ದೊಡ್ಡಬಳ್ಳಾಪುರ : ತಾಲೂಕಿನ ತೂಬಗೆರೆ ಹೋಬಳಿಯ ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಕೂಗಳತೆ ದೂರದಲ್ಲಿರುವ ದಲಿತ ಕಾಲೋನಿಯಲ್ಲಿ ಚರಂಡಿ ಇದ್ದು ಇಲ್ಲದಂತಾಗಿದೆ. ಕೊಳಚೆ ನೀರು ಮನೆಯ ಮುಂದೆ ಶೇಖರಣೆಯಾಗಿ, ರಸ್ತೆಯಲ್ಲಿಯೇ ಕೊಳೆತು ಇಡೀ ಪ್ರದೇಶ ದುರ್ನಾತ ಬೀರುತ್ತಿದೆ. ಸೊಳ್ಳೆ, ನೊಣ ಸೇರಿದಂತೆ ಇತರೆ ಕ್ರಿಮಿ ಕೀಟಗಳ ಆವಾಸ ಸ್ಥಾನವಾಗಿದೆ. ಇದರಿಂದ ರೋಗ ಹರಡುವ ಸಾಧ್ಯತೆ ಹೆಚ್ಚಿದೆ. ಅದರೆ ಹಾಡೋನಹಳ್ಳಿ ಗ್ರಾಮ ಪಂಚಾಯ್ತಿ ಶುಚಿತ್ವದತ್ತ ಸ್ವಲ್ಪವೂ ಗಮನ ಹರಿಸುತ್ತಿಲ್ಲ ಎಂದು ಕಾಲೋನಿ ನಿವಾಸಿಗಳು ಆರೋಪಿಸಿದ್ದಾರೆ.

ದಲಿತರು, ದಲಿತ ಕಾಲೋನಿಗಳೆಂದರೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಏಕಿಷ್ಟು ನಿರ್ಲಕ್ಷ್ಯ, ಬೇಜವಾಬ್ದಾರಿ, ಅಸಡ್ಡೆ. ದಲಿತ ಕಾಲೋನಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಸಂಪೂರ್ಣ ವಿಫಲವಾಗಿದೆ. ದಲಿತರು ದಲಿತ ಕಾಲೋನಿಗಳಲ್ಲಿ ರಸ್ತೆ ನಿರ್ಮಾಣ ಚರಂಡಿ ನಿರ್ಮಾಣ ಸೇರಿದಂತೆ ಇತರೆ ಅಭಿವೃದ್ಧಿ ಕೆಲಸಗಳನ್ನು ಮಾಡುವಾಗ ಸಾಮಾನ್ಯವಾಗಿ ನಿರ್ಲಕ್ಷ್ಯ, ಅವೈಜ್ಞಾನಿಕ ನಿರ್ಮಾಣ, ಮತ್ತು ಕಳಪೆ ನಿರ್ವಹಣೆಯಿಂದ ಉಂಟಾಗುತ್ತವೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿದ್ದರೆ ನೀರು ನಿಲ್ಲುವುದು, ದುರ್ವಾಸನೆ ಬರುವುದು ಮತ್ತು ಸಾಂಕ್ರಾಮಿಕ ರೋಗಗಳ ಹರಡುವಿಕೆ ಉಂಟಾಗುತ್ತಿದೆ. ಇದಕ್ಕೆ ಪರಿಹಾರವಾಗಿ, ಸಂಬಂಧಪಟ್ಟ ಅಧಿಕಾರಿಗಳು ಚರಂಡಿಗಳನ್ನು ಸ್ವಚ್ಛಗೊಳಿಸಬೇಕು, ಸರಿಯಾದ ನಿರ್ವಹಣೆ ಮಾಡಬೇಕು ಮತ್ತು ಅವೈಜ್ಞಾನಿಕ ನಿರ್ಮಾಣಗಳನ್ನು ಸರಿಪಡಿಸಬೇಕು ಎಂದು ಕರ್ನಾಟಕ ಭೀಮ ಸೇನೆ ರಾಜ್ಯ ಕಾರ್ಯದರ್ಶಿ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.
ಹಾಡೋನಹಳ್ಳಿಯಲ್ಲಿ ದಲಿತರು ವಾಸಿಸುವ ಕಾಲೋನಿಯ ಅಭಿವೃದ್ಧಿಯತ್ತ ಸಂಬಂಧಪಟ್ಟವರು(ಗ್ರಾಮ ಪಂಚಾಯಿತಿ) ನಿರ್ಲಕ್ಷ್ಯ ತಾಳುತ್ತಲೇ ಬರುತ್ತಿದ್ದಾರೆ. 85ಕ್ಕೂ ಹೆಚ್ಚು ಕುಟುಂಬಗಳು ದಲಿತ ಕಾಲೋನಿಯಲ್ಲಿ ವಾಸ ಮಾಡಲಾಗುತ್ತಿದೆ. ನಾವು ವಾಸ ಮಾಡುತ್ತಿರುವ ಕಾಲೋನಿಯಲ್ಲಿ ಚರಂಡಿ ಸಮಸ್ಯೆ ಎದ್ದು ಕಾಣುತ್ತಿದೆ. ಚರಂಡಿ ಸ್ವಚ್ಛತೆ ಮಾಡಿ ಸುಮಾರು ವರ್ಷಗಳೇ ಕಳೆದಿವೆ.15-20 ಅಡಿ ಜಾಗದ ಮನೆಗಳಲ್ಲಿ ದಲಿತರು ವಾಸ ಮಾಡುತ್ತಿದ್ದಾರೆ. ಮೂಲಭೂತ ಸೌಕರ್ಯ ಒದಗಿಸುವಂತೆ ಸಚಿವರು, ಶಾಸಕರು, ಜಿಲ್ಲಾಧಿಕಾರಿ, ಜಿಪಂ ಸಿಇಒ, ತಾಪಂ ಸಿಇಒ, ಗ್ರಾಮ ಪಂಚಾಯಿತಿ ಪಿಡಿಒ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೂ ತರಲಾಗಿದೆ ಆದರೆ ಯಾವ ಕೆಲಸವಾಗಿಲ್ಲ. ಸರ್ಕಾರಿ ಅಧಿಕಾರಿಗಳು ಯಾರ ಕೈಗೊಂಬೆಯಾಗದೇ, ಯಾರ ಒತ್ತಡಕ್ಕೂ ಮಣಿಯದೇ ಸಂವಿಧಾನ ಅಡಿಯಲ್ಲಿ ಕೆಲಸ ಮಾಡಬೇಕು. ಕೂಡಲೇ ಚರಂಡಿ ದುರಸ್ತಿ ಮಾಡಿ, ಕಾಲೋನಿಯಲ್ಲಿ ಕಾಲಕಾಲಕ್ಕೆ ಸ್ವಚ್ಛತಾ ಕಾರ್ಯಕೈಗೊಳ್ಳಬೇಕು. ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಾಲೋನಿ ನಿವಾಸಿ ಮುರುಳಿ ಮಾತನಾಡಿ, ಹಾಡೋನಹಳ್ಳಿಯ ಜನತಾ ಕಾಲೋನಿಯಲ್ಲಿ ಸುಮಾರು 50 ವರ್ಷಗಳಿಂದ ವಾಸವಿದ್ದೇವೆ. ಕಾಲೋನಿಯಾದಗಿನಿಂದಲೂ ಮೂಲಭೂತ ಸೌಲಭ್ಯಗಳಿಲ್ಲ. ಈ ಕುರಿತು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವ ಉಪಯೋಗವಾಗಿಲ್ಲ. ನಾವು ದಲಿತರು ಎಂಬ ಕಾರಣಕ್ಕೆ ಗ್ರಾಮ ಪಂಚಾಯಿತಿಯವರು ನಮ್ಮನ್ನು ಎಲ್ಲಾ ವಿಚಾರದಲ್ಲಿ ಕಡೆಗಣಿಸುತ್ತಲೇ ಬರುತ್ತಿದ್ದಾರೆ. ಪಂಚಾಯಿತಿ ಪಿಎಒಗಳು ರಾಜಕೀಯ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಕೆಲಸ ಮಾಡುತ್ತಾರೆ. ನಮಗೆ ಮೂಲಭೂತ ಸವಲತ್ತುಗಳನ್ನು ಒದಗಿಸದೇ ಇದ್ದಲ್ಲಿ ಮುಂಬುರುವ ತಾ.ಪಂ, ಜಿ.ಪಂ ಸೇರಿದಂತೆ ಎಲ್ಲಾ ಚುನಾವಣೆಗಳನ್ನು ಬಹಿಷ್ಕಾರ ಮಾಡುತ್ತೇವೆ ಎಂದು ಎಚ್ಚರಿಸಿದರು.

ಕಾಲೋನಿ ನಿವಾಸಿ ಲಲಿತಾ ಮಾತನಾಡಿ, ನಮ್ಮ ಕಾಲೋನಿಯಲ್ಲಿ ಮೋರಿ, ಚರಂಡಿ, ವಿದ್ಯುತ್ ದೀಪ ಸೇರಿದಂತೆ ಮೂಲಭೂತ ಸೌಕರ್ಯಗಳು ಇಲ್ಲ. ಶೌಚಾಲಯಗಳು ಇಲ್ಲ. 10ಅಡಿ ಜಾಗದಲ್ಲಿ ಮನೆಗಳಿವೆ. ಮನೆಗಳಲ್ಲಿ ಮೂರು ಜನ ಮೇಲೆ ವಾಸ ಮಾಡುವದಕ್ಕೆ ಆಗಲ್ಲ. ಒಟ್ಟು ಕುಟುಂಬದಲ್ಲಿ ಮನೆಯಲ್ಲಿ ಜಾಗ ಇಲ್ಲದ ಕಾರಣ ವಿಧಿ ಇಲ್ಲದೇ ಬೇರೆಕಡೆ ಬಾಡಿಗೆ ಮನೆ ಮಾಡಿಕೊಂಡು ವಾಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು, ಪ್ರಮುಖರು ಹಾಜರಿದ್ದರು.
