*ಶುದ್ಧ ಕುಡಿಯುವ ನೀರಿಗಾಗಿ ಹೋರಾಟ : ಲೋಕಸಭಾ ಚುನಾವಣೆ ಬಹಿಷ್ಕರಿಸಿದ ಗ್ರಾಮಸ್ಥರು*

Spread the love

ದೊಡ್ಡಬಳ್ಳಾಪುರ ಏಪ್ರಿಲ್ 07 ( ವಿಜಯ ಮಿತ್ರ ) : ದೊಡ್ಡ ತುಮಕೂರು ಮತ್ತು ಮಜಾರಹೊಸಹಳ್ಳಿ ಗ್ರಾಮ ಪಂಚಾಯ್ತಿಯ ಎಲ್ಲಾ ಮುಖಂಡರು ಹಾಗೂ ಗ್ರಾಮಸ್ಥರ ಒಮ್ಮತದೊಂದಿಗೆ ಈ ಬಾರಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಖ್ಯಾತ ವೈದ್ಯರಾದ ಡಾ. ಎಚ್. ಆಂಜಿನಪ್ಪ ತಿಳಿಸಿದರು.

ಮಜಾರಹೊಸಹಳ್ಳಿ ಗ್ರಾಮದಲ್ಲಿ ಆಯೋಜನೆ ಮಾಡಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲ್ಲೂಕಿನ ನಗರಸಭೆಯವರು, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿಯವರು ಮತ್ತು ಕಾರ್ಖಾನೆಗಳು ತಮ್ಮಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರನ್ನು ಮತ್ತು ರಾಸಾಯನಿಕ ನೀರನ್ನು ಶುದ್ದೀಕರಿಸದೆ ನೇರವಾಗಿ ಚಿಕ್ಕ ತುಮಕೂರು ಕೆರೆಗೆ ಬಿಡುತ್ತಿದ್ದಾರೆ.

 

ಇದರಿಂದ ಚಿಕ್ಕ ತುಮಕೂರು ಕೆರೆ ಮತ್ತು ದೊಡ್ಡ ತುಮಕೂರು ಕೆರೆ ಸಂಪೂರ್ಣ ಕಲುಷಿತಗೊಂಡಿದ್ದು.ಕೇವಲ ಕೆರೆ ನೀರು ಅಷ್ಟೇ ಅಲ್ಲದೆ ಕೊಳವೆ ಬಾವಿ ನೀರು ಮತ್ತು ಶುದ್ದೀಕರಣದ ಘಟಕದ ನೀರು ಸಹ ಕುಡಿಯಲು ಯೋಗ್ಯವಾಗಿಲ್ಲ ಎಂಬ ವರದಿ ಬಂದಿದೆ.

 

ಎರಡು ಪಂಚಾಯತಿಯ ಜನರು ಮೂರು ವರ್ಷಗಳಿಂದ ನಿರಂತರ ಹೋರಾಟಗಳನ್ನು ಮಾಡುತ್ತಾ ಬಂದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ನೀರು ಶುದ್ದೀಕರಿಸುವ ಕಾರ್ಯ ಇನ್ನು ಕೈಗೊಂಡಿಲ್ಲ.

ಈ ಹಿಂದೆ ಜಿಲ್ಲಾಧಿಕಾರಿಗಳು ಸಭೆ ನಡೆಸಿ, ಎರಡನೇ ಹಂತದ ಶುದ್ದೀಕರಣ ಘಟಕ ಮಾಡಲಾಗುವುದು ಎಂದು ತಿಳಿಸಿದ್ದರು.ಅದು ಕೇವಲ ಭರವಸೆಯಾಗಿಯೇ ಉಳಿದಿದೆ ನಮಗೆ ಮೂರನೇ ಹಂತದ ಶುದ್ದೀಕರಣ ಘಟಕವನ್ನು ಸ್ಥಾಪಿಸಬೇಕು ಎಂಬುದು ನಮ್ಮೆಲ್ಲರ ಒತ್ತಾಯವಾಗಿದೆ ಎಂದರು.

 

ಬೆಂಗಳೂರಿನ ಕೊಳಚೆ ನೀರನ್ನು ಎರಡನೇ ಹಂತ ಶುದ್ದೀಕರಿಸಿ ಕೋಲಾರದ ಕಡೆಗೆ ಹರಿಸುತ್ತಿದ್ದಾರೆ. ಇದರಲ್ಲಿ ರಾಸಾಯನಿಕ ಅಂಶಗಳು ಪತ್ತೆಯಾಗಿದ್ದು ಅದಕ್ಕೆ ಉದಾಹರಣೆಯಾಗಿ ಆ ನೀರಿನಲ್ಲು ಸಹ ಸಾವಿರಾರು ಮೀನುಗಳು ಸತ್ತ ಉದಾಹರಣೆ ಕಣ್ಣು ಮುಂದೆ ಇದೆ.

 

ಅಂತರ್ಜಲ ಸಹ ಕೆಟ್ಟಿರುವ ದಾಖಲಾತಿಗಳಿವೆ ಅಷ್ಟೇ ಏಕೆ ತರಕಾರಿಗಳಲ್ಲು ಸಹ ರಾಸಾಯನಿಕ ಅಂಶಗಳು ಇರುವುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಆದ್ದರಿಂದ ಎರಡನೇ ಹಂತದ ಶುದ್ದೀಕರಣ ಮಾಡುವುದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಆದ್ದರಿಂದ ಎರಡನೇ ಹಂತದ ಶುದ್ದೀಕರಣ ಘಟಕವನ್ನು ಕೈ ಬಿಟ್ಟು ಮೂರನೇ ಹಂತದ ಶುದ್ದೀಕರಣ ಘಟಕ ಮಾಡಬೇಕೆಂದು ಅಗ್ರಹಿಸಿದರು. ಕುಡಿಯುವ ನೀರು ನಮ್ಮ ಹಕ್ಕು ನಮ್ಮ ಒತ್ತಾಯವನ್ನು ಈಡೇರಿಸದ ಪಕ್ಷದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯನ್ನು ಸಾಮೂಹಿಕವಾಗಿ ಬಹಿಷ್ಕರಿಸಲು ತೀರ್ಮಾನಿಸಿದ್ದೇವೆ ಎಂದರು.

 

 

*ಪ್ರಮುಖ ಒತ್ತಾಯಗಳೇನು..?*

 

(1) ದೊಡ್ಡಬಳ್ಳಾಪುರ ನಗರಸಭೆ ಮತ್ತು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯ ಒಳಚರಂಡಿ ನೀರನ್ನು ಮೂರನೇ ಹಂತ ಶುದ್ದೀಕರಣ ಘಟಕವನ್ನು ಸ್ಥಾಪಿಸಬೇಕು.

 

(2) ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರು ಆದಂತಹ ಕೆ ಎಚ್ ಮುನಿಯಪ್ಪ ರವರು ಎರಡು ಪಂಚಾಯತಿಯ ಎಲ್ಲ ಹಳ್ಳಿಗಳಿಗೆ ಕುಡಿಯಲು ಜಕ್ಕಲಮಡಗು ನೀರನ್ನು ವ್ಯವಸ್ಥೆಮಾಡಬೇಕೆಂದು ತಿಳಿಸಿದ್ದರು. ಆದರೆ ಅದು ಕೆಲವೇ ಹಳ್ಳಿಗಳಿಗೆ ಕೊಟ್ಟು ಉಳಿದ ಹಳ್ಳಿಗಳಿಗೆ ಕೊಡುತ್ತಿಲ್ಲ. ಎಲ್ಲ ಹಳ್ಳಿಗಳಿಗೂ ಕುಡಿಯಲು ಜಕ್ಕಲಮಡಗು ನೀರನ್ನು ವ್ಯವಸ್ಥೆಮಾಡಬೇಕು.

 

(3) ಎರಡು ಪಂಚಾಯತಿಯ ಪ್ರತಿ ಮನೆಗೆ ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಬೇಕು, ಸದರಿ ಕಾಮಗಾರಿಗೆ ತಗುಲುವ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಅಥವಾ ಕಾರ್ಖಾನೆಗಳ ಧನಸಹಾಯದಿಂದ ಪ್ರತಿ ಮನೆಗೂ ಕುಡಿಯುವ ನೀರಿಗಾಗಿ ಮಳೆ ಕೊಯ್ದು ಪದ್ಧತಿಯನ್ನು ಮಾಡಿಕೊಡಬೇಕು ಎಂಬುದಾಗಿದೆ.

 ಈ ಸಂದರ್ಭದಲ್ಲಿ   ಮುಖಂಡರಾದ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಬಿ.ಹೆಚ್.ಕೆಂಪಣ್ಣ,ವೈದ್ಯರಾದ ಡಾ ವಿಜಯ್ಬ ಕುಮಾರ್, ಬಮುಲ್  ನಿರ್ದೇಶಕರಾದ ಬಿ.ಸಿ.ಆನಂದ್, ಎಂ ಪಿ ಸಿ ಎಸ್ ಅಧ್ಯಕ್ಷರಾದ ಟಿ. ರಂಗರಾಜು, ಆದಿತ್ಯ ನಾಗೇಶ್, ಸಂದೇಶ್,ಹಾಲಿ ಸದಸ್ಯರಾದ ಚೈತ್ರ ಭಾಸ್ಕರ್, ಮಾಜಿ ಉಪಾಧ್ಯಕ್ಷರಾದ ಚೈತ್ರ ಶ್ರೀಧರ್, ಎಲ್ ಐ ಸಿ ಮಂಜುನಾಥ್  ರೈತ ಮುಖಂಡರಾದ ವಸಂತ್, ಸತೀಶ್, ರಮೇಶ್, ಸೇರಿದಂತೆ ನೂರಾರು ರೈತರು ಎರಡು ಪಂಚಾಯಿತಿಯ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *