
ದೊಡ್ಡಬಳ್ಳಾಪುರ:- ಸಭೆಯಲ್ಲಿ ಕೈಗೊಳ್ಳುವ ಹಲವು ಸಮಾಜಮುಖಿ ಆರೋಗ್ಯಕರ ಚಟುವಟಿಕೆಗಳಿಗೆ ಮಾದರಿಯಾಗಿದ್ದು,ಈ ದಿಸೆಯಲ್ಲಿ ಪ್ರತಿ ತಿಂಗಳು ಸಭೆ ಸೇರಿ ಹಿರಿಯ ಚೇತನಗಳಿಗೆ ಚೈತನ್ಯ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಯರೂಪಕ್ಕೆ ತರುತ್ತಿರುವುದು ಶ್ಲಾಘನೀಯ ಎಂದು ಬೆಂಗಳೂರಿನ ಕನ್ನಡಿಗರ ಸ್ನೇಹ ಕೂಟದ ಸಂಸ್ಥಾಪಕ ಅಧ್ಯಕ್ಷ, ಸಾಹಿತಿ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಆರಕ್ಷಕ ರತ್ನ ರಾಂ.ಕೆ.ಹನುಮಂತಯ್ಯ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ, ದೊಡ್ಡಬಳ್ಳಾಪುರ ತಾಲೂಕು ಶಾಖೆ ವತಿಯಿಂದ ಆಯೋಜನೆ ಮಾಡಿದ್ದ ಮಾಸಿಕ ಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಂ.ಕೆ. ಹನುಮಂತಯ್ಯ ಅವರು 96 ವರ್ಷ ವಯೋಮಾನದ ನರಸಯ್ಯನ ಅಗ್ರಹಾರ ಗ್ರಾಮದ ನಿವೃತ್ತ ಮುಖ್ಯೋಪಾಧ್ಯಾಯ ಕೆ.ವೀರೇಗೌಡ,90 ವರ್ಷ ವಯೋಮಾನದ ಹಾದ್ರಿಪುರದ ನಿವೃತ್ತ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಹನುಮಂತರಾಯಪ್ಪ,85 ವರ್ಷ ವಯೋಮಾನದ ರೋಜಿಪುರದ ನಿವೃತ್ತ ಶಿಕ್ಷಕಿ ಸರ್ವಮಂಗಳಮ್ಮ ,85 ವರ್ಷ ವಯೋಮಾನದ ಸೋಮೇಶ್ವರ ಬಡಾವಣೆ ನಿವೃತ್ತ ಮುಖ್ಯ ಶಿಕ್ಷಕ ಸಿ.ಬಸವರಾಜು ಮತ್ತು 80 ವಯೋಮಾನದ ಗುಂಡಪ್ಪ ನಾಯಕನಹಳ್ಳಿಯ ನಿವೃತ್ತ ಶಿಕ್ಷಕ ಉಗ್ರೇಗೌಡ ಇವರುಗಳಿಗೆ ಹೆಣ್ಣೂರು ಕನ್ನಡಿಗರ ಸ್ನೇಹ ಕೂಟ ಪರವಾಗಿ ಸನ್ಮಾನ ನೀಡುವ ಮೂಲಕ ಗೌರವಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೆ.ಮಹಾಲಿಂಗಯ್ಯ ಮಾತನಾಡಿ ಅರವತ್ತು ವರ್ಷ ಮೇಲ್ಪಟ್ಟವರ ಜೀವನ ಶೈಲಿ ಹೇಗಿರಬೇಕು? ಅನ್ನುವ ಅತ್ಯುತ್ತಮ ಮಾಹಿತಿಯನ್ನು ಓದಿ ಮನವರಿಕೆ ಮಾಡಿಕೊಟ್ಟರು. ಸಂಘದ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣ ಮಾಡಲು ಎಲ್ಲಾ ಇಲಾಖೆಗಳ ನಿವೃತ್ತ ನೌಕರರು ಅಧಿಕಾರ ಅಂತಸ್ತು ಮರೆತು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಕೋರಿದರು.
ಇದೇ ವೇಳೆ ವಕೀಲರು ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಟಿ.ನಂಜಪ್ಪನವರು ಸಂಘದ ವರದಿಯನ್ನು ಆಧರಿಸಿ ಮಾತನಾಡಿ ಸಂಘದ ಪ್ರಗತಿ ಪರ ಚಟುವಟಿಕೆಗಳನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು.
ಬೆಂಗಳೂರು ಉತ್ತರ ತಾಲೂಕಿನ ನಿವೃತ್ತ ಉಪನ್ಯಾಸಕ ಶಿವರಾಜು ರವರು ಪೌರಾಣಿಕ ಭಕ್ತಿ ಗೀತೆಗಳನ್ನೂ ಹಾಡೋನಹಳ್ಳಿ ಜಾನಪದ ಕಲಾವಿದ ಗೋವಿಂದರಾಜು ಮತ್ತು ಜಯರಾಂ ಗೀತೆಗಳನ್ನು ಹಾಡಿ ರಂಜಿಸಿದರು.
ನವೋದಯ ವಿದ್ಯಾಲಯದ ನಿವೃತ್ತ ಜಿ.ಎಸ್ ಹೆಗಡೆ ಅವರು ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು, ಸಾಧ್ಯವಾದಲ್ಲಿ ಸ್ಥಳೀಯ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಸಾಕ್ಷರತೆ ಪ್ರಮಾಣವನ್ನು ಹೆಚ್ಚಿಸಲು ನೆರವಾಗುವ ಅಂಶಗಳನ್ನು ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಟಿ.ಮುನಿರಾಜು ರವರು ಪ್ರತಿಯೊಬ್ಬ ನಿವೃತ್ತಿ ಹೊಂದಿದ ಸದಸ್ಯರು ಸಂಘದ ಸದಸ್ಯತ್ವ ಪಡೆದು ಕೈಗೊಳ್ಳುವಂತೆ ಸಲಹೆ ನೀಡಿದರು.ಪ್ರಸ್ತುತ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದು ಎಲ್ಲರೂ ಜಾಗರೂಕರಾಗಿರಿ ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಗೌರವಾಧ್ಯಕ್ಷ ಅಬ್ದುಲ್ ಕರೀಂ, ಬೆಂಗಳೂರು ಗ್ರಾಮಾಂತರ ಜಿಲ್ಲಾ ನಿವೃತ್ತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎನ್ ಪ್ರಭಾಕರ್, ಉಪಾಧ್ಯಕ್ಷ ಕರಿಬಸವದೇವರು ,ಉಳಿದಂತೆ ಸಂಘದ ಹಿರಿಯರಾದ ತಿಪ್ಪೇಸ್ವಾಮಿ,ಶಿವರುದ್ರಯ್ಯ,ಪ್ರೊ.ಈಶ್ವರಾಚಾರ್,ಕೆ.ಎನ್ ಸರೋಜಮ್ಮ, ಗಂಗಾಂಬಿಕೆ,ಡಿ.ವಿ ಪದ್ಮಾವತಮ್ಮ, ರಾಧಾ ಲಕ್ಷ್ಮೀ,ಮಹಾದೇವಯ್ಯ, ಲಕ್ಷ್ಮೀಪತಿ,ಕೆ.ಜಿ ಮುನಿರಾಜು, ನಜೀರ್, ರಾಮಕೃಷ್ಣಯ್ಯ, ನರಸಿಂಹಯ್ಯ,ಕಗ್ಗೇರಪ್ಪ, ಮುಂತಾದವರು ಉಪಸ್ಥಿತರಿದ್ದರು.