ವಿಜಯ ಮಿತ್ರ ದೊಡ್ಡಬಳ್ಳಾಪುರ : ಡಾ.ರಾಜ್ ಕುಮಾರ್ ಅವರು ಕನ್ನಡ ಮತ್ತು ಕರ್ನಾಟಕದ ಅಸ್ಮಿತೆ ಆಗಿದ್ದಾರೆ. ಅವರು ಕನ್ನಡ ಚಲನಚಿತ್ರ ಮತ್ತು ಸಾಹಿತ್ಯಕ್ಕೆ ನೀಡಿದ ಕೊಡುಗೆ ಅನನ್ಯವಾಗಿದೆ ಎಂದು ಲೆಕ್ಕಪರಿಶೋಧಕ ಲಯನ್ ಕೆ.ಪಿ.ಲಕ್ಷ್ಮೀನಾರಾಯಣ್ ತಿಳಿಸಿದರು.

ಅವರು ದೊಡ್ಡಬಳ್ಳಾಪುರ ತಾಲ್ಲೂಕಿನ ಚನ್ನವೀರನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಜಾಗೃತ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಸಾಹಿತ್ಯ ವಿಜ್ಞಾನ ಸಂಸ್ಕೃತಿ ಸಮಾಗಮ 2025 ಕಾರ್ಯಕ್ರಮದಲ್ಲಿ ಡಾ.ರಾಜ್ ಕುಮಾರ್ ಮತ್ತು ಕನ್ನಡ ಎಂಬ ವಿಷಯ ಕುರಿತು ಮಾತನಾಡಿದರು. ಡಾ.ರಾಜ್ ಕುಮಾರ್ ಅವರ ಕನ್ನಡ ಭಾಷೆಯ ಉಚ್ಚಾರಣೆ ಮಧುರ ಮತ್ತು ಸ್ಪಷ್ಟತೆಯಿಂದ ಕೂಡಿತ್ತು. ಉತ್ತಮ ಕನ್ನಡ ಹೇಗಿರಬೇಕೆಂದರೆ ಡಾ.ರಾಜ್ ಕುಮಾರ್ ಅಂತೆ ಇರಬೇಕೆಂದು ಕನ್ನಡಿಗರು ಅಭಿಮಾನದಿಂದ ಹೇಳುತ್ತಿದ್ದರು. ಅವರು ತಮ್ಮ ಯಶಸ್ಸಿನ ಉತ್ತುಂಗದಲ್ಲೂ ತಮ್ಮ ಸರಳತೆಯನ್ನು ಕಾಯ್ದುಕೊಂಡು, ಅಭಿಮಾನಿಗಳಿಗೆ ಆದರ್ಶಪ್ರಾಯರಾದರು. ಡಾ.ರಾಜ್ ಕುಮಾರ್ ಅವರ ಸಿನಿಮಾ ಪಾತ್ರಗಳು ಮತ್ತು ಜೀವನಶೈಲಿ ಕನ್ನಡಿಗರ ಸಂಸ್ಕೃತಿ ಪ್ರತಿನಿಧಿಸುತ್ತದೆ ಎಂದರು.

ಡಾ.ರಾಜ್ ಕುಮಾರ್ ಅವರು ಕನ್ನಡಿಗರಲ್ಲಿ ಕನ್ನಡ ನಾಡು-ನುಡಿಯ ಪ್ರಜ್ಞೆಯನ್ನು ಜಾಗೃತಗೊಳಿಸಿದರು. ಗೋಕಾಕ್ ಚಳುವಳಿ’ಯಂತಹ ಕನ್ನಡ ಭಾಷಾ ಚಳುವಳಿಗಳಿಗೆ ಬೆಂಬಲ ನೀಡಿದರು. ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ಡಾ.ರಾಜ್ ಕುಮಾರ್ ಅವರಿಗಿದ್ದ ಬದ್ಧತೆ ಅವರನ್ನು ಕನ್ನಡಿಗರ ಹೃದಯದಲ್ಲಿ ವಿಶೇಷ ಸ್ಥಾನ ಪಡೆಯುಂತೆ ಮಾಡಿತು. ಜನಸಾಮಾನ್ಯರ ಆಶೋತ್ತರಗಳು ಮತ್ತು ಸಾಮಾಜಿಕ ಕಳಕಳಿ ರಾಜ್ಕುಮಾರ್ ಚಲನಚಿತ್ರಗಳ ಪ್ರಮುಖ ಕಥಾ ವಸ್ತುಗಳು ಆಗಿರುವ ಕಾರಣದಿಂದ ಅವರು ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಕರ್ನಾಟಕದ ಜನರಿಗೆ ಮಾದರಿ ಮತ್ತು ಆದರ್ಶ ವ್ಯಕ್ತಿ ಡಾ.ರಾಜ್ ಕುಮಾರ್ ಆಗಿದ್ದಾರೆ ಎಂದರು.
ಸಾವಯವ ಕೃಷಿ ಮತ್ತು ಸಮಗ್ರ ಕೃಷಿ ಎಂಬ ವಿಷಯ ಕುರಿತು ಮಾತನಾಡಿದ ಕೃಷಿ ತಜ್ಞರಾದ ಲಯನ್ ಕೆ.ವಿ.ಪ್ರಭುಸ್ವಾಮಿ, ನಾಗರಿಕತೆಯೊಂದಿಗೆ ಕೃಷಿಯು ಬೆಳೆದು ಬಂದಿದೆ. ಒಂದು ದೇಶ ಕೃಷಿಯಿಂದ ಶ್ರೀಮಂತವಾಗಿದ್ದರೆ ಮಾತ್ರ ಅಂತಹ ದೇಶಕ್ಕೆ ಉಜ್ವಲ ಭವಿಷ್ಯ ಇರುತ್ತದೆ. ಪ್ರಾರಂಭದಲ್ಲಿ ಸಾವಯವ ಕೃಷಿಯಿತ್ತು. ಎರಡನೆಯ ಮಹಾಯುದ್ಧದ ನಂತರ ಕೃಷಿಯಲ್ಲಿ ರಾಸಾಯನಿಕ ಬಳಕೆ ಪ್ರಾರಂಭವಾಯಿತು. ಕೃಷಿಕರು ಎಲ್ಲಾ ಬೆಳೆಗಳನ್ನು ಬೆಳೆದು ಗುಣಮಟ್ಟ ಮತ್ತು ಉತ್ಪಾದನೆಯನ್ನು ಹೆಚ್ಚಿಸುವುದು ಸಮಗ್ರ ಕೃಷಿಯಾಗಿದೆ. ಕೃಷಿಯನ್ನು ವೈಜ್ಞಾನಿಕವಾಗಿ ಮಾಡುವುದರ ಕಡೆಗೆ ನಾವಿಂದು ಗಮನ ನೀಡಬೇಕಾಗಿದೆ. ಕೃಷಿಯ ಬಗ್ಗೆ ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕಾಗಿದೆ. ಕೃಷಿಯಲ್ಲಿ ಮೊದಲಿನಿಂದಲೂ ಮಹಿಳೆಯರ ಪಾತ್ರ ಬಹಳ ಪ್ರಮುಖವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಚನ್ನವೀರನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಬಿ.ಎನ್.ಯೋಗನರಸಿಂಹಮೂರ್ತಿ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಟಿ.ಅರುಣ್ ಕುಮಾರ್, ಮುಖ್ಯಶಿಕ್ಷಕ ವಿರೂಪಾಕ್ಷ, ಶಿಕ್ಷಕ ಚಂದ್ರಶೇಖರ್, ನವೋದಯ ವಿದ್ಯಾಲಯದ ನಿವೃತ್ತ ಶಿಕ್ಷಕ ವಿ.ಎಸ್.ಹೆಗಡೆ, ಕಲಾವಿದರುಗಳಾದ ದರ್ಗಾಜೋಗಿಹಳ್ಳಿ ಮಲ್ಲೇಶ್, ಸೆಲ್ವಂ ಮುಂತಾದವರು ಭಾಗವಹಿಸಿದ್ದರು.
