ಬೆಂಗಳೂರು ಗ್ರಾಮಾಂತರ: ರಾಜ್ಯದ ಜೀವನಾಡಿಯಾಗಿರುವ ಕಾವೇರಿ ನದಿಯ ಗುಣಮಟ್ಟ ಕಾಪಾಡಲು, ನದಿಗೆ ಸೇರುತ್ತಿರುವ ಕಲುಷಿತ ನೀರಿನ ಹರಿವನ್ನು ತಡೆಯುವ ನಿಟ್ಟಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಟಿ ಎ ನಾರಾಯಣಗೌಡರ ವೇದಿಕೆ )ಹೋರಾಟಕ್ಕೆ ಮುಂದಾಗಿದೆ.
ರಾಜ್ಯದಲ್ಲಿ ಈಗಾಗಲೇ ಹಲವಾರು ನದಿ ನೀರು ಕೊಳಚೆ ಮತ್ತು ತಾಜ್ಯವಸ್ತುಗಳಿಂದ ಸಂಪೂರ್ಣ ಹಾಳಾಗಿದ್ದು ಕುಡಿಯಲು ಯೋಗ್ಯವಲ್ಲದ ಸ್ಥಿತಿ ತಲುಪಿದೆ. ಪ್ರಸ್ತುತ ಕಾವೇರಿ ನದಿಮೂಲಕ್ಕೂ ಕಲುಷಿತ ವಸ್ತುಗಳು,ನೀರು ಸೇರುತ್ತಿದ್ದು ನಮ್ಮ ನಾಡಿನ ಜಲಮೂಲ ಉಳಿಸುವುದು ನಮ್ಮೆಲ್ಲರ ಹೊಣೆಯಾಗಿದ್ದು ಹೋರಾಟದ ಮೂಲಕ ನಮ್ಮ ಕರವೇ ರಾಜ್ಯದ್ಯಂತ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ಸಂಘದ ಪ್ರಮುಖರು ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ ಮಾತನಾಡಿ ಕಲುಷಿತ ರಾಸಾಯನಿಕಯುಕ್ತ ನೀರಿನಿಂದ ಈಗಾಗಲೇ ನಮ್ಮ ಸ್ಥಳೀಯ ನದಿಮೂಲ, ಕೆರೆ ಮೂಲಗಳು ಸಂಪೂರ್ಣ ಹಾಳಾಗಿವೆ ಇದಕ್ಕೆ ಉತ್ತಮ ಉದಾಹರಣೆ ನಮ್ಮ ತಾಲ್ಲೂಕಿನ ಆರ್ಕವತಿ ನದಿ ಹಾಗೂ ದೊಡ್ಡತುಮಕೂರು ಹಾಗೂ ಮಜರಾಹೊಸಹಳ್ಳಿ ಭಾಗದ ಕೆರೆಯಾಗಿದೆ. ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿ ಕಾವೇರಿ ನದಿಗೂ ಬರುವುದರಲ್ಲಿ ಸಂಶಯವಿಲ್ಲ ಹಾಗಾಗಿ ನಮ್ಮ ಟಿ ಎ ನಾರಾಯಣ ಗೌಡರ ಆದೇಶದಂತೆ ಎಲ್ಲಾ ಕರವೇ ಸೈನಿಕರು ರಾಜ್ಯದ ನದಿ ಉಳಿವಿಗಾಗಿ ಹೋರಾಟಕ್ಕೆ ಮುಂದಾಗಲಿದ್ದೇವೆ ಎಂದರು.
