
ದೊಡ್ಡಬಳ್ಳಾಪುರ ಆಗಸ್ಟ್ 02 ( ವಿಜಯಮಿತ್ರ) : ತಾಲೂಕು ಹೆಗ್ಗಡಿಹಳ್ಳಿಯ ಸರ್ವೆ ನಂಬರ್ 102ರ 5 ಎಕರೆ 3 ಗುಂಟೆ ಜಾಗದ ಕುರಿತಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ಬಾಕಿ ಇದ್ದರೂ ಮುನಿನಾರಾಯಣಮ್ಮ ಅವರಿಗೆ ಸೇರಿದ ಜಾಗವನ್ನು ಬಲಾಡ್ಯರು ಕಬಳಿಸುವ ಯತ್ನ ಮಾಡಿದ್ದಾರೆ ಎಂದು ಆರೋಪಿಸಿ ತಮಟೆ ಬಾರಿಸುವ ಮೂಲಕ ವಿಶೇಷ ರೀತಿಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಸದರಿ ಜಾಗದಲ್ಲಿ ಪ್ರತಿಭಟನೆ ನಡೆಸಲಾಯಿತು .
ಕಣಿವೇಪುರದ ದಿವಗಂತ ಮುನಿಯಪ್ಪನವರ ಮೊದಲ ಹೆಂಡತಿ ಚಿಕ್ಕತಿಮ್ಮಕ್ಕನವರ ಒಬ್ಬಳೇ ಮಗಳಾದ ಮುನಿನಾರಾಯಣಮ್ಮ, ಅವರ ತಂದೆ ಮುನಿಯಪ್ಪನವರಿಗೆ ಒಟ್ಟು 9 ಎಕರೆ 17 ಗುಂಟೆ ಜಮೀನಿದ್ದು, 2011ರಲ್ಲಿ ದೊಡ್ಡಬಳ್ಳಾಪುರದ ನ್ಯಾಯಾಲಾಯದಲ್ಲಿ ಭಾಗಾಂಶದ ಕೇಸ್ ಹಾಕಲಾಗಿದ್ದು, ಕೋರ್ಟ್ ಆದೇಶದಂತೆ ಮುನಿನಾರಾಯಣಮ್ಮನವರಿಗೆ 5 ಎಕರೆ 3 ಗುಂಟೆ ಜಮೀನು ನೀಡಿದ್ದು,ಸರ್ವೆ ನಡೆಸಿ ಜಾಗವನ್ನ ಗುರುತಿಸುವ ಕಾರಣಕ್ಕೆ ಕೋರ್ಟ್ ನಲ್ಲಿ ಎಫ್ ಡಿ ಪಿ ಕೇಸ್ ನಡೆಯುತ್ತಿದೆ, ಈ ನಡುವೆ ಭೂಮಾಫಿಯಾ ಗ್ಯಾಂಗ್ ಮುನಿನಾರಾಯಣಮ್ಮರವರಿಗೆ ಸೇರಿದ ಜಾಗದಲ್ಲಿ ಅತಿಕ್ರಮ ಪ್ರವೇಶ ಮಾಡಿ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಮುನಿನಾರಾಯಣಮ್ಮ ಕುಟುಂಬಸ್ಥರು ಆರೋಪಿಸಿದ್ದಾರೆ.
ಹೆಗ್ಗಡಿಹಳ್ಳಿಯ ಸರ್ವೇ ನಂಬರ್ 102ರ ಜಾಗದಲ್ಲಿ ದಾಖಲಾತಿ ಹಿಡಿದು ಮುನಿ ನಾರಾಯಣಮ್ಮ ಹಾಗೂ ಸಹೋದರ ಪ್ರತಿಭಟಿಸಿದರು.
ಮುನಿನಾರಾಯಣಮ್ಮರವರಿಗೆ ನ್ಯಾಯ ಕೊಡಿಸುವ ಕಾರಣಕ್ಕೆ ದಲಿತ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ನಡೆಸುವ ಮೂಲಕ ಕಾಂಪೌಂಡ್ ಕೆಲಸವನ್ನು ನಿಲ್ಲಿಸುವಂತೆ ಅಗ್ರಹಿಸಿದೆ ಈ ಕುರಿತು ಭಾರತೀಯ ಶೂದ್ರ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸಿದ್ದರಾಜು ಮಣೆಗಾರ ಮಾತನಾಡಿ, ದಲಿತ ಮಹಿಳೆಯ ಜಮೀನು ಹೊಡೆಯಲು ಸಂಚು ನಡೆಸಿರುವ ಭೂಮಾಫಿಯಾ ಗ್ಯಾಂಗ್ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿದ್ದು , ಜಾಗದ ಕುರಿತಾಗಿ ನ್ಯಾಯಾಲಯದಲ್ಲಿ ಎಫ್ ಡಿ ಪಿ ಕೇಸ್ ನಡೆಯುತ್ತಿದ್ದರು, ಮುನಿನಾರಾಯಣಮ್ಮ ನವರ ಜಮೀನಿನಲ್ಲಿ ಅನಧಿಕೃತವಾಗಿ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದೆ, ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿರುವ ವಿಕ್ರಮ್ ಮತ್ತು ಸಹಚರರ ವಿರುದ್ಧ ತಮಟೆ ಬಾರಿಸುವ ಮೂಲಕ ಸಾಂಕೇತಿಕವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.
ದಲಿತರ ಭೂಮಿಯನ್ನು ಕಬಳಿಸಲು ಈ ರೀತಿಯ ಹುನ್ನಾರ ನಡೆಸಿ ದಲಿತರ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡುವ ಭೂಮಾಫಿಯಾ ಗ್ಯಾಂಗ್ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಕಾನೂನು ಕ್ರಮ ತೆಗೆದುಕೊಂಡು ಅವರನ್ನು ತಾಲೂಕಿನಿಂದಲೇ ಗಡಿಪಾರು ಮಾಡಬೇಕು ಎಂದು ಅಗ್ರಹಿಸಿದರು.
ಭೂಕಬಳಿಕೆ ಆರೋಪದ ಹಿನ್ನೆಲೆ ದಲಿತ ಮುಖಂಡರು, ಪ್ರತಿಭಟನಾಕಾರರು ಮುನಿನಾರಾಯಣಮ್ಮನವರ ಬೆಂಬಲವಾಗಿ ಪ್ರತಿಭಟಿಸಿದರು.
ಈ ಸಮಸ್ಯೆ ಬಗೆಹರಿಸದ ಪಕ್ಷದಲ್ಲಿ ಬೆಂಗಳೂರು ಚಲೋ ಪಾದಯಾತ್ರೆ ಮಾಡುವ ಮೂಲಕ ವಿಧಾನಸೌಧದ ಮುಂದೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಸ್ಥಳದ ಮಾಲೀಕರಾದ ಮುನಿನಾರಾಯಣಮ್ಮ ಮಾತನಾಡಿ, ನಾನು ನಮ್ಮ ತಂದೆ ಮುನಿಯಪ್ಪನವರ ದೊಡ್ಡ ಹೆಂಡತಿ ಮಗಳು, ತಂದೆಯ ಜಮೀನಿನಲ್ಲಿ ನನಗೆ ಭಾಗ ಕೊಟ್ಟಿರಲಿಲ್ಲ, ಭಾಗಾಂಶಕ್ಕಾಗಿ ಕೋರ್ಟ್ ನಲ್ಲಿ ಮೊಕದ್ದಮೆ ಹೂಡಿದ್ದು ಸದರಿ ಕೇಸ್ ಅನ್ವಯ ನ್ಯಾಯಾಲಯವು ನನ್ನ ಪಾಲಿಗೆ 5 ಎಕರೆ 3 ಗುಂಟೆ ಜಮೀನು ನೀಡಿ ಆದೇಸಿದೆ, ನಮ್ಮ ತಂದೆಯ ಚಿಕ್ಕ ಹೆಂಡತಿ ಮತ್ತು ಮಕ್ಕಳು ಅಕ್ರಮವಾಗಿ ನನ್ನ ಹೆಸರಿನಲ್ಲಿರುವ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ, ಅವರ ಪಾಲಿಗೆ ಬಂದ ಜಮೀನು ಮಾರಾಟ ಮಾಡಿ ಈಗ ನನ್ನ ಪಾಲಿನ ಜಮೀನನ್ನು ಮಾರಾಟಕ್ಕೆ ಮುಂದಾಗಿದ್ದಾರೆ ನಾನು ಯಾವುದೇ ಕಾರಣಕ್ಕೂ ನನ್ನ ಜಮೀನು ಬಿಟ್ಟು ಕೊಡುವುದಿಲ್ಲ, ನ್ಯಾಯಕ್ಕಾಗಿ ಸತ್ತರೂ ಸರಿಯೇ ಜಾಗ ಮಾತ್ರ ಬಿಡುವುದಿಲ್ಲ ಎಂದು ತಮ್ಮ ನೋವನ್ನು ಹೇಳಿಕೊಂಡರು.
ಪ್ರತಿಭಟನೆಯಲ್ಲಿ ಕೆ.ವಿ.ಗೋವಿಂದರಾಜು, ರಾಜ್ಯ ಸಂಚಾಲಕರು. ಭಾರತೀಯ ಶೂದ್ರ ಸೇನೆ, ದಲಿತ ಮುಖಂಡರಾದ ಎಂ.ಚನ್ನಿಗರಾಯಪ್ಪ, ಶ್ರೀನಿವಾಸ್ ಮುತ್ತೂರು.ಲಕ್ಷ್ಮೀಶ್ರೀನಿವಾಸ್ ,ಸೋಮಶೇಖರ್ ಸೇರಿದಂತೆ ದಲಿತ ಸಂಘಟನೆಗಳ ಒಕ್ಕೂಟದ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು .