ದೊಡ್ಡಬಳ್ಳಾಪುರ : ಆರೋಗ್ಯ ಇಲಾಖೆ, ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್, ಡಿಮೆನ್ಶಿಯಾ ಇಂಡಿಯಾ ಅಲಯನ್ಸ್ (DIA), ನಿಮ್ಯಾನ್ಸ್, ಸೌಭಾಗ್ಯ ಸೇವಾ ಟ್ರಸ್ಟ್, ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆಗಳ ಜಂಟೀ ಸಹಭಾಗಿತ್ವದಲ್ಲಿ ಡಿಮೆನ್ಷಿಯಾ ಫ್ರೆಂಡ್ಸ್ ಮತ್ತು ಡಿಮೆನ್ಷಿಯಾ ಕುರಿತು ಜಾಗೃತಿ ಕಾರ್ಯಾಗಾರವನ್ನು ದೊಡ್ಡಬಳ್ಳಾಪುರ ದಲ್ಲಿ ಆಶಾ ಕಾರ್ಯಕರ್ತರಿಗಾಗಿ ಆಯೋಜಿಸಲಾಗಿತ್ತು.
ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ ಕುರಿತು
ಬೆಂಗಳೂರುನಲ್ಲಿ 25 ವರ್ಷಗಳಿಂದ ವೃದ್ಧರ ಮತ್ತು ಡಿಮೆನ್ಷಿಯಾ ಹೊಂದಿರುವ ವ್ಯಕ್ತಿಗಳ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿರುವ ಲಾಭ ರಹಿತ ಸಂಸ್ಥೆಯಾಗಿದೆ. ಕುಟುಂಬ ಬಾಂಧವ್ಯವನ್ನು ಬಲಪಡಿಸಲು ಮತ್ತು ಹಿರಿಯ ನಾಗರಿಕರಿಗಾಗಿ ಸಮುದಾಯ ಆಧಾರಿತ ಬೆಂಬಲ ವ್ಯವಸ್ಥೆಯನ್ನು ಪ್ರೋತ್ಸಾಹಿಸಲು ವೈವಿಧ್ಯಮಯ ಮತ್ತು ಅಗತ್ಯ ಯೋಜನೆಗಳ ಮೂಲಕ ಈ ಟ್ರಸ್ಟ್ ನೆರವು ನೀಡುತ್ತದೆ.
ಏನಿದು DIA
ಡಿಮೆನ್ಷಿಯಾ ಇಂಡಿಯಾ ಅಲಯನ್ಸ್ (DIA)ದೇಶವ್ಯಾಪಿ ಸಂಸ್ಥೆಯಾಗಿದ್ದು, ಡಿಮೆನ್ಷಿಯಾ ರೋಗ ನಿರ್ಣಯಗೊಂಡಿರುವ ವ್ಯಕ್ತಿಗಳ ಕುಟುಂಬಗಳನ್ನು ಜಾಗೃತಿ ಮೂಡಿಸುವಲ್ಲಿ ಮತ್ತು ಡಿಮೆನ್ಷಿಯಾ ಇರುವ ವ್ಯಕ್ತಿಗಳಿಗೆ ಗುಣಮಟ್ಟದ ಆರೈಕೆ ಒದಗಿಸುವ ಪ್ರಕ್ರಿಯೆಯಲ್ಲಿ ಸಹಾಯ ಮಾಡುತ್ತಿದೆ.
ಡಿಮೆನ್ಷಿಯಾ ಸಹಾಯವಾಣಿ ಸಂಖ್ಯೆ 8585990990.
ತಾಲ್ಲೂಕಿನ ಸುಮಾರು 60 ಆಶಾ ಕಾರ್ಯಕರ್ತರಿಗೆ ಡಿಮೆನ್ಷಿಯಾ, ತಪಾಸಣಾ ಪ್ರಕ್ರಿಯೆ ಮತ್ತು ತಮ್ಮ ಸಮುದಾಯದಲ್ಲಿ ಡಿಮೆನ್ಷಿಯಾ ಶಂಕೆ ಇರುವ ಅಥವಾ ಡಿಮೆನ್ಷಿಯಾ ರೋಗ ನಿರ್ಣಯಗೊಂಡಿರುವ ವೃದ್ಧರಿಗೆ ಹೇಗೆ ಸಹಾಯ ಮಾಡಬಹುದು ಎಂಬ ಬಗ್ಗೆ ಮಾಹಿತಿಗಳನ್ನು ಕಾರ್ಯಾಗಾರದಲ್ಲಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಡಾ. ಮಂಜುನಾಥ್ ಮಾತನಾಡಿ ಹಿರಿಯ ನಾಗರೀಕರ ಸೇವೆಯು ಸಮಾಜದಲ್ಲಿ ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿರುವ ಸೇವೆಯಾಗಿದೆ. ಹಿರಿಯ ನಾಗರೀಕರಿಗೆ ಸಾಂತ್ವಾನ, ಆರೈಕೆ, ರಕ್ಷಣೆ ಹಾಗೂ ಇತರೆ ಸೇವಾ ಸೌಲಬ್ಯತೆಗಳನ್ನು ಒದಗಿಸುವುದು ಅಗತ್ಯವಾಗಿದೆ. ತಾಲ್ಲೂಕಿನಲ್ಲಿ ಹಿರಿಯ ನಾಗರೀಕರ ಸೇವೆಗಾಗಿ 14 ಹಾಸಿಗೆಗಳ ಪ್ರತ್ಯೇಕ ವಾರ್ಡ್ ಕಾರ್ಯಾರಂಭ ಆಗಿದ್ದು ಸದಾ ಕಾಲ ಬೆಡ್ ಗಳು ಭರ್ತಿ ಆಗಿರುತ್ತವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ವಿನ ಸಂಖ್ಯೆಯ ಹಾಸಿಗೆಗಳನ್ನು ಹೊಂದುವ ಅಗತ್ಯತೆ ಇರುತ್ತದೆ ಎಂದು ಅಭಿಪ್ರಾಯ ಪಟ್ಟರು.
ಹಿರಿಯ ನಾಗರೀಕರಿಗೆ ರೋಗ ನಿರೋಧಕ ಶಕ್ತಿಯು ಕಡಿಮೆ ಇರುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಅವರಿಗೆ ಸೇವೆಯನ್ನು ನೀಡುವ ಬಗ್ಗೆ ಗಮನಹರಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ನಿಮ್ಯಾನ್ಸ್ ಆಸ್ಪತ್ರೆಯ ಡಾ.ಆಶಾ, ಡಾ.ಅನ್ನಪೂರ್ಣ, ಸಾರ್ವಜನಿಕ ಆಸ್ಪತ್ರೆಯ ಡಾ.ಮಂಜುನಾಥ್, ಡಾ.ಪರಮೇಶ್ವರ, ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆಯ ಅಮೇಲಿ ನಾಯಕ್, ಸೌಭಾಗ್ಯ ಸೇವಾ ಟ್ರಸ್ಟ್ ನ ಅಧ್ಯಕ್ಷ ರಾಜಗೋಪಾಲ್ ಹಾಗೂ ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ ನ ಸುರೇಶ್ ಹಾಗೂ ತಂಡದ ಸದಸ್ಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
