
ದೊಡ್ಡಬಳ್ಳಾಪುರ : ದೊಡ್ಡಬಳ್ಳಾಪುರ ನಗರ ಕೇಂದ್ರದಿಂದ ಕೇವಲ 3 ಕಿ.ಮೀ ಅಂತರದಲ್ಲಿರುವ ಮಲ್ಲಾತಹಳ್ಳಿ ಗ್ರಾಮದಲ್ಲಿ ಇವತ್ತಿಗೂ ಅಸ್ಪೃಶ್ಯತೆ ಆಚರಣೆ ಜೀವಂತವಾಗಿದೆ, ಇಲ್ಲಿನ ದೇವಸ್ಥಾನಗಳಿಗೆ ದಲಿತರ ಪ್ರವೇಶವಿಲ್ಲ, ಬಾಗಿಲಲ್ಲೇ ನಿಂತು ದೇವರಿಗೆ ಕೈ ಮುಗಿಯ ಬೇಕು, ದಲಿತರ ಪೂಜಾ ಸಾಮಾಗ್ರಿಗಳನ್ನು ಸಹ ದೇವಸ್ಥಾನದ ಒಳಗೆ ತೆಗೆದುಕೊಂಡು ಹೋಗುವುದಿಲ್ಲ, ಕಾಂಪೌಂಡ್ ಹೊರಗಡೆಯ ದೇವರಿಗೆ ಹಣ್ಣುಕಾಯಿ ಕೊಟ್ಟು ಪೂಜೆ ಮಾಡಿಸಿಕೊಂಡು ಬರುವ ಪರಿಸ್ಥಿತಿ ಎದುರಾಗಿದೆ ಎಂದು ಗ್ರಾಮದ ಅಶೋಕ್ ತಿಳಿಸಿದ್ದಾರೆ.
ಭಾರತದಲ್ಲಿ ಇವತ್ತಿಗೂ ಅಸ್ಪೃಶ್ಯತೆ ಆಚರಣೆ ಜೀವಂತವಿದೆ ಎನ್ನುವಂತೆ ದಲಿತರ ಮೇಲೆ ನಿರಂತರ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಲೇ ಇವೆ, ಆದರೂ ಬುದ್ದಿ ಕಲಿಯದ ಕೆಲವರು ದಲಿತರ ಮೇಲೆ ದೌರ್ಜನ್ಯವನ್ನ ನಡೆಸುತ್ತಲೇ ಬಂದಿದ್ದಾರೆ.ಹಿಂದಿನಿಂದ ಮಲ್ಲಾತಹಳ್ಳಿ ಗ್ರಾಮದಲ್ಲಿ ಕೆಲ ಸಮುದಾಯದವರು ಅಸ್ಪೃಶ್ಯತೆಯನ್ನ ಆಚರಿಸಿಕೊಂಡು ಬರುತ್ತಿದ್ದಾರೆ ಎನ್ನಲಾಗಿದೆ , ಹಳೆ ತಲೆಮಾರಿನ ದಲಿತರು ಇದ್ಯಾವುದನ್ನು ಪ್ರಶ್ನೆ ಮಾಡದೆ ತಮ್ಮ ಮೇಲಿನ ದೌರ್ಜನ್ಯಗಳನ್ನ ಸಹಿಸಿಕೊಂಡಿದ್ದರು. ಆದರೆ ಇವತ್ತಿನ ವಿದ್ಯಾವಂತ ಹುಡುಗರು ದಲಿತರ ಮೇಲೆ ನಡೆಸುತ್ತಿರುವ ಅಸ್ಪೃಶ್ಯತೆ ಆಚರಣೆಯನ್ನ ಪಶ್ನೆ ಮಾಡಲು ಪ್ರಾರಂಭಿಸಿದ್ದಾರೆ, ಇದೇ ಇವತ್ತು ಗ್ರಾಮದಲ್ಲಿ ಜಾತಿ ಸಂಘರ್ಷಕ್ಕೆ ಕಾರಣವಾಗಿದೆ.
ಮಲ್ಲಾತಹಳ್ಳಿ ಗ್ರಾಮದಲ್ಲಿ ಚನ್ನಕೇಶವ, ಮದ್ದೂರಮ್ಮ, ಗಂಗಮ್ಮ ಮತ್ತು ಮಾರಮ್ಮ ದೇವಸ್ಥಾನಗಳಿವೆ, ಚನ್ನಕೇಶ ಮತ್ತು ಮದ್ದೂರಮ್ಮ ದೇವಾಲಯಗಳ ಒಳಗೆ ದಲಿತರಿಗೆ ಪ್ರವೇಶವಿಲ್ಲ , ಗಂಗಮ್ಮ ದೇವಸ್ಥಾನ ದಲಿತರ ಒಡೆತನದಲ್ಲಿದೆ, ಇವು ಸುಮಾರು 40 ವರ್ಷಗಳ ಹಳೆಯ ದೇವಸ್ಥಾನಗಳಾಗಿದ್ದು, ವರ್ಷದ ಹಿಂದೆ ದೇವಸ್ಥಾನಗಳ ಜೀರ್ಣೋದ್ಧಾರ ಮಾಡಲಾಗಿತ್ತು, 15 ದಿನಗಳ ಹಿಂದೆ ಗ್ರಾಮದಲ್ಲಿ ಸಭೆ ಮಾಡಿ ಗಂಗಮ್ಮ, ಮದ್ದೂರಮ್ಮ ಮತ್ತು ಚನ್ನಕೇಶವ ದೇವರಿಗೆ ದೀಪಾವಳಿ ಹಬ್ಬದಂದು ಆರತಿ ಮಾಡುವ ಬಗ್ಗೆ ಮಾತುಕಥೆ ಮಾಡಲಾಗಿತ್ತು.
ಶುಕ್ರವಾರ ಬೆಳಗ್ಗೆ 12 ಗಂಟೆ ಸಮಯದಲ್ಲಿ ದಲಿತ ಮಹಿಳೆಯರು ಆರತಿಗಳನ್ನ ಹೊತ್ತುಕೊಂಡು ಚನ್ನಕೇಶವ ಮತ್ತು ಮದ್ದೂರಮ್ಮ ದೇವಸ್ಥಾನಗಳ ಬಳಿ ಹೋದಾಗ, ಮೊದಲು ಅನ್ಯ ಸಮುದಾಯದ ಮಹಿಳೆಯರ ಆರತಿಗಳನ್ನ ಒಳಗೆ ಬಿಡಲಾಗಿದೆ, ದೇವಸ್ಥಾನದ ಒಳಗೆ ಆರತಿಗಳನ್ನ ಬೆಳಗಿ ಪೂಜೆ ಮಾಡಿದ್ದಾರೆ, ದಲಿತ ಮಹಿಳೆಯರು ಸಹ ಆರತಿಗಳನ್ನ ದೇವರಿಗೆ ಬೆಳಗಲು ಮುಂದಾಗಿದ್ದಾರೆ, ಈ ವೇಳೆ ದೇವಸ್ಥಾನದ ಕಾಂಪೌಂಡ್ ನಲ್ಲಿಯೇ ತಡೆದು ಕೌಂಪೌಂಡ್ ನಿಂದ ಹೊರಗೆ ನಿಂತು ಹೊರಗಿನಿಂದಲೇ ಪೂಜೆ ಮಾಡಿಕೊಂಡು ಹೋಗುವಂತೆ ಸೂಚಿಸಿದ್ದು ಅದನ್ನು ಪ್ರಶ್ನಿಸಿ ಒಳ ಹೋಗಲು ಪ್ರಯತ್ನಿಸಿದ್ದಾಗ ಕಾಂಪೌಂಡ್ ಗೆ ಬೀಗ ಹಾಕಿದ್ದಾರೆ, ಇವತ್ತಿನ ಕಾಲದಲ್ಲೂ ಇಂತಹ ಆಚರಣೆಗಳು ನಡೆಯುತ್ತಿರುವುದು ಮನಸ್ಸಿಗೆ ತುಂಬಾ ನೋವಾಗಿದೆ ಎಂದು ದಲಿತ ಯುವಕ ಅಶೋಕ್ ತಮ್ಮ ನೋವು ಹಂಚಿಕೊಂಡರು.
ದೇವಸ್ಥಾನ ಪ್ರವೇಶ ನಿರಾಕರಣೆ ವಿಚಾರಕ್ಕೆ ಸಂಬಂಧಿದಂತೆ ಗ್ರಾಮದ ಮುಖಂಡರ ಜೊತೆ ಮಾತನಾಡಲು ದಲಿತರು ಹೋದಾಗ, ದಲಿತರ ವಿರುದ್ಧವೇ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ , ಈ ವೇಳೆ ದಲಿತ ಯುವಕ ಪ್ರಶಾಂತ್ ಎಂಬುವರನ್ನ ತಳ್ಳಲಾಗಿದ್ದು, ಅವರ ಕೈ ಕಾಲುಗಳಿಗೆ ತರಚಿದ ಗಾಯವಾಗಿದೆ, ದೇವಸ್ಥಾನಕ್ಕೆ ದಲಿತರ ಪ್ರವೇಶ ನಿರಾಕರಣೆಗೆ ಸಂಬಂಧಿಸಿದಂತೆ ದಲಿತರು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.