ದೊಡ್ಡಬಳ್ಳಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನ ರಾಜಘಟ್ಟ ಗ್ರಾಮದ ನಂದಿಕುಂಟೆ ಕೆರೆಯ ಹೂಳೆತ್ತುವ ಕಾಮಗಾರಿ ಮುಕ್ತಾಯಗೊಂಡಿದ್ದು. ಕೆರೆಯ ನಾಮಫಲಕ ಅನಾವರಣ ಮತ್ತು ಕೆರೆ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ನಾಮಫಲಕ ಅನಾವರಣ ಮಾಡಿದರು. ರಾಜಘಟ್ಟ ಕೆರೆ ಅಭಿವೃದ್ಧಿ ಸಮಿತಿ ಪ್ರಮುಖರಿಗೆ ಸಂಕೇತಿಕವಾಗಿ ಕೆರೆ ಹಸ್ತಾಂತರ ಮಾಡಿ ಯೋಜನೆಗೆ ಶುಭಹಾರೈಸಿದರು.

ವೇದಿಕೆಯಲ್ಲಿ ಮಾತನಾಡಿದ ಅವರು, ಹಳ್ಳಿಗಳ ಅಭಿವೃದ್ಧಿ ಹಾಗೂ ರೈತರ ಜೀವನ ಸುಧಾರಣೆಯಲ್ಲಿ ಜಲ ಮೂಲಗಳು ಪ್ರಮುಖ ಪಾತ್ರವಹಿಸುತ್ತವೆ. ಕೆರೆ-ಕುಂಟೆ ಮೊದಲಾದ ಜಲ ಮೂಲಗಳನ್ನು ಪುನಶ್ವೇತನಗೊಳಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಮ್ಮೂರು ನಮ್ಮ ಕೆರೆ ವಿಶೇಷ ಯೋಜನೆ ರೂಪಿಸಿ ಶ್ರಮಿಸಲಾಗುತ್ತಿದೆ ಎಂದರು.
ಕೆರೆಗಳನ್ನು ಪುನಶ್ವೇತನಗೊಳಿಸುವ ಕಾಮಗಾರಿಗಳಿಗೆ ಸರ್ಕಾರದೊಂದಿಗೆ ಸ್ಥಳೀಯ ಗ್ರಾಮಸ್ಥರು /ಸಮುದಾಯಗಳು ಕೈಜೋಡಿಸಬೇಕಿದೆ ಇವರೆಗೂ 914 ಕೆರೆಗಳ ಪುನಶ್ವೇತನಗೊಳಿಸಿ ಗ್ರಾಮಗಳಿಗೆ ಹಸ್ತಾಂತರ ಮಾಡಲಾಗಿದೆ ಅಂತರ್ಜಲ ವೃದ್ಧಿಗೆ ಈ ಯೋಜನೆ ಬಹಳಷ್ಟು ಅನುಕೂಲ ಕಲ್ಪಿಸಿದೆ ಎಂದರು.

ಹಳೆಯ ಹಾಗೂ ಪುರಾತನ ದೇವಾಲಯಗಳನ್ನು ಸಂರಕ್ಷಿಸುವ ಕಾರ್ಯ ಶ್ರೀ ಕ್ಷೇತ್ರದಿಂದ ನೆಡೆಯುತ್ತಿದೆ ಭೂಗರ್ಭದಲ್ಲಿ ಹುದುಗಿರುವ ದೇವಾಲಯಗಳನ್ನು ಊರು ಅಥವಾ ಗ್ರಾಮಗಳಲ್ಲಿ ಭಕ್ತರ ಸಹಾಯದಿಂದ ದೇವಾಲಯದ ಜೀರ್ಣೋದ್ದಾರಕ್ಕೆ ಮುಂದಾಗಿದೆ ಎಂದರು.
ಮಾಜಿ ಸಚಿವೆ ರಾಣಿ ಸತೀಶ್ ಮಾತನಾಡಿ, ರಾಜಘಟ್ಟ ಗ್ರಾಮ ಇತಿಹಾಸ ಪ್ರಸಿದ್ಧವಾದ ಗ್ರಾಮವಾಗಿದ್ದು ಬೌದ್ಧರ ಅತೀ ದೊಡ್ಡ ನೆಲೆಯಾಗಿತ್ತು ಎಂಬ ಉಲ್ಲೇಖಗಳು ಇವೆ. ಗ್ರಾಮದ ನಂದಿಕೆರೆ ಹೂಳೆತ್ತುವ ಮೂಲಕ ಜಲಮೂಲ ಸಂರಕ್ಷಣೆಯಲ್ಲಿ ಪ್ರಮುಖ ಹೆಜ್ಜೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡಿದೆ ಕೆರೆಯ ಹಸ್ತಾಂತರ ಕಾರ್ಯಕ್ರಮಕ್ಕೆ ವೀರೇಂದ್ರ ಹೆಗ್ಗಡೆಯವರು ಆಗಮಿಸಿರುವುದು ನಮ್ಮ ಗ್ರಾಮಕ್ಕೂ ಹಾಗೂ ತಾಲೂಕಿಗೂ ಹೆಮ್ಮೆಯ ವಿಷಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜು ಭಾಗವಹಿಸಿ ಮಾತನಾಡಿ ಯೋಜನೆ ವತಿಯಿಂದ ತಾಲ್ಲೂಕಿನಲ್ಲಿ ಸಾಕಷ್ಟು ಉತ್ತಮ ಕಾರ್ಯಗಳು ನೆಡೆದಿದ್ದು, ತಾಲ್ಲೂಕಿನ ಜನತೆಗೆ ಸಾಕಷ್ಟು ಅನುಕೂಲ ಲಭಿಸಿದೆ, ಕೆರೆಯ ಹೂಳೆತ್ತುವ ಮೂಲಕ ತಾಲ್ಲೂಕಿನ ಗ್ರಾಮಗಳ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪರೋಕ್ಷವಾಗಿ ಸಹಾಯ ಮಾಡುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.
ಇಂದು ತಾಲ್ಲೂಕಿಗೆ ಧರ್ಮಸ್ಥಳ ಶ್ರೀಗಳಾದ ಡಾ ವೀರೇಂದ್ರ ಹೆಗ್ಗಡೆ ಅವರು ಆಗಮಿಸಿ ಆಶೀರ್ವದಿಸಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ ಯೋಜನೆ ವತಿಯಿಂದ ತಾಲ್ಲೂಕಿನಲ್ಲಿ ಮತ್ತಷ್ಟು ಉತ್ತಮ ಕಾರ್ಯಗಳು ನೆಡೆಯಲಿ ನಮ್ಮ ಸಹಕಾರ ಸದಾ ಇರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜು, ವೀರೇಂದ್ರ ಹೆಗ್ಗಡೆ ಅವರ ಪುತ್ರಿ ಶ್ರದ್ದಾ ಅಮಿತ್, ಕೆರೆ ಸಮಿತಿಯ ಅಧ್ಯಕ್ಷ ಆನಂದ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮುನಿರಾಜ್,ಪ್ರಾದೇಶಿಕ ನಿರ್ದೇಶಕ ಶೀನಪ್ಪ, ಸೇರಿದಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಉಮಾರಬ್ಬ, ತಾಲ್ಲೂಕು ಯೋಜನಾಧಿಕಾರಿಗಳು, ಮೇಲ್ವಿಚಾರಕರು,ಗ್ರಾಮ ಪಂಚಾಯತಿ ಸದಸ್ಯ ಶಿವಕುಮಾರ್, ಊರಿನ ಮುಖಂಡರಾದ ಹರೀಶ್, ರಾಜಘಟ್ಟ ಗಣೇಶ್, ಕೃಷಿ ಮೇಲ್ವಿಚಾರಕರಾದ ಲೋಹಿತ್, ಸ್ಥಳೀಯ ಗ್ರಾಮಸ್ಥರು ಹಾಗೂ ಹಲವು ಸಂಘ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.









Leave a Reply