
ದೊಡ್ಡಬಳ್ಳಾಪುರ, (ಡಿ 21): ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆ ಭಾಗವಾಗಿ ನವ ಕರ್ನಾಟಕ ಯುವ ಶಕ್ತಿ ವೇದಿಕೆ ಆಯೋಜಿಸಿರುವ ಉಚಿತ ಜಾನುವಾರು ಮೇವು ವಿತರಣಾ ಕಾರ್ಯಕ್ರಮವನ್ನು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜು ಉದ್ಘಾಟಿಸಿ ಮಾತನಾಡಿ, ದನಗಳ ಜಾತ್ರೆಗೆ ಸರ್ಕಾರದ ವತಿಯಿಂದ ಉಚಿತ ನೀರು ಮತ್ತು ಆಹಾರ ವ್ಯವಸ್ಥೆ ಮಾಡಿದ್ದಾರೆ. ಇದರ ಜೊತೆಗೆ ಸ್ಥಳೀಯ ಸಂಘಟನೆ ನವ ಕರ್ನಾಟಕ ಯುವಶಕ್ತಿ ವೇದಿಕೆಯವರು ಉಚಿತ ಜಾನುವಾರು ಮೇವು ನೀಡುತ್ತಿರುವುದರಿಂದ ರೈತರಿಗೆ ಬಹಳಷ್ಟು ಅನುಕೂಲವಾಗಿದೆ. ಜಾತ್ರೆಯ ರೈತರು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಬಿಜೆಪಿ ಮುಖಂಡ ಓಬದೇನಹಳ್ಳಿ ಮುನಿಯಪ್ಪ ಮಾತನಾಡಿ ಕೆಲವೆಡೆ ಅತಿವೃಷ್ಟಿ ಮತ್ತು ಕೆಲವೆಡೆ ಅನಾವೃಷ್ಟಿಯಿಂದ ಈ ವರ್ಷ ರೈತರು ತೀವ್ರ ನಷ್ಟದಲ್ಲಿದ್ದಾರೆ ಹಾಗೂ ಮೇವಿನ ಕೊರತೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ನವ ಕರ್ನಾಟಕ ಯುವಶಕ್ತಿ ವೇದಿಕೆ ಈ ಕಾರ್ಯಕ್ರಮ ಕೇವಲ ದಾನ ಕಾರ್ಯವಲ್ಲದೆ ರೈತ ಸಮುದಾಯವನ್ನು ಬೆಂಬಲಿಸುವ ಗುರಿ ಹೊಂದಿರುವುದು ನಿಜವಾಗಿಯೂ ಶ್ಲಾಘನೀಯ ಎಂದರು.
ವೇದಿಕೆ ಅಧ್ಯಕ್ಷ ಹಳ್ಳಿ ರೈತ ಅಂಬರೀಶ್ ಮಾತನಾಡಿ ಇಂದು ಉದ್ಘಾಟನೆಯಾಗಿರುವ ಮೇವು ಮತ್ತು ನೀರು ವಿತರಣಾ ಕಾರ್ಯಕ್ರಮ ಇನ್ನೂ ಮೂರು – ನಾಲ್ಕು ದಿನ ಮುಂದುವರಿಯುತ್ತದೆ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳ ರೈತರಿಗೆ ಆದ್ಯತೆ ನೀಡಲು ತೀರ್ಮಾನಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಇತ್ತೀಚಿಗೆ ನಿಧನರಾದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀ ಅಪ್ಪಯ್ಯಣ್ಣನವರಿಗೆ ಪುಷ್ಪಾರ್ಚನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವೇದಿಕೆ ಸಹಯೋಗದೊಂದಿಗೆ ನಂದಿ ವಿ ಕೇರ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಸಹ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಘಾಟಿ ದೇವಾಲಯ ಕಾರ್ಯನಿರ್ವಹಣಾ ಅಧಿಕಾರಿ ನಾರಾಯಣಸ್ವಾಮಿ, ತೂಬಗೆರೆ ಹೋಬಳಿ ಜೆಡಿಎಸ್ ಅಧ್ಯಕ್ಷ ಜಗನ್ನಾಥ್, ಕಾರ್ಯದರ್ಶಿ ಅಶೋಕ್, ಅರ್ಕಾವತಿ ರೈತ ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಭಾಸ್ಕರ್, ನವ ಕರ್ನಾಟಕ ಯುವಶಕ್ತಿ ವೇದಿಕೆ ಕಾರ್ಯದರ್ಶಿ ಉದಯ ಆರಾಧ್ಯ, ಪದಾಧಿಕಾರಿಗಳಾದ ಮುಬಾರಕ್ ಷರೀಫ್, ನಾಗರಾಜು, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲೂಕು ಅಧ್ಯಕ್ಷ ಹನುಮಂತೇಗೌಡ, ಮುಖಂಡರಾದ ನಲ್ಲಪ್ಪ,ವೇದಿಕೆಯ ಪದಾಧಿಕಾರಿಗಳು ಹಾಗೂ ಸದಸ್ಯರು ರೈತರು ಭಾಗವಹಿಸಿದ್ದರು.