ದೊಡ್ಡಬಳ್ಳಾಪುರ ಏಪ್ರಿಲ್ 16 ( ವಿಜಯಮಿತ್ರ ) : ಏಪ್ರಿಲ್ 17 ರಂದು ತಾಲೂಕಿನಾದ್ಯಂತ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಸೇರಿದಂತೆ ಹಲವು ಗಣ್ಯರು ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದಾರೆ ಹಾಗೂ ಏಪ್ರಿಲ್ 18ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಾಲೂಕಿಗೆ ಆಗಮಿಸಲಿದ್ದು ರ್ಯಾಲಿ ಮೂಲಕ ಮತಯಾಚನೆ ಮಾಡಲಿದ್ದಾರೆ ಎಂದು ಮಾಜಿ ಶಾಸಕ ಟಿ ವೆಂಕಟರಮಣಯ್ಯ ತಿಳಿಸಿದರು

ತಾಲೂಕಿನ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಕ್ಕಲ ಮಡುಗು ಕುಡಿಯುವ ನೀರಿನ ಯೋಜನೆಗೆ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಅಧಿಕಾರದ ಅವಧಿಯಲ್ಲಿ ಶಂಕು ಸ್ಥಾಪನೆ ಮಾಡಲಾಗಿತ್ತು. 2009 – 2010 ರಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು. ಕಾರಣಾಂತರಗಳಿಂದ 2013ರ ವರೆಗೂ ತಾಲ್ಲೂಕಿನ ಜನತೆಗೆ ಯಾವುದೇ ಫಲ ನೀಡಿರಲಿಲ್ಲ.
ತದನಂತರ ಸಿದ್ದರಾಮಯ್ಯ ರವರ ನೇತೃತ್ವದಲ್ಲಿ ಹಲವು ಸಭೆ ನೆಡೆಸಲಾಯಿತು ಅಂದು ಸಭೆಯಲ್ಲಿ ಭಾಗಿಯಾಗಿದ್ದ ಶಾಸಕ ಕೆ.ಸುಧಾಕರ್ ನೀರು ಬಿಡಲು ಒಪ್ಪಿಗೆ ಸೂಚಿಸಲಿಲ್ಲ ಆದರೆ ಇಂದು ತಾಲೂಕಿನ ಜನತೆಗೆ ನೀರು ಒದಗಿಸುವ ಭರವಸೆ ನೀಡುತ್ತಿರುವುದು ಹಾಸ್ಯಾಸ್ಪದವಾಗಿದೆ.
ಬಿಜೆಪಿ ಒಂದು ಸುಳ್ಳಿನ ಪಕ್ಷ. ಕೇವಲ ಸುಳ್ಳುಗಳನ್ನು ಹೇಳುವ ಮೂಲಕ ಅಧಿಕಾರವನ್ನು ಪಡೆಯುವ ಪಕ್ಷ ಬಿಜೆಪಿ,ಸುಳ್ಳು ಹೇಳುವ ನಾಯಕರೇ ತುಂಬಿರುವ ಪಕ್ಷ ಬಿಜೆಪಿ ಎಂದು ಆರೋಪಿಸಿದರು.
*ನೇಕಾರಿಕೆ ಕುರಿತು ವಿಶೇಷ ಕಾಳಜಿ*
ನೇಕಾರರ ಬಗ್ಗೆ ವಿಶೇಷ ಕಾಳಜಿ ಇರುವ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೇಕಾರರಿಗೆ ವಿಶೇಷ ಯೋಜನೆ ರೂಪಿಸಿದ್ದು ನಮ್ಮ ಕಾಂಗ್ರೆಸ್ ಸರ್ಕಾರ 5 ಗ್ಯಾರೆಂಟಿ ಯೋಜನೆಗಳ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸಿದೆ ಅಂತೆಯೇ 6ನೇ ವಿಶೇಷ ಯೋಜನೆಯಾಗಿ 10 ಹೆಚ್ ಪಿ ವಿದ್ಯುತ್ ಉಚಿತವಾಗಿ ನೀಡಿದ್ದು ನೇಕಾರ ಸಮುದಾಯಕ್ಕೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೀಡಿರುವ ವಿಶೇಷ ಕೊಡುಗೆಯಾಗಿದೆ ಎಂದರು.
*ಜನಧನ್ ಯೋಜನೆ ಮೂಲಕ ಮೋಸ*
ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕಾಗಿ ಸುಳ್ಳುಗಳ ಸರಮಾಲೆಯನ್ನು ಹೇಳಿದ ಬಿಜೆಪಿ ವಿದೇಶದಲ್ಲಿರುವ ಕಪ್ಪು ಹಣ ತಂದು ಭಾರತ ದೇಶದ ಪ್ರತಿಯೊಬ್ಬ ಪ್ರಜೆಯ ಖಾತೆಗೆ 15 ಲಕ್ಷ ಹಾಕುವುದಾಗಿ ಘೋಷಣೆ ಮಾಡಿತ್ತು. ಅದು ಇಂದಿಗೂ ಕನಸಾಗೇ ಉಳಿದಿದೆ ಏಕೆಂದರೆ ಅದು ಮತ ಪಡೆಯಲು ಬಿಜೆಪಿ ಹೇಳಿದ್ದು ಸುಳ್ಳು ಎಂದರು.
ಜನರ ಅನುಕೂಲಕಕ್ಕಾಗಿ ಪಡಿತರ ವಿತರಣೆಯಲ್ಲಿ ಪರಿಷ್ಕರಣೆ
ಆರು ಏಳು ಕಿಲೋಮೀಟರ್ ನಡೆದು ಪಡಿತರ ಪಡೆಯುವ ಪರಿಸ್ಥಿತಿ ನಮ್ಮಲ್ಲಿತ್ತು ಅಂತಹ ಪರಿಸ್ಥಿತಿಯನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ನ್ಯಾಯಬೇಲೆ ಅಂಗಡಿಗಳನ್ನು ಕೇವಲ 2km ವ್ಯಾಪ್ತಿಗೆ ಇಳಿಸಿ ಗ್ರಾಮೀಣ ಭಾಗದ ಜನತೆಗೆ ಅನುಕೂಲ ಮಾಡಿಕೊಟ್ಟಿದೆ ಎಂದರು.
*ಮೋದಿ ಆಡಳಿತ ಕುರಿತು ಲೇವಡಿ*
ಕಳೆದ ಹತ್ತು ವರ್ಷಗಳಿಂದ ಕೇವಲ ಸುಳ್ಳುಗಳನ್ನೇ ಜನರಿಗೆ ಭರವಸೆಗಳನ್ನಾಗಿ ನೀಡುತ್ತಾ ಬಂದಿರುವ ಬಿಜೆಪಿ ಸರ್ಕಾರ ಬಡ ಮಹಿಳೆಯರಿಗೆ ಕೇವಲ 450 ರೂಪಾಯಿಗಳಿಗೆ ಗ್ಯಾಸ್ ನೀಡುವುದಾಗಿ ಘೋಷಣೆ ಮಾಡಿ ಏಕಾಏಕಿ 1050ರ ಗಡಿದಾಟಿಸಿದ್ದು ಜನತೆ ಮರೆತಿಲ್ಲ ಗ್ರಾಮೀಣ ಭಾಗದ ಕಡುಬಡ ಕುಟುಂಬಗಳಿಗೆ ಉಜ್ವಲ್ ಯೋಜನೆ ಮುಖಾಂತರ ಉಚಿತ ಗ್ಯಾಸ್ ಅಸೆ ನೀಡುವುದಾಗಿ ಆಸೆ ಹುಟ್ಟಿಸಿ ಯೋಜನೆಯನ್ನು ಅರ್ಧಕ್ಕೆ ಕೈಬಿಟ್ಟಿದೆ. ಎಂದು ಆರೋಪಿಸಿದರು .
*ಕಾಂಗ್ರೆಸ್ ಗ್ಯಾರೆಂಟಿಯಿಂದಾದ ಲಾಭ*
ಕಾಂಗ್ರೆಸ್ ನೀಡಿರುವ ಗ್ಯಾರೆಂಟಿ ಯೋಜನೆಗಳಿಂದ ಸಾಕಷ್ಟು ಅನುಕೂಲತೆಗಳೇ ಆಗಿವೆ.ರಾಜ್ಯದ ಸಾಧಾರಣ ಕುಟುಂಬಗಳ ಆರ್ಥಿಕತೆ ಹೆಚ್ಚಿದ್ದು. ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಈ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿದೆ ಎಂದರು. ತಾಲೂಕಿನಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಫಲವಾಗಿ ಸರಿಸುಮಾರು 400 ನೂತನ ದ್ವಿಚಕ್ರ ವಾಹನಗಳು, 200 ಫ್ರಿಡ್ಜ್, 150 ವಾಷಿಂಗ್ ಮಿಷಿನ್ ಮಾರಾಟವಾಗಿದೆ ಎಂಬ ಮಾಹಿತಿ ದೊರೆತಿದ್ದು. ಈ ಮಾರಾಟಕ್ಕೆ ಮೂಲ ಕಾರಣ ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರೆಂಟಿ ಯೋಜನೆಗಳೇ ಕಾರಣ ಎಂಬುದು ಅತ್ಯಂತ ಸಂತೋಷ ಸಂಗತಿಯಾಗಿದೆ. ಈ ಕುರಿತು ವ್ಯಾಪಾರಸ್ಥರು ಸಂತಸ ವ್ಯಕ್ತಪಡಿಸಿದ್ದು ವ್ಯವಹಾರದಲ್ಲಿ ನೂತನ ಚೇತನ್ಯ ಮೂಡಿದೆ ಎಂದಿದ್ದಾರೆ.
*ಜಿಲ್ಲಾಸ್ಪತ್ರೆ ನಿರ್ಮಾಣ ನಮ್ಮ ಪ್ರಯತ್ನದ ಫಲ*
ತಾಲೂಕಿನಲ್ಲಿ ನಿರ್ಮಾಣಕ್ಕೆ ಸಿದ್ಧವಾಗಿರುವ ಜಿಲ್ಲಾ ಆಸ್ಪತ್ರೆ ಕುರಿತು ಹಲವಾರು ಊಹಾಪೋಹಗಳು ಹರಿದಾಡುತ್ತಿವೆ. ಅವೆಲ್ಲವೂ ಸತ್ಯಕ್ಕೆ ದೂರವಾಗಿದ್ದು. ಈ ಹಿಂದೆ ಜಿಲ್ಲಾ ಕೇಂದ್ರ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ವಿಷಯದಲ್ಲಿ ದೊಡ್ಡಬಳ್ಳಾಪುರ ತಾಲೂಕಿಗೆ ಆದ ಮೋಸವನ್ನು ಪ್ರಶ್ನಿಸಿ ಹಲವು ಬಾರಿ ಸಭೆ, ಚರ್ಚೆಗಳು ನಡೆಸಿದ್ದೇವು. ಆ ಸಂದರ್ಭದಲ್ಲಿ ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ನಡೆದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳು ನಾಲ್ಕು ತಾಲ್ಲೂಕಿನ ಮುಖಂಡರನ್ನು ಕರೆದು ಸಭೆಯಲ್ಲಿ ನಿರ್ಣಾಯಕೈಗೊಳ್ಳಲಾಗಿದ್ದು . ಅಂದಿನ ತೀರ್ಮಾನದಂತೆ ಸರಿಸುಮಾರು 9 1/2 ಎಕ್ಕರೆ ಸ್ಥಳದಲ್ಲಿ ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ಹಸ್ತು ಎಂದಿದೆ . ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಲವು ರಾಜ್ಯನಾಯಕರನ್ನು ನಿರಂತರ ಭೇಟಿ ಮಾಡುವ ಮುಖಾಂತರ ತಾಲೂಕಿನಲ್ಲಿ ಜಿಲ್ಲಾ ಆಸ್ಪತ್ರೆ ನಿರ್ಮಾಣದ ಕನಸು ನನಸಾಗಿದೆ ಎಂದರು.
ಈ ಸಂದರ್ಭದಲ್ಲಿ ಕಸಬಾ ಬ್ಲಾಕ್ ಅಧ್ಯಕ್ಷ ವೆಂಕಟೇಶ್ ( ಅಪ್ಪಿ ), ಮುಖಂಡರಾದ ಬೈರೇಗೌಡ,ಹೇಮಂತ್ ರಾಜು, ಆನಂದ್, ಅಂಜನ್ ಮೂರ್ತಿ, ರೇವತಿ ಅನಂಥರಾಮ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
