ಬೆಂಗಳೂರು ಗ್ರಾಮಾಂತರ: ಆನ್ ಲಾನ್ ಟೆಕ್ನಾಲಜಿ ಸಲ್ಯೂಷನ್ಸ್ ಲಿಮಿಟೆಡ್ ಅಭಿವೃದ್ಧಿಪಡಿಸಿರುವ ವಿಮಾನ ನಿಲ್ದಾಣ ರನ್ ವೇ ಸ್ವಚ್ಛತಾ ವಾಹನವನ್ನು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಸೋಮವಾರ ನೋಯ್ಡಾ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಲಿಮಿಟೆಡ್ ಗೆ (ಎನ್.ಐ.ಎ.ಎಲ್) ಹಸ್ತಾಂತರಿಸಿದರು.
ಭಾರತದ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಉಪಕ್ರಮದಡಿ ಸ್ವಿಟ್ಜರ್ ಲೆಂಡ್ ನ ಮೆಸರ್ಸ್ ಬುಕರ್ ಮುನಿಸಿಪಲ್ ಸಹಯೋಗದಲ್ಲಿ ದೊಡ್ಡಬಳ್ಳಾಪುರದ ಆದಿನಾರಾಯಣ ಹೊಸಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಘಟಕದಲ್ಲಿ ಜೋಡಣೆಗೊಂಡು ತಯಾರಾಗಿರುವ ಈ ಮಾದರಿಯ ಎರಡು ವಾಹನಗಳ ಕೀಲಿಕೈಗಳನ್ನು ನೋಯ್ಡಾ ವಿಮಾನ ನಿಲ್ದಾಣದ ಪ್ರತಿನಿಧಿ ಪ್ರದೀಪ್ ರಾಣಾ ಅವರಿಗೆ ನೀಡಿದರು.

ಈ ವೇಳೆ ಮಾತನಾಡಿದ ಅವರು ನಗರದ ರಸ್ತೆಗಳನ್ನು ಸ್ವಚ್ಛ ಮಾಡುವ ಸ್ವೀಪಿಂಗ್ ಮಿಷಿನ್ ವಾಹನಗಳ ತಯಾರಿಕೆಗೂ ಗಮನ ಕೇಂದ್ರೀಕರಿಸಿರುವ ಆನ್ ಲಾನ್ ನಂತಹ ಕಂಪನಿಗಳು ನಮ್ಮ ಪೂರೈಕೆ ಸರಪಳಿಯ ಬುನಾದಿಯಾಗಿವೆ. ಆನ್ ಲಾನ್ ಕಂಪನಿಯು ಸರ್ಕಾರದ ನೀತಿಗಳು ಹಾಗೂ ಕಾರ್ಯಪರಿಸರವನ್ನು ಬಳಸಿಕೊಂಡು ಈಗ ತಯಾರಿಸಿರುವ ವಾಹನಕ್ಕೆ ರಫ್ತು ಮಾರುಕಟ್ಟೆಗಳನ್ನು ಶೋಧಿಸಿಕೊಳ್ಳಬೇಕು. ನಮ್ಮ ಕೈಗಾರಿಕಾ ನೀತಿಯು (2025-30) ಗುರಿ ನಿರ್ದೇಶಿತ ಬೆಂಬಲ ಹಾಗೂ ಗುಣಮಟ್ಟ ಪ್ರಮಾಣಪತ್ರ ಪ್ರೋತ್ಸಾಹಕ ಕ್ರಮಗಳ ಮೂಲಕ ಆನ್ ಲಾನ್ ನಂತಹ ಕಂಪನಿಗಳಿಗೆ ಉತ್ತೇಜನ ನೀಡುತ್ತದೆ ಎಂದರು.
ಕಾರ್ಯಕ್ರಮದ ನಂತರದ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು ಫಾಕ್ಸ್ ಕಾನ್ ಕಂಪನಿಯು ಸದ್ಯ 30,000 ಜನರಿಗೆ ಉದ್ಯೋಗ ನೀಡಿದ್ದು, ಇದರಲ್ಲಿ ಶೇ 80ರಷ್ಟು ಮಂದಿ ಮಹಿಳೆಯರೇ ಇರುವುದು ಸಂತಸದ ಸಂಗತಿ. ಇದೇ ರೀತಿ ಮುಂದಿನ ದಿನಗಳಲ್ಲಿ ಇನ್ನೂ 20 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ. ಚೀನಾ ಮತ್ತು ವಿಯೆಟ್ನಾಂ ರೀತಿ ತಯಾರಿಕಾ ವಲಯದಲ್ಲಿ ಮುಂಚೂಣಿಗೆ ತರುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ನಂತರದ ಸ್ಥಳೀಯ ಉದ್ಯಮಿಗಳ ಜತೆಗೂ ಸಚಿವರು ಮಾತನಾಡಿದರು. ಕೆಲವರು ತಮ್ಮ ಉದ್ಯಮ ವಿಸ್ತರಿಸಲು ಭೂಮಿ ಕೇಳುತ್ತಿದ್ದು, ಇದನ್ನು ಲಭ್ಯವಾಗಿಸಲಾಗುವುದು ಎಂದು ಭರವಸೆ ನೀಡಿದರು.
ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪಿ ಎಂ ಉನ್ನಿಕೃಷ್ಣನ್ ನಾಯರ್ ಮಾತನಾಡಿ ನಾವು ಯುರೋಪ್ ಮತ್ತು ಅಮೆರಿಕ ಮಾದರಿಗಳನ್ನು ಪ್ರತಿನಿಧಿಸುತ್ತಾ ರಕ್ಷಣಾ ಯಂತ್ರಗಳು, ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ನಗರ ಸ್ವಚ್ಛತೆ ಯಂತ್ರಗಳ ನಿರ್ಮಾಣ ಮಾಡುತ್ತಿದ್ದು. ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಲ್ಲಿ ಸ್ಥಳೀಯ ಕಂಪನಿಗಳಿಂದ ಅಗತ್ಯ ವಸ್ತುಗಳನ್ನು ಪಡೆಯುವ ಮೂಲಕ ದೇಶದಲ್ಲೇ ಮೊದಲ ಬಾರಿಗೆ ವಿಮಾ ನಿಲ್ದಾಣದ ರನ್ ವೇ ಸ್ವಚ್ಛಗೊಳಿಸುವ ಯಂತ್ರವನ್ನು ನಿರ್ಮಿಸಿದ್ದೇವೆ. ವಿಮಾನದ ಟಯರ್ ಗಳಿಗೆ ಅಪಾಯಕಾರಿಯಾಗಬಹುದಾದ ಮೊಳೆಗಳು ಹಾಗೂ ಚೂಪಾದ ಲೋಹದ ತುಣುಕುಗಳನ್ನು ರನ್ ವೇ ಮೇಲಿಂದ ತೆರವುಗೊಳಿಸುವ ಕಾರ್ಯವನ್ನು ಈ ವಾಹನ ಮಾಡಲಿದೆ. ದೂಳನ್ನೂ ಹೀರಿಕೊಳ್ಳಲಿದೆ. ಜೊತೆಗೆ, ಮುಖ್ಯವಾಗಿ ವಿಮಾನಗಳು ಇಳಿಯುವಾಗ ರನ್ ವೇಯಲ್ಲಿ ಜಾರುವ ಸಾಧ್ಯತೆ ತಂದೊಡ್ಡಬಹುದಾದ ಪಾಚಿಯನ್ನು ತೆಗೆದುಹಾಕುವ ಕಾರ್ಯವನ್ನು ಇದು ನಿರ್ವಹಿಸಲಿದೆ ಎಂದರು.

ರಸ್ತೆ ಸ್ವಚ್ಛತೆಗಾಗಿ ಜಂಬಲ್ ಪುರ ಕ್ಕೆ ಈಗಾಗಲೇ ನಮ್ಮ ಕ್ಲೀನಿಂಗ್ ಯಂತ್ರಗಳನ್ನು ನೀಡಲಾಗಿದ್ದು ನಗರದ ಪ್ರಮುಖ ರಸ್ತೆಗಳ ಸ್ವಚ್ಛತಾ ಕಾರ್ಯಕ್ಕೆ ಅತೀ ಶೀಘ್ರದಲ್ಲಿ ಮುಂದಾಗಲಿವೆ.ವಿಮಾನ ನಿಲ್ದಾಣದ ರನ್ ವೇ ಸ್ವಚ್ಛಗೊಳಿಸುವ ಯಂತ್ರಗಳು ಸುಮಾರು 4 ರಿಂದ 4.5 ಕೋಟಿ ವೆಚ್ಚದ ವಾಹನಗಳಾಗಿದ್ದು.ರಸ್ತೆ ಸ್ವಚ್ಛಗೊಳಿಸುವ ವಾಹನಗಳು ಸುಮಾರು 3 ಕೋಟಿ ವೆಚ್ಚದಲ್ಲಿ ಲಭ್ಯವಾಗಲಿವೆ e ಎಂದು ತಿಳಿಸಿದರು.
ಈ ವೇಳೆ ಮಾಜಿ ಶಾಸಕ ವೆಂಕಟರಮಣ, ಲೆಕ್ಕಪರಿಶೋಧಕ ಜಿ.ಜಿ.ಪಾಟೀಲ, ನೋಯ್ದಾ ವಿಮಾನ ನಿಲ್ದಾಣದ ಲೀಡ್ ಗ್ರೌಂಡ್ ವಿನೋದ್ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.
