಅವರ ಈ ಕಾರ್ಯಯಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹೌದು ಸುಮಾರು 19 ವರ್ಷದ ಯುವಕನೋರ್ವ ಮಾನಸಿಕವಾಗಿ ಮನನೊಂದು ಸುಮಾರು 11ಗಂಟೆ ರಾತ್ರಿಯಲ್ಲಿ ವಿಷ ಕುಡಿದು ತೀವ್ರವಾಗಿ ಅಸ್ವಸ್ಥಗೊಂಡು ಒದ್ದಾಡುತ್ತಿದ್ದನು. ಆಗ ಈ ಯುವಕನೇ ತನ್ನ ಫೋನ್ ನಿಂದ 112ಗೆ ಕರೆ ಮಾಡಿ ತಡವರಿಸುತ್ತಾ ತಾನು ವಿಷ ಕುಡಿದಿರುವ ಬಗ್ಗೆ ದೂರು ನೀಡುತ್ತಾನೆ.
ಕರೆ ಬಂದ ಕೆಲವೇ ಕ್ಷಣಗಳಲ್ಲಿ 112 ಸಿಬ್ಬಂದಿಯಾದ ಮುನಿರಾಜು ಎಂ ಹಾಗೂ ಕಾಂತರಾಜು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸ್ಥಳದಲ್ಲಿ ಆ ಯುವಕನನ್ನು ಕತ್ತಲಲ್ಲೇ ಹುಡುಕಾಡಿದ್ದಾರೆ. ಆ ಯುವಕ ತೀವ್ರವಾಗಿ ಅಸ್ವಸ್ಥಗೊಂಡು ತೋಟವೊಂದರಲ್ಲಿ ಕೆಳಗೆ ಬಿದ್ದು ನರಳಾಡುತ್ತಿದ್ದನು. ಆತನ ಫೋನ್ ಗೆ ಸಾಕಷ್ಟು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ. ಮೊಬೈಲ್ ಗಳಲ್ಲಿ ಟಾರ್ಚ್ ಹಾಕಿಕೊಂಡು ಪೊಲೀಸರು ಹುಡುಕಾಡಿದ್ದಾರೆ. ಕೊನೆಗೆ ನರಳಾಡುತ್ತಿದ್ದ ಯುವಕನನ್ನು ಪತ್ತೆ ಮಾಡಿ ಸ್ಥಳೀಯ ಆಸ್ಪತ್ರೆಗೆ ತಮ್ಮ 112 ವಾಹನದಲ್ಲೇ ರವಾನಿಸಿದ್ದಾರೆ.
ಸದ್ಯ ವಿಷ ಕುಡಿದ ಯುವಕ ಚಿಕಿತ್ಸೆ ಪಡೆದು ಆರೋಗ್ಯವಾಗಿದ್ದಾನೆ ಯುವಕನ ಸಂಬಂಧಿಕರು ಕೂಡ ಮುನಿರಾಜು ಎಂ ಹಾಗೂ ಕಾಂತರಾಜುರವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
