ದೊಡ್ಡಬಳ್ಳಾಪುರ ತಾಲೂಕಿನ ಕೊಡಿಗೇಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಯುವ ಸಂಚಲನ ಚಾರಿಟೇಬಲ್ ಟ್ರಸ್ಟ್ ಹಾಗೂ ಸಿ.ಎಂ.ಸಿ.ಎ ಸಂಸ್ಥೆ ಸಹಯೋಗದಲ್ಲಿ “ಮಕ್ಕಳ ಹಕ್ಕುಗಳ ಗ್ರಾಮಸಭೆ” ಕಾರ್ಯಕ್ರಮವನ್ನು ನಡೆಸಲಾಯಿತು.

ಸಭೆಯಲ್ಲಿ ಮಕ್ಕಳು ಮಾತನಾಡಿ ಕೆಲ ಕಿಡಿಗೇಡಿಗಳು ಶಾಲೆಯ ಒಳಗೆ ಧೂಮಪಾನ ಮತ್ತು ಮದ್ಯಪಾನ ಮಾಡಿ ಬಿಸಾಡುತ್ತಾರೆ ನಾವು ಶಾಲೆಗೆ ಬಂದಾಗ ಗ್ಲಾಸ್ ಚೂರುಗಳು ಕಾಲಿಗೆ ಚುಚ್ಚುತ್ತವೆ, ಶಾಲೆಯ ಸುತ್ತಾ ಮುತ್ತಾ ತಂಬಾಕು ಮಾರಾಟ ಮಾಡುತ್ತಾರೆ, ಶಾಲೆಯ ಹೊರಗೆ ಸ್ವಚ್ಛತೆ ಇಲ್ಲ ಕಸ ಇರುತ್ತದೆ, ಶಾಲೆಯ ಕಿಟಕಿಗಳಿಗೆ ತರಗತಿ ನಡೆಯುವ ಸಂದರ್ಭದಲ್ಲಿ ಹೊರಗಿನಿಂದ ಕಲ್ಲು ತೂರಾಟ ನಡೆಸುತ್ತಾರೆ, ಸಮಾಜ ವಿಜ್ಞಾನ ಭಾಗ-02 ಪುಸ್ತಕ ನಮಗೆ ಸಿಕ್ಕಿಲ್ಲ, ಆಟದ ಮೈದಾನವಿಲ್ಲ, ಶಾಲೆಯ ಕಾಂಪೌಂಡ್ ಗೋಡೆಯಿಲ್ಲ, ಶಾಲೆಯ ಶೌಚಾಲಯದ ಸ್ವಚ್ಛತೆ ಕಷ್ಟ ಸಾಧ್ಯ, ಶಾಲೆಯ ಕೊಠಡಿ ಬಾಗಿಲು ಬಿದ್ದಿದೆ, ದೈಹಿಕ ಶಿಕ್ಷಣ ಮತ್ತು ಹಿಂದಿ ಭಾಷೆಗೆ ಶಿಕ್ಷಕರು ಇಲ್ಲ, ಬಸ್ ವ್ಯವಸ್ಥೆ ಇಲ್ಲ, ಕಸವನ್ನು ಸಂಗ್ರಹಿಸಲು ವಾಹನ ಬರುವುದಿಲ್ಲ, ಮನೆಯ ಬಳಿ ಚರಂಡಿ ನೀರು ರಸ್ತೆಗೆ ಬರುತ್ತಿದೆ, ಬೀದಿ ನಾಯಿಗಳ ಕಾಟ ಈ ರೀತಿಯ ಸಮಸ್ಯೆಗಳನ್ನು ಮಕ್ಕಳು ತಮ್ಮ ಮಕ್ಕಳ ಹಕ್ಕುಗಳ ಗ್ರಾಮ ಸಭೆ ಯಲ್ಲಿ ಹೇಳಿಕೊಂಡರು ಇದರ ಜೊತೆಗೆ ಮಕ್ಕಳ ಧ್ವನಿ ಪೆಟ್ಟಿಗೆಗೆ ಚೀಟಿಯಲ್ಲಿ ಸಮಸ್ಯೆಗಳನ್ನು ಬರೆದು ಹಾಕಿದ್ದರು ಅದನ್ನು ವೇದಿಕೆಯ ಮೇಲೆ ಇದ್ದವರು ಚೀಟಿಗಳನ್ನು ತೆರೆದು ಎಲ್ಲರ ಮುಂದೆ ಓದಿದರು.

ಮಕ್ಕಳು ಕೇಳಿದ ಸಮಸ್ಯೆಗಳಿಗೆ ಒಂದಾದ ನಂತರ ಒಂದರಂತೆ ಎಲ್ಲದಕ್ಕೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸದಸ್ಯರು ಉತ್ತರ ನೀಡಿದರು ಮತ್ತು ಪತ್ರ ವ್ಯವಹಾರ ನಡೆಸುವುದಾಗಿ ಪಂಚಾಯಿತ್ ಅಭಿವೃದ್ಧಿ ಅಧಿಕಾರಿಗಳಾದ ಸೌಮ್ಯ ರವರು ತಿಳಿಸಿ ” ಸಭೆಯು ಉತ್ತಮವಾಗಿದ್ದು, ಮಕ್ಕಳ ಜೊತೆ ನೇರ ಸಂವಾದವಾಗಿದ್ದು ಮಕ್ಕಳ ಸಮಸ್ಯೆ ತಿಳಿಯಲು ತುಂಬಾ ಸಹಕಾರಿಯಾಗಿದೆ.” ಎಂದು ಹೇಳಿದರು.
ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಆಶಾರಾಣಿ ರವರು “ಮಕ್ಕಳು ಹೇಳಿದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರಕುವಂತೆ ಗಮನವಹಿಸುತ್ತೇನೆ. ಇಂತಹ ಸಭೆಯಿಂದ ಮಕ್ಕಳಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಸಿಗುವುದು ಮತ್ತು ಅವರ ಸಮಸ್ಯೆಗಳಿಗೆ ನೇರವಾಗಿ ಉತ್ತರ ದೊರಕಲು ಅವಕಾಶ ದೊರೆಯುತ್ತದೆ.” ಎಂದು ಹೇಳಿದರು .

ಕಾರ್ಯಕ್ರಮದ ಕುರಿತು ಮಾತನಾಡಿದ ಯುವ ಸಂಚಲನ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಚಿದಾನಂದ್ ಮೂರ್ತಿ ರವರು ” ಈ ಕಾರ್ಯಕ್ರಮದ ಉದ್ದೇಶ ನಿಮ್ಮ ಭಾಗವಹಿಸುವ ಹಕ್ಕನ್ನು ಖಾತರಿಪಡಿಸುವುದಾಗಿದೆ.ಈ ಸಭೆಯಲ್ಲಿ ಭಾಗವಹಿಸಿದ ಅಧಿಕಾರಿಗಳು ಮಕ್ಕಳ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ತ್ವರಿತಗತಿಯಲ್ಲಿ ಪರಿಹಾರ ಒದಗಿಸುವುದು ಮಕ್ಕಳ ಉಜ್ವಲ ಭವಿಷ್ಯಕ್ಕೆ ಪೂರಕವಾಗಿರುತ್ತದೆ. ನೀವು ಇಲ್ಲಿ ಕೇಳಿರುವ ಸಮಸ್ಯೆಗಳನ್ನು ನಾವುಗಳು ಅನುಸರಣೆ ಮಾಡುತ್ತೇವೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಗೆಹರಿಯಬಹುದಾದ ಸಮಸ್ಯೆಗಳನ್ನು ಹಾಗೂ ಪಂಚಾಯಿತಿಯವರು ನಡೆಸುವ ಪತ್ರ ವ್ಯವಹಾರವನ್ನು ಸಹ ಅನುಸರಣೆ ಮಾಡುವುದು ನಮ್ಮ ಜವಾಬ್ದಾರಿ.” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಸೌಭಾಗ್ಯಮ್ಮ, ಸದಸ್ಯರು ಹಾಗೂ ಸಿಬ್ಬಂದಿಗಳು, ಶಾಲಾ ಶಿಕ್ಷಕರು, ಮಕ್ಕಳ ಸಹಾಯವಾಣಿ ಮೇಲ್ವಿಚಾರಕರಾದ ಸೌಮ್ಯ , ಕೊಡಿಗೆಹಳ್ಳಿ ವ್ಯಾಪ್ತಿಯ ಸಿ.ಆರ್.ಪಿ ಮುತ್ತುರಾಜ್ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ಚೇತನ ಆರ್, ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು, ಯುವ ಸಂಚಲನ ಚಾರಿಟೇಬಲ್ ಟ್ರಸ್ಟ್ ನ ಸಂಚಾಲಕರಾದ ನವೀನ್ ಕುಮಾರ್ ಹಾಗೂ ಸ್ವಯಂ ಸೇವಕರಾದ ಲಾವಣ್ಯ ಉಪಸ್ಥಿತರಿದ್ದರು.
