*ಮಾಧ್ಯಮಗಳು ವಾಸ್ತವ ಸ್ಥಿತಿಯನ್ನು ಅರಿತು ಸುದ್ದಿಗಳನ್ನು ಮಾಡಬೇಕು – ಶ್ರೀಧರ್*

Spread the love

ನಮ್ಮ ಸಮಾಜಕ್ಕೆ ನಂಬಿಕೆ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಗಳ ಅಗತ್ಯವಿದೆ  ಎಂದು ಬೆಂಗಳೂರು ಪ್ರಸ್ ಕ್ಲಬ್ ಅಧ್ಯಕ್ಷ ಶ್ರೀಧರ್ ತಿಳಿಸಿದರು.

ಅವರು ದೊಡ್ಡಬಳ್ಳಾಪುರ ಲಯನ್ಸ್ ಭವನದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ  ವಿಜ್ಞಾನ ಸಿರಿ ಮಾಸಪತ್ರಿಕೆಯ ವತಿಯಿಂದ ನಡೆದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸುದ್ದಿ ಮಾಧ್ಯಮಗಳು ಸ್ವಾಸ್ಥ್ಯ  ಸಮಾಜವನ್ನು ನಿರ್ಮಾಣ ಮಾಡಬೇಕು.  ವಾಸ್ತವ ಸ್ಥಿತಿಯನ್ನು  ಅರಿತು ಸುದ್ದಿಗಳನ್ನು  ಮಾಡಬೇಕು.  ಜಾಹೀರಾತು ಇಲ್ಲದೆ ಸುದ್ದಿ ಮಾಧ್ಯಮಗಳು ಉಳಿಯಲು ಸಾಧ್ಯವಿಲ್ಲ .  ಮಾಧ್ಯಮಗಳು  ಮೌಢ್ಯತೆಯ ಬಗ್ಗೆ ಜನರಲ್ಲಿ ಅರಿವು ಉಂಟು ಮಾಡಬೇಕು. ಮೂಢನಂಬಿಕೆಗಳು ಮನುಷ್ಯತ್ವವನ್ನು  ನಾಶ ಮಾಡುತ್ತವೆ ಎಂದರು.

ಮನೋವಿಜ್ಞಾನಿ ಶ್ರೀಧರ್ ಮಾತನಾಡಿ,  ಪತ್ರಕರ್ತರು ಆದೇಶಕ್ಕೆ ಒಳಗಾಗಬಾರದು, ಬಾವುಕತೆ ಅವಕಾಶ ನೀಡಬಾರದು. ಪತ್ರಕರ್ತರಿಗೆ ವೀಕ್ಷಣೆ ಮತ್ತು ಸಂವೇದನೆ ಬಹಳ ಮುಖ್ಯವಾಗಿ ಬೇಕಾಗಿರುವ  ಗುಣವಾಗಿರುತ್ತದೆ.   ಸಕಾರಾತ್ಮಕವಾಗಿ, ಸೃಜನಾತ್ಮಕವಾಗಿ, ಸರಳವಾಗಿ, ಸರಾಗವಾಗಿ ಓದಿಕೊಳ್ಳುವಂತಹ  ಬರಹಗಳಾಗಿರಬೇಕು. ವಿಜ್ಞಾನದಲ್ಲಿ ಅಂಧವಿಶ್ವಾಸ ಮತ್ತು ಬಾವುಕತೆ ಇರುವುದಿಲ್ಲ.  ವೈಜ್ಞಾನಿಕ ಶಿಕ್ಷಣದೊಂದಿಗೆ  ಪ್ರಶ್ನೆ ಮಾಡುವ ಮಾನಸಿಕ ಸ್ಥಿತಿಯನ್ನು ಬೆಳೆಸಿಕೊಳ್ಳಬೇಕೆಂದರು.

ದೂರದರ್ಶನ ಚಂದನವಾಹಿನಿಯ ಹಿರಿಯ ಪತ್ರಕರ್ತ ನಂಜುಂಡಪ್ಪ  ಮಾತನಾಡಿ,  ಮಾಧ್ಯಮಗಳು ಸಮಾಜವನ್ನು ಸಕಾರಾತ್ಮಕಗೊಳಿಸಬೇಕು. ಡಿಜಿಟಲ್ ಪತ್ರಿಕೋದ್ಯಮ ಬಂದ ನಂತರ ಪತ್ರಿಕೋದ್ಯಮ ಸಾಕಷ್ಟು ಬದಲಾಗಿದೆ. ಪತ್ರಕರ್ತರು ನಿರಂತರ ಅಧ್ಯಯನ ಮತ್ತು ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ಸುದ್ದಿ ಮಾಧ್ಯಮಗಳಲ್ಲಿ ವಿಜ್ಞಾನ ಲೇಖಕರ ಕೊರತೆ ಇದೆ. ವಿಜ್ಞಾನ ಬರಹಗಾರರನ್ನು ಸೃಷ್ಟಿಸುವ ಕೆಲಸ ಆಗಬೇಕಾಗಿದೆ. ಕೃತಕ ಬುದ್ಧಿಮತ್ತೆ ಕೈಮೀರುತ್ತಿರುವ ಬಗ್ಗೆ ಎಚ್ಚರಿಕೆಯ ಮಾತುಗಳು ಕೇಳಿ ಬರುತ್ತಿವೆ. ಪತ್ರಕರ್ತರು ಸುದ್ದಿಯಲ್ಲಿ ಸಮಸ್ಯೆ ಮತ್ತು ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಕಾರಣ ಮತ್ತು ಪರಿಹಾರಗಳ ಬಗ್ಗೆ ಬೆಳಕುಚೆಲ್ಲಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಹುಲಿಕಲ್ ನಟರಾಜು, ಉಪಾಧ್ಯಕ್ಷ ಶ್ರೀರಾಮಚಂದ್ರ, ಕಾರ್ಯದರ್ಶಿ ಚಿಕ್ಕಹನುಮಂತೇಗೌಡ, ಲೆಕ್ಕಪರಿಶೋಧಕ ಕೆ.ಪಿ.ಲಕ್ಷ್ಮೀನಾರಾಯಣ್, ಕಾನೂನು ಸಲಹೆಗಾರ ಬಾಬಾಸಾಹೇಬ್, ಪದವಿ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಎಂ.ರಾಮಕೃಷ್ಣಯ್ಯ, ವಿಜ್ಞಾನ ಸಿರಿ ಮಾಸ ಪತ್ರಿಕೆ ಸಂಪಾದಕ ವಿ.ಟಿ.ಸ್ವಾಮಿ, ಸಂಪಾದಕ ಮಂಡಲಿಯ ಸದಸ್ಯರುಗಳು, ಪತ್ರಿಕೋದ್ಯಮ ವಿದ್ಯಾರ್ಥಿಗಳು ಭಾಗವಹಿಸಿದ್ದರು. ‌

Leave a Reply

Your email address will not be published. Required fields are marked *

© 2026 Malnad TV. All Rights Reserved.