ತೆರಿಗೆ ಪಾಲು ಹಂಚಿಕೆಯಲ್ಲಿ ರಾಜ್ಯಕ್ಕಾಗುತ್ತಿರುವ ಅನ್ಯಾಯವನ್ನು ವಿರೋಧಿಸಿ ಫೆಬ್ರವರಿ 7ರಂದು ಬೆಳಗ್ಗೆ 11ಗಂಟೆಗೆ ದಿಲ್ಲಿಯ ಜಂತರ್ ಮಂತರ್ ಎದುರು ಪ್ರತಿಭಟನೆ ಕುರಿತು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂಬಂಧ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ ಮಾತೆತ್ತಿದರೆ ಡಬಲ್ ಎಂಜಿನ್ ಸರ್ಕಾರ ಎಂದು ಹೇಳುವ ಬಿಜೆಪಿ, ಆ ಸಮಯದಲ್ಲೂ ಸರಿಯಾಗಿ ಅನುದಾನ ನೀಡಲಿಲ್ಲ, ನಮ್ಮ ಸರ್ಕಾರ ಬಂದ ಮೇಲೆ ತಾಳ್ಮೆಯಿಂದ ಕಾಯುತ್ತಿದ್ದೆವು, ಈ ಸಾರಿ ಬಜೆಟ್ನಲ್ಲೂ ನಮಗೆ ಅನ್ಯಾಯವಾಗಿದೆ.
ದಿಲ್ಲಿಯಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಖಂಡಿಸಿ ಧ್ವನಿ ಎತ್ತುತ್ತೇವೆ. ಇಡೀ ಸರಕಾರವೇ ಪ್ರತಿಭಟನೆ ಮಾಡಲಿದ್ದು, ಪಕ್ಷ ಬೇಧ ಮರೆತು ಎಲ್ಲ ಶಾಸಕರು ಭಾಗವಹಿಸಬೇಕು. ರಾಜ್ಯದ ಹಿತಕ್ಕಾಗಿ ನಾವು ನೀವೆಲ್ಲರೂ ಒಟ್ಟಾಗಿ ಸೇರಿ ಹೋರಾಟ ಮಾಡಬೇಕಿದೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಕೇಂದ್ರ ಸರಕಾರಕ್ಕೆ ಸಹಕಾರವನ್ನು ನೀಡುತ್ತಾ ಬಂದಿದ್ದೇವೆ, ಆದರೂ ಕೇಂದ್ರದಿಂದ ನಮಗೆ ಅನ್ಯಾಯ ಮುಂದುವರಿದಿದೆ.
ಕೋವಿಡ್ ಸಮಯದಲ್ಲೂ ಸೂಕ್ತ ಪರಿಹಾರ ಸಿಗಲಿಲ್ಲ, ಅತಿವೃಷ್ಟಿ ವೇಳೆಯೂ ನಮಗೆ ಅನುದಾನ ಸಿಕ್ಕಿಲ್ಲ. ಭದ್ರಾಮೇಲ್ದಂಡೆ ಯೋಜನೆಗೆ 5300 ಕೋಟಿ ಕೊಟ್ಟಿಲ್ಲ. ಇದು ಬಿಜೆಪಿ ವಿರುದ್ಧದ ಪ್ರತಿಭಟನೆ ಅಲ್ಲ. ಬದಲಾಗಿ ಹಣಕಾಸು ಹಂಚಿಕೆ, ಬರ ಪರಿಹಾರದಲ್ಲಿ ತಾರತಮ್ಯ ಧೋರಣೆ ಬಗ್ಗೆ ಪ್ರತಿಭಟನೆ ಎಂದು ತಿಳಿಸಿದರು.
