ದೇವರ ದಾಸಿಮಯ್ಯ ವಾಣಿಜ್ಯ ಸಂಕೀರ್ಣ ಹೆಸರಿನಲ್ಲಿ ಸೀರೆ ಮಾರಾಟ ಮಳಿಗೆ ನಿರ್ಮಾಣ : ಒಂದೆಡೆ ಶಾಸಕರಿಂದ ಶಂಕುಸ್ಥಾಪನೆ ಮತ್ತೊಂದೆಡೆ ಕಾಂಗ್ರೆಸ್ ನಿಂದ ಪ್ರತಿಭಟನೆ 

Spread the love

ದೊಡ್ಡಬಳ್ಳಾಪುರ : ಸ್ಥಳೀಯ ನೇಕಾರರಿಗೆ ಅನುಕೂಲವಾಗುವಂತೆ ನೇಕಾರರಿಂದ ಗ್ರಾಹಕರಿಗೆ ನೇರ ಸೀರೆ ಮಾರಾಟ ಮಾಡಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸೀರೆ ಮಾರಾಟ ಮಳಿಗೆಗಳ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಶಾಸಕ ಧೀರಜ್ ಮುನಿರಾಜು ಚಾಲನೆ ನೀಡಿದರು.

ನಗರದ ಡಿ ಕ್ರಾಸ್ ಸಮೀಪ ನಗರ ಪೊಲೀಸ್ ಠಾಣೆ ಮುಂಭಾಗ ಈ ಹಿಂದೆ ರೇಷ್ಮೆ ಇಲಾಖೆಗೆ ನಿಗದಿ ಮಾಡಲಾಗಿದ್ದ 10 ಕುಂಟೆ ಜಾಗದಲ್ಲಿ ನಡೆದ ಸೀರೆ ಮಾರಾಟ ಮಳಿಗೆಗಳ ನಿರ್ಮಾಣದ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ಸ್ಥಳೀಯ ಶಾಸಕರ ಅಭಿವೃದ್ಧಿ ನಿಧಿ ಯಲ್ಲಿ 50 ಲಕ್ಷ ಬಯಲುಸೀಮೆ ಅಭಿವೃದ್ಧಿ ಪ್ರಾಧಿಕಾರದ ನಿಧಿಯಿಂದ 50 ಲಕ್ಷ ಹಣದಲ್ಲಿ ಸ್ಥಳೀಯ ನೇಕಾರರಿಗೆ ಅನುಕೂಲ ವಾಗುವಂತೆ ಜವಳಿ ಇಲಾಖೆಯ ಅಡಿಯಲ್ಲಿ ದೇವರ ದಾಸಿಮಯ್ಯ ವಾಣಿಜ್ಯ ಸಂಕೀರ್ಣ ಎಂಬ ಹೆಸರಿನ ಅಡಿಯಲ್ಲಿ ಸೀರೆಗಳ ಮಾರಾಟ ಮಳಿಗೆ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

 

 

ರೇಷ್ಮೆ ಇಲಾಖೆಗೆ ನಿಗದಿಯಾಗಿದ್ದ ಸ್ಥಳದಲ್ಲಿ ಸೀರೆ ಮಳಿಗೆ ನಿರ್ಮಾಣ 

 

ನಿರಂತರ ಎರಡು ವರ್ಷಗಳ ಶ್ರಮದ ಫಲವಾಗಿ ರೇಷ್ಮೆ ಇಲಾಖೆಗೆ ನಿಗದಿಪಡಿಸಲಾಗಿದ್ದ 10 ಕುಂಟೆ ಜಾಗವನ್ನು ತಿದ್ದುಪಡಿ ಮೂಲಕ ಜವಳಿ ಇಲಾಖೆಯ ಅಡಿಯಲ್ಲಿ ಸ್ಥಳೀಯ ನೇಕಾರ ಅನುಕೂಲಕ್ಕಾಗಿ ಸ್ಥಳೀಯವಾಗಿ ಮಾರುಕಟ್ಟೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸೀರೆ ಮಾರಾಟ ಮಳಿಗೆ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

 

ದೇವರ ದಾಸಿಮಯ್ಯ ವಾಣಿಜ್ಯ ಮಳಿಗೆಗಳ ಸಂಕೀರ್ಣ ಹೆಸರಿನಲ್ಲಿ ಸೀರೆ ಮಾರಾಟ ಮಳಿಗೆ

ನೇಕಾರಿಕೆ ಬ್ರಾಂಡ್ ಕಲ್ಪಿಸುವ ನಿಟ್ಟಿನಲ್ಲಿ ಮಳಿಗೆ ನಿರ್ಮಾಣ ಮತ್ತು ನೈಕಾರಿಕೆ ಉದ್ಯಮ ಉಳಿಸುವಲ್ಲಿ ಸೀರೆ ಮಾರಾಟ ಮಳಿಗೆಗಳು ಸಾಕಷ್ಟು ಪ್ರಮುಖ ಪಾತ್ರ ವಹಿಸಲಿವೆ. ದೇವರ ದಾಸಿಮಯ್ಯ ವಾಣಿಜ್ಯ ಸಂಕೀರ್ಣ ಕಟ್ಟಡದ ಕೆಳಮಹಡಿಯಲ್ಲಿ 15 ಕಟ್ಟಡಗಳು ಮತ್ತು ಒಂದನೇ ಮಹಡಿಯಲ್ಲಿ 15 ಮಳಿಗೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಮುಂದೆ ಸರ್ಕಾರದಿಂದ ಹೆಚ್ಚಿನ ಅನುದಾನ ದೊರೆತಲ್ಲಿ ನೇಕಾರಿಕೆಗೆ ಉಪಯೋಗವಾಗುವ ಪರಿಕರಗಳ ಮಾರಾಟ ಮಳಿಗೆಯನ್ನು ಪ್ರಾರಂಭಿಸುವ ಹಾಗೂ ಕಟ್ಟಡದ ಮೇಲ್ಭಾಗದಲ್ಲಿ ಸಮುದಾಯ ಭವನ ನಿರ್ಮಾಣ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶವನ್ನು ಯೋಜನೆಹೊಂದಿದೆ ಎಂದರು.

ಒತ್ತುವರಿ ತೆರವುಗೊಳಿಸಲು ಹರಸಾಹಸ

ರೇಷ್ಮೆ ಇಲಾಖೆಗೆ ನಿಗಾದಿಯಾಗಿದ್ದ 10ಗುಂಟೆ ಜಾಗವನ್ನು ಈಗಾಗಲೇ ಹಲವರು ಒತ್ತುವರಿ ಮಾಡಿಕೊಂಡಿದ್ದರು ಸದರಿ ಒತ್ತುವರಿಯನ್ನು ಬಿಡಿಸಲು ಅಧಿಕಾರಿಗಳು ಹರಸಾಹಸ ಪಡಬೇಕಾಯಿತು. ಶಂಕುಸ್ಥಾಪನೆ ನಂತರ ಪ್ರಾಥಮಿಕವಾಗಿ 10 ಗುಂಟೆ ಜಾಗಕ್ಕೆ ಕಾಂಪೌಂಡ್ ನಿರ್ಮಿಸುವ ಮೂಲಕ ಕಟ್ಟಡ ನಿರ್ಮಾಣಕ್ಕೆ ನಿಗದಿಯಾಗಿರುವ ಸ್ಥಳವನ್ನು ಸಂರಕ್ಷಣೆಮಾಡಲಾಗುವುದು ಎಂದು ಶಾಸಕರು ತಿಳಿಸಿದರು

 

ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣ

ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ನೇಕಾರರಿಗೆ ವಾಣಿಜ್ಯ ಮಾರಾಟ ಮಳಿಗೆ ನಿರ್ಮಾಣ ಮಾಡುತ್ತಿದ್ದು ಒಂದು ವರ್ಷದ ಕಾಲಾವಧಿಯ ಒಳಗೆ ಈ ಕಾಮಗಾರಿ ಪೂರ್ಣಗೊಳ್ಳಲಿದೆ ದೇವರ ದಾಸಿಮಯ್ಯ ವಾಣಿಜ್ಯ ಸಂಕೀರ್ಣ ಕಟ್ಟಡ ಉದ್ಘಾಟನೆಗೆ ರಾಜ್ಯದ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಅವರ ಮುಖೇನ ಕಟ್ಟಡ ಉದ್ಘಾಟನೆ ಮಾಡಲಾಗುವುದು ಎಂದರು.

ಒಂದೆಡೆ ಶಂಕುಸ್ಥಾಪನೆ ಮತ್ತೊಂದೆಡೆ ಪ್ರತಿಭಟನೆ

ಹೌದು ಇಂದು ಸೀರೆ ಮಾರಾಟ ಮಳಿಗೆಗಳ ನಿರ್ಮಾಣದ ಶಂಕು ಸ್ಥಾಪನೆಗೆ ಒಂದೆಡೆ ವೇದಿಕೆ ಸಿದ್ಧವಾಗಿದ್ದರೆ ಮತ್ತೊಂದೆಡೆ ಕಾಂಗ್ರೆಸ್ ಪ್ರತಿಭಟನೆಗೆ ಮುಂದಾಗಿತ್ತು ಸ್ಥಳೀಯ ಶಾಸಕ ಧೀರಜ್ ಮುನಿರಾಜು ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ, ಚುನಾಯಿತ ಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಪ್ರಮುಖರು ಹಲವು ಚುನಾಯಿತ ಪ್ರತಿನಿಧಿಗಳು ನಗರದ ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡರು , ಪ್ರತಿಭಟನಾಕಾರರು ತಡೆಯಲು ಪೊಲೀಸ್ ಹರಸಾಹಸ ಪಡಬೇಕಾಯಿತು. ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವ ಕೆ ಎಚ್ ಮುನಿಯಪ್ಪ ಅವರ ಮಾತಿಗೆ ಬೆಲೆ ಕೊಟ್ಟು ಕಾಂಗ್ರೆಸ್ ಮುಖಂಡರು ಪ್ರತಿಭಟನೆಯನ್ನು ಕೈಬಿಟ್ಟರು.

 

ಶುಕ್ರವಾರ(ಜ. 09) ಮತ್ತೊಮ್ಮೆ ಸಚಿವರಿಂದ ಶಂಕು ಸ್ಥಾಪನೆ

ಸ್ಥಳೀಯ ಶಾಸಕರು ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ಹಿನ್ನೆಲೆ ಇಂದು ನಡೆದ ಸೀರೆ ಮಾರಾಟ ಮಳಿಗೆಗಳ ಶಂಕುಸ್ಥಾಪನ ಕಾರ್ಯಕ್ರಮವು ಶುಕ್ರವಾರ ಮತ್ತೊಮ್ಮೆ ನಡೆಯಲಿದೆ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಭಾಗವಹಿಸಲಿದ್ದು ತಾಲೂಕಿನ ಎಲ್ಲಾ ವಿಭಾಗಗಳ ಚುನಾಯಿತ ಪ್ರತಿನಿಧಿಗಳು ಭಾಗವಹಿಸುವ ಸಾಧ್ಯತೆ ಇದೆ. ಶುಕ್ರವಾರ(ಜ. 09) ನಡೆಯುವ ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜು ಸ್ಥಳೀಯ ನೇಕಾರ ಮುಖಂಡರೊಂದಿಗೆ ಭಾಗವಹಿಸಿ ಸಚಿವರ ಬಳಿ ಸೀರೆಗಳ ಮಾರಾಟ ಮಳಿಗೆಗೆ ಮತ್ತಷ್ಟು ಅನುದಾನ ಬಿಡುಗಡೆಗೊಳಿಸುವಂತೆ ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ನಗರದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾಜಿ ಶಾಸಕ ಟಿ ವೆಂಕಟರಮಣಯ್ಯ ಮಾತನಾಡಿದರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಸ್ಥಳೀಯ ಶಾಸಕರು ಯಾವುದೇ ಶಿಷ್ಟಾಚಾರ ಪಾಲನೆ ಮಾಡುತ್ತಿಲ್ಲ. ಜನರಿಂದ ಆಯ್ಕೆಯಾದ ಚುನಾಯಿತ ಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೆ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ.ಈ ಹಿಂದೆ ನಾವು ಅಧಿಕಾರದಲ್ಲಿದ್ದಾಗ ಸರ್ಕಾರಿ ಕಾರ್ಯಕ್ರಮಗಳ ವಿಚಾರವಾಗಿ ತಾಲೂಕಿನ ಎಲ್ಲಾ ವಿಭಾಗಗಳ ಪ್ರಮುಖ ಚುನಾಯಿತ ಪ್ರತಿನಿಧಿಗಳನ್ನು ಆಹ್ವಾನಿಸುವ ಕಾರ್ಯ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷ ಅಧಿಕಾರದಿದ್ದರೂ ಅನ್ಯ ಪಕ್ಷದಿಂದ ಗೆದ್ದು ಚುನಾಯಿತರಾದ ಪ್ರತಿನಿಧಿಗಳಿಗೆ ಆಹ್ವಾನಿಸಿ ವೇದಿಕೆ ಕಲ್ಪಿಸಿದ್ದೇವೆ ಎಂದರು.

 

ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಆರು ಬಾರಿ ದೊಡ್ಡಬಳ್ಳಾಪುರಕ್ಕೆ ಭೇಟಿ ನೀಡಿದ್ದಾರೆ . ಅವರ ಕಾರ್ಯಕ್ರಮದಲ್ಲಿ ಆಗಿನ ನಗರಸಭೆಯ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಸ್ಥಾಯಿ ಸಮಿತಿಯ ಅಧ್ಯಕ್ಷರನ್ನು ಪಕ್ಷ ಭೇದ ಮಾಡದೆ ಕಾರ್ಯಕ್ರಮಕ್ಕೆ ಆಹ್ವಾನಿಸಿ ವೇದಿಕೆ ಕೂಡ ಕಲ್ಪಿಸಿದ್ದೇವೆ. ಆದರೆ ಇಂದು ಸ್ಥಳೀಯ ಶಾಸಕರು ಕಾಂಗ್ರೆಸ್ ಹಾಗೂ ಇನ್ನುಳಿದ ಚುನಾಯಿತ ಪ್ರತಿನಿಧಿಗಳನ್ನು ಕಡೆಗಣಿಸುತ್ತಿರುವುದು ಸರಿಯಲ್ಲ ಮುಂದೆಯಾದರೂ ಶಿಷ್ಟಾಚಾರ ಪಾಲನೆ ಮಾಡಲಿ ಎಂದರು.

 

 

ಈ ಹಿಂದೆ ಶಾಸಕರಾಗಿದ್ದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಕರಿ ಗೌಡರ ನೇತೃತ್ವದಲ್ಲಿ ರೇಷ್ಮೆ ಇಲಾಖೆಗೆ 10ಗುಂಟೆ ಜಾಗವನ್ನು ಮಂಜೂರು ಮಾಡಲಾಗಿತ್ತು ಅದನ್ನು ಶಾಸಕರು ಮರೆಯಬಾರದು ಎಂದರು.

Leave a Reply

Your email address will not be published. Required fields are marked *

© 2026 Malnad TV. All Rights Reserved.