ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ–ಮೆಳೇಕೋಟೆ ರಸ್ತೆಯ ಕಾಚಹಳ್ಳಿ ಸಮೀಪ, ರಸ್ತೆಯಲ್ಲಿ ಬಿದ್ದಿರುವ ಆಳವಾದ ಹಳ್ಳ ಹಾಗೂ ಕೆರೆಯ ಕಟ್ಟೆಯ ಬಳಿ ಉಂಟಾದ ಅಸಮರ್ಪಕ ರಸ್ತೆ ಪರಿಸ್ಥಿತಿ ಭೀಕರ ಅಪಘಾತಕ್ಕೆ ಕಾರಣವಾಗಿದೆ.
ಶನಿವಾರ ಮಧ್ಯಾಹ್ನ ಕಾರು ಮತ್ತು ಲಗೇಜ್ ಆಟೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಎಳನೀರು ತರಲು ಆಟೋದಲ್ಲಿ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಗಾಯಾಳುಗಳು ತೂಬಗೆರೆ ನಿವಾಸಿಗಳಾದ ಮಧು (20), ಅರ್ಜುನ್ (13) ಹಾಗೂ ಯಶವಂತ್ (13) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ತಕ್ಷಣ ಖಾಸಗಿ ಕಾರಿನಲ್ಲಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಕಾರಿನಲ್ಲಿದ್ದ ಕೆಲವರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ.
ಸ್ಥಳೀಯರು ಹಲವು ತಿಂಗಳಿನಿಂದ ಈ ರಸ್ತೆಯ ಹಾಳಾದ ಸ್ಥಿತಿಯನ್ನು ಅಧಿಕಾರಿಗಳ ಗಮನಕ್ಕೆ ತಂದರೂ ದುರಸ್ತಿ ಕಾರ್ಯ ಕೈಗೊಳ್ಳದಿರುವುದರಿಂದ ಅಪಘಾತಗಳು ನಿರಂತರವಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಳೆಗಾಲದಲ್ಲಿ ರಸ್ತೆಗಳಲ್ಲಿ ನೀರು ತುಂಬಿ ಹಳ್ಳಗಳು ಕಾಣಿಸದಂತಾಗುತ್ತಿದ್ದು, ಇದು ಸಾರ್ವಜನಿಕರ ಜೀವಕ್ಕೆ ಅಪಾಯವನ್ನುಂಟು ಮಾಡುತ್ತಿದೆ.
ಗ್ರಾಮಸ್ಥರು ಸಾರ್ವಜನಿಕ ಕಾಮಗಾರಿ ಇಲಾಖೆಗೆ ತುರ್ತುವಾಗಿ ರಸ್ತೆ ದುರಸ್ತಿ ಮಾಡಿ ಜನರ ಸುರಕ್ಷತೆಯನ್ನು ಕಾಪಾಡುವಂತೆ ಮನವಿ ಮಾಡಿದ್ದಾರೆ.
ಈ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.
