ಗ್ರಾಮಗಳಿಗೆ ಸಂಪರ್ಕ ರಸ್ತೆ ಸಮಸ್ಯೆ: ಹೆದ್ದಾರಿ ತಡೆದು ಗ್ರಾಮಸ್ಥರ ಪ್ರತಿಭಟನೆ

Spread the love

ದೊಡ್ಡಬಳ್ಳಾಪುರ ಮಾ 21 ( ವಿಜಯ ಮಿತ್ರ ) : ಚಿಕ್ಕ ತುಮಕೂರು, ಮಾಜರಹೊಸಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಗ್ರಾಮಸ್ಥರು ಸ್ಥಳೀಯವಾಗಿ ಸಂಪರ್ಕ ರಸ್ತೆ ಕಲ್ಪಿಸುವಂತೆ ಅಗ್ರಹಿಸಿ ಹೆದ್ದಾರಿ ತಡೆ ಮಾಡುವ ಮೂಲಕ ಪ್ರತಿಭಟನೆ ನೆಡೆಸಿದರು.

 

ನಗರ ಭಾಗದಿಂದ ಚಿಕ್ಕತುಮಕೂರು ಗ್ರಾಮಕ್ಕೆ ಸೇರುವ ಸಂಪರ್ಕ ರಸ್ತೆಯನ್ನು ಹೆದ್ದಾರಿ ಪ್ರಾಧಿಕಾರ ಬಂದ್ ಮಾಡಿದ್ದು ಸದರಿ ರಸ್ತೆಯನ್ನು ಗ್ರಾಮಸ್ಥರ ಅನುಕೂಲಕ್ಕೆ ನಿರ್ಮಿಸಿಕೊಡುವಂತೆ ಸ್ಥಳೀಯ ಮುಖಂಡರಾದ ಟಿ. ರಂಗರಾಜು, ಬಿ. ಸಿ.ಆನಂದ್, ಆದಿತ್ಯ ನಾಗೇಶ್ ಸೇರಿದಂತೆ ಹಲವು ರೈತರ ಮುಖಂಡರ ನೇತೃತ್ವದಲ್ಲಿ ಹೆದ್ದಾರಿ ತಡೆ ಮಾಡುವ ಮೂಲಕ ಪ್ರತಿಭಟನೆ ನೆಡೆಸಲಾಯಿತು.ಈ ಸಂದರ್ಭದಲ್ಲಿ ಬಮುಲ್ ನಿರ್ದೇಶಕರಾದ ಬಿ ಸಿ ಆನಂದ್ ಮಾತನಾಡಿ ಸ್ಥಳೀಯವಾಗಿ ಸಂಪರ್ಕ ರಸ್ತೆಯ ಅವಶ್ಯಕತೆ ಹೆಚ್ಚಾಗಿದ್ದು . ಈ ರಸ್ತೆ ನಿರ್ಮಾಣ ಮಾಡುವುದರಿಂದ ನೂರಾರು ರೈತರಿಗೆ ಅನುಕೂಲವಾಗಲಿದೆ. ಆದರೆ ಸ್ಥಳೀಯ ಕೆಲ ಕಿಡಿಗೇಡಿಗಳು ರಸ್ತೆ ನಿರ್ಮಾಣ ಪ್ರಧಿಕಾರಕ್ಕೆ ಸುಳ್ಳು ಮಾಹಿತಿ ರವಾನಿಸುವ ಮೂಲಕ ಪ್ರಾಧಿಕಾರದ ದಿಕ್ಕು ತಪ್ಪಿಸಿದ್ದಾರೆ. ಸ್ಥಳೀಯ ಎಲ್ಲಾ ಗ್ರಾಮಸ್ಥರು ರಸ್ತೆ ತಡೆ ಮಾಡುವ ಮೂಲಕ ಗ್ರಾಮಗಳಿಗೆ ಸಂಪರ್ಕ ರಸ್ತೆಯ ಅವಶ್ಯಕತೆ ಎಷ್ಟಿದೆ ಎಂಬುದನ್ನು ಕುರಿತು ಪ್ರಾಧಿಕಾರಕ್ಕೆ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ. ಪ್ರಾಧಿಕಾರಾದ ಮುಖ್ಯಸ್ಥರು ಸಂಪರ್ಕ ರಸ್ತೆ ನಿರ್ಮಿಸುವ ಭರವಸೆ ನೀಡಿರುವ ಹಿನ್ನಲೆ ನಮ್ಮ ಈ ಹೋರಾಟವನ್ನು ತಾತ್ಕಾಲಿಕವಾಗಿ ಕೈ ಬಿಡಲಾಗಿದೆ ಎಂದು ತಿಳಿಸಿದರು.

ಗ್ರಾಮಾಂತರ ಪೊಲೀಸ್ ವೃತ್ತ ನೀರಿಕ್ಷಕರಾದ ಸಾದಿಕ್ ಪಾಷಾ ನೇತೃತ್ವದ ತಂಡ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಗ್ರಾಮಸ್ಥರ ಮನವೊಲಿಸುವಲ್ಲಿ ಯಶಸ್ವಿಯಾಯಿತು.

 

ಸ್ಥಳೀಯ ಮುಖಂಡರಾದ ಆದಿತ್ಯ ನಾಗೇಶ್ ಮಾತನಾಡಿ ನಗರದಿಂದ ಚಿಕ್ಕ ತುಮಕೂರು ಮಾರ್ಗದ ರಸ್ತೆಯನ್ನು ಹೆದ್ದಾರಿ ಪ್ರಾಧಿಕಾರ ಬಂದ್ ಮಾಡಿದ್ದು.ಪ್ರತಿದಿನ ಈ ಮಾರ್ಗವಾಗಿ 3000ಕ್ಕೂ ಅಧಿಕ ಸಾರ್ವಜನಿಕರು ಸಂಚಾರ ನೆಡೆಸುತ್ತಾರೆ . ಸ್ಥಳೀಯವಾಗಿ ಸಂಚಾರ ನೆಡೆಸಲು ಈ ರಸ್ತೆ ಅನಾನುಕೂಲವಾಗಿದ್ದು ಈ ಸಂಬಂಧ ಇಂದು ರಸ್ತೆ ತಡೆ ಮಾಡಿ ಪ್ರತಿಭಟಿಸಿದ್ದೇವೆ. ಪ್ರಾಧಿಕಾರದ ಅಧಿಕಾರಿಗಳು ಕಾಮಗಾರಿಯನ್ನು ಶೀಘ್ರದಲ್ಲಿ ಪ್ರಾರಂಬಿಸುವ ಭರವಸೆ ನೀಡಿದ್ದು, ಅಧಿಕಾರಿಗಳ ಮನವಿಗೆ ಸ್ಪಂದಿಸುವ ಮೂಲಕ ನಮ್ಮ ಹೋರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ. ಕಾಮಗಾರಿ ಪೂರ್ಣಗೊಳಿಸದ ಪಕ್ಷದಲ್ಲಿ ಉಗ್ರಹೋರಾಟ ಮಾಡಲಾಗುವುದು ಎಂದರು ಹಾಗೂ ಎರಡು ಪಂಚಾಯಿತಿಗಳ ಗ್ರಾಮಸ್ಥರು ಲೋಕಸಭಾ ಚುನಾವಣೆಯನ್ನು ಬಹಿಸ್ಕರಿಸುವ ಎಚ್ಚರಿಕೆ ನೀಡಿದರು.

 

ಸ್ಥಳೀಯ ಮುಖಂಡರಾದ ಟಿ ರಂಗರಾಜು ಮಾತನಾಡಿ ಪಕ್ಷತೀತವಾಗಿ ಈ ಪ್ರತಿಭಟನೆ ನೆಡೆಯುತ್ತಿದ್ದು.ಸ್ಥಳೀಯವಾಗಿ ಹಳ್ಳಿ ರೈತರು ತಮ್ಮ ಬೆಳೆಗಳನ್ನು ಮಾರುಕಟ್ಟೆಗೆ ತಲುಪಿಸಲು ಹಾಗೂ ಸಾರ್ವಜನಿಕರು ತಮ್ಮ ದೈನಂದಿಕ ಸಂಚಾರಕ್ಕೆ ಈ ಮುಖ್ಯ ರಸ್ತೆಯ ಮೇಲೆ ಅವಲಂಬಿತರಾಗಿದ್ದಾರೆ. ಈ ಸ್ಥಳದಲ್ಲಿ ಅಂಡರ್ ಪಾಸ್ ನಿರ್ಮಿಸುವ ಮೂಲಕ ಹಲವು ರೈತ ಕುಟುಂಬಗಳಿಗೆ ಅನುಕೂಲವಾಗಲಿದೆ. ಪ್ರಾಧಿಕಾರದ ಅಧಿಕಾರಿಗಳು ಸಕರಾತ್ಮಕವಾಗಿ ಸ್ಪಂದಿಸಿದ್ದು ನಾಳೆಯಿಂದಲೇ ಕಾಮಗಾರಿ ಆರಂಬಿಸುವ ಭರವಸೆ ನೀಡಿದ್ದಾರೆ. ತಿಪ್ಪುರಿನ ಬಳಿ ಅವೈಜ್ಞಾನಿಕ ಅಂಡರ್ ಪಾಸ್ ರಸ್ತೆ ನಿರ್ಮಿಸಿದ್ದು. ಹಲವು ಅಪಘಾತ ಪ್ರಕಾರಣಗಳಿಗೆ ಎಡೆಮಾಡಿ ಕೊಟ್ಟಿದೆ. ಆದಷ್ಟು ಬೇಗ ದೊಡ್ಡಬಳ್ಳಾಪುರ -ಚಿಕ್ಕತುಮಕೂರು ಮುಖ್ಯರಸ್ತೆಯ ಅಂಡರ್ ಪಾಸ್ ಕಾಮಗಾರಿ ಪೂರ್ಣಗೊಳಿಸಿ ಪ್ರಾಧಿಕಾರವು ಸ್ಥಳೀಯರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂಥಗಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

 

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಸಂದೇಶ್ ಬಿ ಎಚ್ ಕಂಪಣ್ಣ,ರೈತ ಮುಖಂಡರಾದ ವಸಂತ್ ಕುಮಾರ್, ಸತೀಶ್ ಸೇರಿದಂತೆ ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *