ದೊಡ್ಡಬಳ್ಳಾಪುರ : ಕನ್ನಡಿಗರಲ್ಲಿ ಕನ್ನಡ ಭಾಷೆ, ಸಾಹಿತ್ಯ, ಕಲೆ, ಇತಿಹಾಸ, ಸಂಸ್ಕೃತಿ ಮತ್ತು ಘನತೆಯ ಬಗ್ಗೆ ಅಭಿಮಾನ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕಾಗಿದೆ ಎಂದು ಇತಿಹಾಸ ಉಪನ್ಯಾಸಕಿ ಟಿ.ಎಸ್.ಸರಸ್ವತಿ ತಿಳಿಸಿದರು.
ಅವರು ತಾಲ್ಲೂಕಿನ ತೂಬಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಜಾಗೃತ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಸಾಹಿತ್ಯ ವಿಜ್ಞಾನ ಸಂಸ್ಕೃತಿ ಸಮಾಗಮ 2025 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕರ್ನಾಟಕ ರಾಜ್ಯವಾಳಿದ ಎಲ್ಲಾ ರಾಜಮನೆಗಳು ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಸಾಕಷ್ಟು ಶ್ರಮಿಸಿವೆ. ಕನ್ನಡ ಕವಿಗಳ ಸಾಹಿತ್ಯ ರಚನೆಗೆ ಬೆಂಬಲ ನೀಡಿದ್ದಾರೆ. ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸಿರುವ ರಾಜಮನೆತಗಳು ಕನ್ನಡಿಗರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿವೆ ಎಂದರು.

ಭಾರತೀಯ ಭಾಷೆಗಳಲ್ಲಿ ಕನ್ನಡಕ್ಕೆ ಮಹತ್ವದ ಸ್ಥಾನವಿದೆ. ಕನ್ನಡ ಭಾಷೆ ಶಾಸ್ತ್ರೀಯ ಸ್ಥಾನಮಾನ ಹೊಂದಿದೆ. ಕರ್ನಾಟಕದ ಆಡಳಿತ ಭಾಷೆ ಕನ್ನಡವೇ ಆಗಿದೆ.ಕನ್ನಡಿಗರ ಸಾಂಸ್ಕೃತಿಕ ಮತ್ತು ಭಾಷಾ ಪರಂಪರೆಯು ಶ್ರೀಮಂತವಾಗಿದೆ, ಇದು ಕನ್ನಡ ಭಾಷೆ ಸಾಹಿತ್ಯ, ಕಲೆ ಮತ್ತು ಶಿಲ್ಪಕಲೆಗಳಲ್ಲಿ ಎದ್ದು ಕಾಣುತ್ತದೆ. ಕನ್ನಡ ಅಭಿಮಾನಿಗಳು ಕನ್ನಡ ಪ್ರೀತಿಯನ್ನು ಪ್ರತಿ ವರ್ಷ ನವೆಂಬರ್ ತಿಂಗಳಿಗಷ್ಟೇ ಸೀಮಿತಗೊಳಿಸಬಾರದು ಎಂದರು.
ವಿಜ್ಞಾನ ಉಪನ್ಯಾಸಕಿ ಡಿ.ಪುಷ್ಪಾವತಿ ಮಾತನಾಡಿ, ವಿಜ್ಞಾನದ ಓದು ಓದುಗರಲ್ಲಿ ವೈಜ್ಞಾನಿಕ ಮನೋಭಾ ಬೆಳೆಸುತ್ತದೆ. ಇಂದು ವಿಜ್ಞಾನ ಕ್ಷೇತ್ರವು ವಿಶಾಲವಾಗಿ ಬೆಳೆದಿದೆ. ವೈಜ್ಞಾನಿಕ ವಿಧಾನವು ಮತ್ತು ತಂತ್ರಜ್ಞಾನದ ಆವಿಷ್ಕಾರಗಳು ಒಟ್ಟಿಗೆ ಸೇರಿ, ಮಾನವಕುಲದ ತಿಳುವಳಿಕೆಯನ್ನು ವಿಸ್ತರಿಸಲು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಲು ನೆರವಾಗಿದೆ. ಎಂದರು. ವಿಜ್ಞಾನ ಕ್ಷೇತ್ರದಲ್ಲಿ ವಿಭಿನ್ನ ಉದ್ಯೋಗಾವಕಾಶಗಳಿವೆ, ಇದರಲ್ಲಿ ಉನ್ನತ ಶಿಕ್ಷಣ, ಉದ್ಯೋಗ, ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ತಾಂತ್ರಿಕ ಕೋರ್ಸ್ಗಳು ಪ್ರವೇಶ ಪಡೆತಲು ಸಹಕಾರಿ. ವಿದ್ಯಾರ್ಥಿಗಳು ತಮ್ಮ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ವೃತ್ತಿಜೀವನವನ್ನು ಮುಂದುವರಿಸಬಹುದು ಎಂದರು.

ಕಾರ್ಯಕ್ರಮದಲ್ಲಿ ತೂಬಗೆರೆ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಂ.ಮುನಿರಾಜು, ಸಹಶಿಕ್ಷಕರುಗಳಾದ ನಾರಾಯಣ್, ಮಂಜುಳ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ಪದಾಧಿಕಾರಿಗಳಾದ. ವೆಂಕಟರಾಜು, ವಿ.ಎಸ್.ಹೆಗಡೆ, ಉದಯಾರಾಧ್ಯ, ಹಳ್ಳಿ ಅಂಬರೀಶ್, ದರ್ಗಾಜೋಗಿಹಳ್ಳಿ ಮಲ್ಲೇಶ್, ಮುನಿರತ್ನಮ್ಮ, ಸಫೀರ್ ಮುಂತಾದವರು ಭಾಗವಹಿಸಿದ್ದರು.
