
ದೊಡ್ಡಬಳ್ಳಾಪುರ ಏಪ್ರಿಲ್ 08 ( ವಿಜಯ ಮಿತ್ರ ) : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿಗಳಿಂದ ಮೋಸ ಮಾಡಿ ಗೆದ್ದಿದೆ. ಈ ಲೋಕಸಭೆ ಚುನಾವಣೆಯಲ್ಲಿ ಮೋಸಕ್ಕೆ ಅವಕಾಶ ಮಾಡಿಕೊಡದೆ ನರೇಂದ್ರ ಮೋದಿಯವರನ್ನು ಗೆಲ್ಲಿಸಬೇಕು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್ ಹೇಳಿದರು.
ದೊಡ್ಡಬಳ್ಳಾಪುರ ಹಾಗೂ ಹೊಸಕೋಟೆಯಲ್ಲಿ ನಡೆದ ಚುನಾವಣಾ ಪ್ರಚಾರದ ಸಮಾವೇಶದಲ್ಲಿ ಅವರು ಮಾತನಾಡಿದರು.
ಲೋಕಸಭಾ ಚುನಾವಣೆಯು ದೇಶದ ಪ್ರಧಾನಮಂತ್ರಿಯನ್ನು ಆರಿಸುವ ಚುನಾವಣೆ. ಈ ಬಾರಿಯೂ ನರೇಂದ್ರ ಮೋದಿಯವರನ್ನೇ ಹ್ಯಾಟ್ರಿಕ್ ಆಗಿ ಗೆಲ್ಲಿಸಬೇಕೆಂದು ಜನರು ನಿರ್ಧರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮಣ್ಣಿನ ಮಗ ಎಚ್.ಡಿ.ದೇವೇಗೌಡರ ಸಮಾಗಮವಾಗಿದ್ದು, ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ಕಂಡುಬಂದಿದೆ. ರಾಜ್ಯದ ಆರೂವರೆ ಕೋಟಿ ಜನರ ಏಳಿಗೆಗಾಗಿ ಈ ಸಮಾಗಮ ನಡೆದಿದೆ ಎಂದರು.
ಬಡಜನರ ಕಣ್ಮಣಿ ಎಂದು ಎಚ್.ಡಿ.ಕುಮಾರಸ್ವಾಮಿ ಹೆಸರಾಗಿದ್ದಾರೆ. ಅವರ ಕಾಲದಲ್ಲಿ ಹಾಗೂ ಬಿಜೆಪಿ ಸರ್ಕಾರದ ಕಾಲದಲ್ಲಿ ನೀಡಿದ ಯೋಜನೆಗಳನ್ನು ಈಗಿನ ಕಾಂಗ್ರೆಸ್ ಸರ್ಕಾರ ಕಿತ್ತುಕೊಂಡಿದೆ. ವಿದ್ಯುತ್ ಉಚಿತ ನೀಡುತ್ತೇವೆಂದು ವಿದ್ಯುತ್ ಇಲ್ಲದಂತೆ ಮಾಡಿದ್ದಾರೆ. ರೈತರು ಒಂದು ಟ್ರಾನ್ಸ್ಫಾರ್ಮರ್ ಹಾಕಿಸಿಕೊಳ್ಳಬೇಕೆಂದರೆ *4-5 ಲಕ್ಷ ರೂ.* ನೀಡಬೇಕಿದೆ. ಬಿಜೆಪಿ ಕಾಲದಲ್ಲಿ ಕೇವಲ 25 ಸಾವಿರ ರೂ.ನಲ್ಲಿ ಈ ಕೆಲಸ ನಡೆಯುತ್ತಿತ್ತು. ದೇಶದಲ್ಲಿ 10 ಕೋಟಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ನೀಡಲಾಗಿದೆ ಎಂದರು.
ನಿಮ್ಮ ಸಂಸದರು 400 ರಲ್ಲಿ ಇರಬೇಕಾ, ವಿರೋಧ ಪಕ್ಷದಲ್ಲಿ ಕೂರುವ 40 ರಲ್ಲಿ ಇರಬೇಕಾ ಎಂದು ಪ್ರಶ್ನೆ ಮಾಡಿಕೊಳ್ಳಬೇಕು. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿ, ಆರೋಗ್ಯ ಸಚಿವನಾಗಿ, ಕೋವಿಡ್ ಹೋರಾಟದ ಸೇನಾನಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಈ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆಯನ್ನು ನೂರಕ್ಕೆ ನೂರು ತರುತ್ತೇನೆ. ದೊಡ್ಡಬಳ್ಳಾಪುರಕ್ಕೆ ಈಗಾಗಲೇ ಜಿಲ್ಲಾಸ್ಪತ್ರೆ ನೀಡಲಾಗಿದೆ. ಜಕ್ಕಲಮಡಗು ಜಲಾಶಯದಿಂದ ದೊಡ್ಡಬಳ್ಳಾಪುರದ ಜನರಿಗೆ ಕುಡಿಯುವ ನೀರು ನೀಡಲಾಗುತ್ತಿದೆ ಎಂದು ವಿವರಿಸಿದರು.
*ಭಯೋತ್ಪಾದಕರಿಗೆ ಮೃದು ಧೋರಣೆ*
ಹೊಸಕೋಟೆಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಡಾ.ಕೆ.ಸುಧಾಕರ್, ಕಾಂಗ್ರೆಸ್ ಸರ್ಕಾರ ಭಯೋತ್ಪಾದಕರಿಗೆ ಮೃದು ಧೋರಣೆ ತೋರಿಸುತ್ತದೆ. ಈ ಸರ್ಕಾರ ಬಂದ ಬಳಿಕ ಬೆಂಗಳೂರಿನಲ್ಲಿ ಬಾಂಬ್ ಸ್ಪೋಟವಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಆದರೆ ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ಹೋಗಿ ದಾಳಿ ಮಾಡುವ ಮಟ್ಟಿಗೆ ಎದೆಗಾರಿಕೆ ತೋರುತ್ತದೆ ಎಂದರು.
ಕಾಂಗ್ರೆಸ್ ರಾಜ್ಯಕ್ಕೆ ಕಾಲಿಟ್ಟರೆ ಬರಗಾಲ ಬರುತ್ತದೆ, ರೈತರಿಗೆ ಬೆಳೆ ನಷ್ಟವಾದರೂ ಪರಿಹಾರ ನೀಡಿಲ್ಲ. ಬಿಜೆಪಿ ಸರ್ಕಾರವಿದ್ದಾಗ ಪ್ರವಾಹದಿಂದ ಬೆಳೆ ನಷ್ಟವಾದಾಗ, 48 ಗಂಟೆಯಲ್ಲಿ ಅಂದಾಜು ತಿಳಿದು ಒಂದೇ ತಿಂಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಎರಡು ಪಟ್ಟು ಅಧಿಕ ಪರಿಹಾರ ನೀಡಲಾಗಿತ್ತು. ಕಾಂಗ್ರೆಸ್ ಸರ್ಕಾರವನ್ನು ಈ ಬಗ್ಗೆ ಕೇಳಿದರೆ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಾರೆ. ಯುಪಿಎ ಇದ್ದಾಗ *1.50 ಲಕ್ಷ ಕೋಟಿ* ರೂ. ರಾಜ್ಯಕ್ಕೆ ಬಂದರೆ, ಪ್ರಧಾನಿ ಮೋದಿ ಸರ್ಕಾರದಿಂದ *4.52 ಲಕ್ಷ ಕೋಟಿ ರೂ.* ಬಂದಿದೆ. ಈಗಿನ ಸರ್ಕಾರ ನೀರನ್ನು ಕಾವೇರಿಗೆ ಕೊಟ್ಟಿದೆ. ಮೇಕೆದಾಟುವಿಗಾಗಿ ಪಾದಯಾತ್ರೆ ಮಾಡಿದ್ದು, ಈಗ *ಮೇಕೆಯ ಶಬ್ದವೂ ಕೇಳುತ್ತಿಲ್ಲ.* ಬಡವರು ಬಡವರಾಗಿಯೇ ಉಳಿಯಬೇಕೆನ್ನುವುದು ಕಾಂಗ್ರೆಸ್ನ ಧ್ಯೇಯ ಎಂದರು.
ದಲಿತರಿಗೆ ಮೀಸಲಿಟ್ಟ ಹಣವನ್ನು ಕಾಂಗ್ರೆಸ್ ಗ್ಯಾರಂಟಿಗೆ ಬಳಸಿದೆ. ಆದರೆ ಪ್ರಧಾನಿ ಮೋದಿ ಮಹಿಳೆಯರು, ಯುವಜನರು, ಮಕ್ಕಳಿಗೆ ಉತ್ತಮ ಯೋಜನೆ ನೀಡಿದ್ದಾರೆ. ಆದ್ದರಿಂದ ಈ ಬಾರಿ ಮೋದಿ ಗ್ಯಾರಂಟಿಗೆ ಮತ ನೀಡಬೇಕೆಂದು ಜನರು ತೀರ್ಮಾನಿಸಿದ್ದಾರೆ ಎಂದರು.
ಸರ್ಕಾರಿ ಜಮೀನನ್ನು ಗುರುತಿಸಿ ಜನರಿಗೆ ವಸತಿ ನಿರ್ಮಿಸಲಾಗಿದೆ. ನಾನು ಚಿಕ್ಕಬಳ್ಳಾಪುರದಲ್ಲಿ 22 ಸಾವಿರ ನಿವೇಶನಗಳನ್ನು ಬಡಜನರಿಗೆ ನೀಡಿದ್ದೆ. ಹೊಸಕೋಟೆಯಲ್ಲಿ 291 ಎಕರೆ ಜಾಗವನ್ನು ಗುರುತಿಸಿ ಅಲ್ಲಿ ಬಡಜನರಿಗೆ ನಿವೇಶನ ನೀಡಲು ನಿರ್ಧರಿಸಲಾಯಿತು. ಅದರಿಂದಾಗಿ *10,450 ಕುಟುಂಬಗಳಿಗೆ* ಉಚಿತ ನಿವೇಶನ ಸಿಕ್ಕಿದೆ. ಅಂತಹ ಪುಣ್ಯದ ಕೆಲಸವನ್ನು ಎಂಟಿಬಿ ನಾಗರಾಜ್ ಮಾಡಿದ್ದಾರೆ. ಆದರೆ ಈಗಿನ ಶಾಸಕರು ಹಳೆಯ ಯೋಜನೆಗಳನ್ನು ಈಗ ಉದ್ಘಾಟಿಸಿ ಹೆಸರು ಪಡೆಯುತ್ತಿದ್ದಾರೆ ಎಂದರು.
ಚಿಕ್ಕಬಳ್ಳಾಪುರ ನಗರದಲ್ಲಿ 2 ಸಾವಿರ ನಿವೇಶನಗಳನ್ನು ಅಲ್ಪಸಂಖ್ಯಾತರಿಗೆ ನೀಡಿದ್ದೇನೆ. ಪ್ರಧಾನಿ ಮೋದಿಯವರು ಹೇಳುವಂತೆ ರೈತರು, ಮಹಿಳೆಯರು, ಯುವಜನರು ಹಾಗೂ ಕಾರ್ಮಿಕರ ಎಂಬ ನಾಲ್ಕು ವರ್ಗಗಳಿಗೆ ನಾವು ಹೆಚ್ಚು ಗಮನ ನೀಡುತ್ತೇವೆ ಎಂದರು.
ಮಾಜಿ ಸಚಿವ ಎಂಟಿಬಿ ನಾಗರಾಜ್, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಶಾಸಕ ಧೀರಜ್ ಮುನಿರಾಜು, ಜೆಡಿಎಸ್ ಮುಖಂಡ ನಿಸರ್ಗ ನಾರಾಯಣಸ್ವಾಮಿ, ಜಿ.ಕೆ.ಕೃಷ್ಣಾ ರೆಡ್ಡಿ, ಬಿ.ಮುನೇಗೌಡ, ಶರವಣ, ಕಾರ್ಯಕರ್ತರು ಉಪಸ್ಥಿತರಿದ್ದರು.