ದೊಡ್ಡಬಳ್ಳಾಪುರ : ಮಹಡಿ ಮೇಲಿಂದ ಬಿದ್ದು ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಮಗುವಿಗೆ ಶೀಘ್ರ ಹಾಗೂ ಉತ್ತಮ ಚಿಕಿತ್ಸೆ ನೀಡುವ ಮೂಲಕ ಯಲಹಂಕದ ಮಣಿಪಾಲ್ ಆಸ್ಪತ್ರೆಯ ವೈದ್ಯರ ತಂಡ ಜೀವದಾನ ಮಾಡಿದೆ.
ಈ ಘಟನೆ ಕುರಿತು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಆಸ್ಪತ್ರೆಯ ವೈದ್ಯರ ತಂಡ 2 ವರ್ಷ 8 ತಿಂಗಳ ಮಗು ನಿಮ್ಮಾ ಫಾತಿಮಾ ಅವರ ಅದ್ಭುತ ಬದುಕುಳಿವಿನ ಕಥೆಯನ್ನು ಹಂಚಿಕೊಂಡರು.
Ad
ಈ ಕುರಿತು ಮಕ್ಕಳ ತೀವು ನಿಗಾ ತಜ್ಞರಾದ ಡಾ.ಸಯ್ಯದ್ ಎಂ.ಡಿ.ನೌಷಾದ್ ಅಲಿ ಮಾತನಾಡಿ, “ಮಗು ಆಸ್ಪತ್ರೆಗೆ ಬಂದಾಗ ಮೆದುಳಿನ ಮೇಲೆ ಭಾರೀ ಒತ್ತಡ ಮತ್ತು ಶಾರೀರಿಕ ಪ್ರಮುಖ ಚಿಹ್ನೆಗಳ ಅಸ್ಥಿರತೆ ಕಂಡುಬಂದಿತ್ತು. ಮೆದುಳಿನ ಊತ ನಿಯಂತ್ರಿಸಲು ವಿಶೇಷ ಸಲೈನ್ ಚಿಕಿತ್ಸೆ ಅಪಸ್ಮಾರಗಳನ್ನು ತಡೆಯಲು ಔಷಧೋಪಚಾರ ಹಾಗೂ ರಕ್ತಸಂಚಾರ ಸ್ಥಿರವಾಗಿಡಲು ಅಗತ್ಯ ಬೆಂಬಲ ನೀಡಲಾಯಿತು. ಮೊದಲ 24 ಗಂಟೆಗಳು ಅತ್ಯಂತ ನಿರ್ಣಾಯಕವಾಗಿದ್ದವು,” ಎಂದು ಹೇಳಿದರು.
ಮಕ್ಕಳ ತೀವ್ರ ನಿಗಾ ತಜ್ಞರಾದ ಡಾ. ಕಾರ್ತಿಕ್ ಅರಿಗೇಲ ಮಾತನಾಡಿ “ಕಣ್ಣಿನ ಹಿಂಭಾಗದಲ್ಲಿ ರಕ್ತಸ್ರಾವದಿಂದ ಉಂಟಾದ ಒತ್ತಡ ಅತ್ಯಂತ ಗಂಭೀರ ಸಮಸ್ಯೆಯಾಗಿತ್ತು. ತಕ್ಷಣವೇ ಆ ರಕ್ತವನ್ನು ಹೊರತೆಗೆದು, ನಂತರ ಕಣ್ಣಿನ ರಕ್ಷಣೆಗೆ ಅಗತ್ಯ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಇದರ ಜೊತೆಗೆ ವೆಂಟಿಲೇಟರ್ ಸಹಾಯ, ರಕ್ತ ವರ್ಗಾವಣೆ ಮತ್ತು ಸೋಂಕು ನಿಯಂತ್ರಣ ಕ್ರಮಗಳು ಸಮನ್ವಯದಿಂದ ನಡೆಯಿತು, ಇವುಗಳೆಲ್ಲವೂ ಮಗುವಿನ ಚೇತರಿಕೆಗೆ ಮುಖ್ಯ ಕಾರಣಗಳಾಗಿವೆ” ಎಂದರು.
Ad
ಆಸ್ಪತ್ರೆಯಲ್ಲಿದ್ದ ದಿನಗಳಲ್ಲಿ ಮಗು ನಿಮ್ಮಾ ನಿಧಾನವಾಗಿ ಆದರೆ ಸ್ಥಿರವಾಗಿ ಚೇತರಿಸಿಕೊಂಡಳು. ಜೀವಚಿಹ್ನೆಗಳು ಸ್ಥಿರಗೊಂಡವು, ಸೋಂಕು ನಿಯಂತ್ರಣಕ್ಕೆ ಬಂದಿತು. ನರ ವೈಜ್ಞಾನಿಕ ಸ್ಥಿತಿ ಸುಧಾರಿಸಿತು. ಕ್ರಮೇಣ ವೆಂಟಿಲೇಟರ್ನಿಂದ ಬೇರ್ಪಡಿಸಿ, ಸುಮಾರು ಎರಡು ವಾರಗಳ ಚಿಕಿತ್ಸೆಯ ನಂತರ, ಸ್ಥಿರ ಸ್ಥಿತಿಯಲ್ಲಿ ಮನೆಗೆ ಕಳುಹಿಸಲಾಯಿತು. ಮುಂದಿನ ಹಂತದ ಚಿಕಿತ್ಸೆಯಾಗಿ ಪುನರ್ ನಿರ್ಮಾಣ ಶಸ್ತ್ರಚಿಕಿತ್ಸೆ ಯೋಜಿಸಲಾಗಿದೆ ಎಂದರು.
ಈ ಕಠಿಣ ಸಮಯವನ್ನು ನೆನಪಿಸಿಕೊಂಡು ಮಗುವಿನ ಕುಟುಂಬಸ್ಥರು ಮಾತನಾಡುತ್ತಾ ‘ಅವಳ ಸ್ಥಿತಿ ನೋಡಿದಾಗ ನಾವು ಸಂಪೂರ್ಣವಾಗಿ ಕುಗ್ಗಿಬಿಟ್ಟೆವು. ಅವಳನ್ನು ಕಳೆದುಕೊಳ್ಳಬಹುದು ಅನ್ನಿಸಿತು. ಆದರೆ ಮಣಿಪಾಲ್ ಆಸ್ಪತ್ರೆಯ ವೈದ್ಯರು ತಕ್ಷಣ ಕ್ರಮ ತೆಗೆದುಕೊಂಡು, ಬಹುಶಾಖಾ ಚಿಕಿತ್ಸೆಯ ಮೂಲಕ ನಮಗೆ ಧೈರ್ಯ ನೀಡಿದರು. ಇಂದು ಅವಳನ್ನು ಸುರಕ್ಷಿತವಾಗಿ ನೋಡುತ್ತಿರುವುದು ನಮಗೆ ವರ್ಣಿಸಲಾಗದಷ್ಟು ಸಂತೋಷವಾಗಿದೆ,” ಎಂದರು.
ಈ ಕುರಿತು ಮಕ್ಕಳ ವಿಭಾಗದ ನಿರ್ದೇಶಕರಾದ ಡಾ. ಚೇತನ ಗಿಣಿಗೇರಿ ಮಾತನಾಡಿ, “ಮಕ್ಕಳ ದೇಹ ಇನ್ನೂ ಬೆಳವಣಿಗೆಯ ಹಂತದಲ್ಲಿರುವುದರಿಂದ, ಇಂತಹ ಗಾಯಗಳು ಬೇಗನ ಗಂಭೀರವಾಗಬಹುದು. ಆದ್ದರಿಂದ ಪೋಷಕರು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡುವುದು ಮತ್ತು ಸುರಕ್ಷಿತ ಮನೆ ವಾತಾವರಣ ನಿರ್ಮಿಸುವುದು ಅತ್ಯಂತ ಮುಖ್ಯ. ಜೊತೆಗೆ, ತಕ್ಷಣವೇ ವಿಶೇಷ ತಜ್ಞ ಚಿಕಿತ್ಸೆಯನ್ನು ಪಡೆಯುವುದರಿಂದಫಲಿತಾಂಶದಲ್ಲಿ ಮಹತ್ವದ ಬದಲಾವಣೆ ತರಬಹುದು,” ಎಂದರು.
ಈ ವೇಳೆ ಯಲಹಂಕ ಮಣಿಪಾಲ್ ಆಸ್ಪತ್ರೆಯ ಸಿಬ್ಬಂದಿ ವರ್ಗ ಹಾಜರಿದ್ದರು.
