ವಿಜಯ ಮಿತ್ರ ದೊಡ್ಡಬಳ್ಳಾಪುರ :ಹೊಸ ತಂತ್ರಜ್ಞಾನಗಳ ಪ್ರಯೋಜನವನ್ನು ಬಳಸಿಕೊಂಡು ನಕಲಿ ದಾಖಲೆಗಳನ್ನು ಕಂಡುಹಿಡಿದು, ಸರ್ಕಾರಿ ಸ್ವತ್ತಿನ ನಕಲು ದಾಖಲೆಗಳನ್ನು ಸೃಷ್ಟಿಸಿ, ಖಾತೆಯನ್ನು ಮಾಡಿಸಿಕೊಂಡು, ಸರ್ಕಾರಿ ಜಾಗವನ್ನು ಕಬಳಿಸಿಕೊಳ್ಳಲು. ಹುನ್ನಾರ ರಚಿಸುವ ಭೂಗಳ್ಳರ ವಿರುದ್ಧ, ನಕಲು ದಾಖಲೆಗಳನ್ನು ಸೃಷ್ಟಿಸಲು ಸಹಕರಿಸಿರುವ ಎಲ್ಲಾ ಸರ್ಕಾರಿ ಅಧಿಕಾರಿಗಳ ವಿರುದ್ಧ ಹಾಗೂ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಲು ವಿಫಲರಾಗಿ ಖಾತೆಯನ್ನು ಮೊದಲಿಗೆ ಭೂಗಳ್ಳರ ಪರವಾಗಿ ಮಾಡಿಕೊಡಲು ಆದೇಶಿಸಿದ, ಹಾಗೂ ಖಾತೆ ಮಾಡಿಕೊಟ್ಟ ಸರ್ಕಾರಿ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಬಿ ಎಸ್ ಚಂದ್ರಶೇಖರ್ ಅಗ್ರಹಿಸಿದ್ದಾರೆ.
ತಾಲ್ಲೂಕಿನ ಅರೆಹಳ್ಳಿಗುಡ್ಡದಹಳ್ಳಿ ಗ್ರಾಮದ ಸರ್ವೇ ನಂಬರ್ 57ರಲ್ಲಿ 10-25 ಎ/ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಸದರಿ ಜಾಗಕ್ಕೆ ಸಂಬಂಧಿಸಿದ 6-00 ಎ/ಗುಂಟೆ ಜಮೀನನ್ನು, ಭೂಗಳ್ಳರು ಕಬಳಿಸುವ ಸಲುವಾಗಿ, ಅಧಿಕಾರಿಗಳ ಸಹಾಯದಿಂದ ಮ್ಯುಟೇಷನ್ ಪತ್ರದಲ್ಲಿ ಇಲ್ಲದ ಪುಟಗಳನ್ನು ಸೇರಿಸಿ, ನಕಲು ಸಹಿಯನ್ನು ಹಾಕುವುದರ ಮೂಲಕ ದಾಖಲೆಯನ್ನು ತಿರುಚಿ ನಕಲಿ ದಾಖಲೆಯನ್ನು ಸೃಷ್ಟಿಸಿರುತ್ತಾರೆ. ದಾಖಲೆಗಳನ್ನು ತಿರುಚಿ ನಕಲಿ ದಾಖಲೆಗಳನ್ನು ಆಧಾರವನ್ನಾಗಿಸಿಕೊಂಡು ಭೂಗಳ್ಳರು ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಸದರಿ ಜಾಗಕ್ಕೆ ಖಾತೆ ಮಾಡಿಕೊಡಬೇಕೆಂದು ದಾವೆಯನ್ನು ಹೂಡಿರುತ್ತಾರೆ. ಉಪವಿಭಾಗಾಧಿಕಾರಿಗಳು ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆ ಅರ್ಜಿದಾರರಾದ ಭೂಗಳ್ಳರ ಪರವಾಗಿ ಖಾತೆ ಮಾಡಿಕೊಡಲು ಆದೇಶಿಸಿದ್ದು ತದನಂತರ ಸದರಿ ಆದೇಶದ ಮೇರೆಗೆ ತಹಶೀಲ್ದಾರ್ ರವರು ಸಹ ಮೂಲ ದಾಖಲೆಗಳನ್ನು ಪರಿಶೀಲಿಸದೆ ಖಾತೆಯನ್ನು ಮಾಡಿಕೊಟ್ಟಿರುತ್ತಾರೆ. ಇತ್ತೀಚಿನ ಬೆಳವಣಿಗೆಗಳ ನಂತರ ಜಿಲ್ಲಾಧಿಕಾರಿಗಳು ಉಪವಿಭಾಗಾಧಿಕಾರಿಗಳ ಆದೇಶವನ್ನು ರದ್ದುಗೊಳಿಸಿ, ತಹಶೀಲ್ದಾರ್ ರವರು ಮಾಡಿರುವ ಖಾತೆಯನ್ನು ವಜಾಗೊಳಿಸಿ, ಸದರಿ ಜಮೀನನ್ನು ಸರ್ಕಾರ ಗೋಮಾಳವೆಂದು ನಮೂದು ಮಾಡಬೇಕೆಂದು ಆದೇಶಿಸಿರುತ್ತಾರೆ. ಜಿಲ್ಲಾಧಿಕಾರಿಗಳ ಆದೇಶದ ನಂತರ ಭೂಗಳ್ಳರ ಖಾತೆಯನ್ನು ವಜಾ ಮಾಡಿ, ಸರ್ಕಾರಿ ಗೋಮಾಳ ಎಂದು ನಮೂದು ಮಾಡಿರುವುದು ಸ್ವಾಗತರ್ಹ ವಿಷಯವಾಗಿದೆ.
ಆದ್ದರಿಂದ, ಹೊಸ ತಂತ್ರಜ್ಞಾನಗಳ ಪ್ರಯೋಜನವನ್ನು ಬಳಸಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಜಾಗ ಕಬಳಿಸಿದ ವ್ಯಕ್ತಿಗಳ ಹಾಗೂ ಖಾತೆ ಮಾಡಿಕೊಟ್ಟ ಸರ್ಕಾರಿ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ ಸ್ಕ್ಯಾನಿಂಗ್ ಕೇಂದ್ರ ಹಾಗೂ ರೆಕಾರ್ಡ್ ರೂಮ್ ಗಳಲ್ಲಿ ಸಿ ಸಿ ಕ್ಯಾಮೆರಾ ಅಳವಡಿಸಬೇಕು.ಈ ಕೂಡಲೇ ಪೊಲೀಸ್ ಇಲಾಖೆಗೆ ದೂರನ್ನು ನೀಡಿ ಈ ಪ್ರಕರಣಕ್ಕೆ ಸಂಬಂಧಿಸಿದ ರೆಜಿಸ್ಟರ್ಸ್, ಕಡತಗಳನ್ನು ಸೀಜ್ ಮಾಡಿಸಬೇಕು ಹಾಗೂಈಗಾಗಲೇ ಸ್ಕ್ಯಾನ್ ಮಾಡಿರುವ ದಾಖಲೆಗಳನ್ನು ನಕಲಿ ದಾಖಲೆ ಎಂದು ಗುರುತು ಮಾಡಿ ಸಾರ್ವಜನಿಕರಿಗೆ ವಿತರಿಸದಂತೆ ತಡೆಹಿಡಿಯಬೇಕು ಎಂದು ನಮ್ಮ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಮನವಿ ಮಾಡುತ್ತದೆ ಎಂದು ತಿಳಿಸಿದರು.
ಈ ವೇಳೆ ಸಂಸ್ಥಾಪಕ ಅಧ್ಯಕ್ಷ ಬಿಎಸ್ ಚಂದ್ರಶೇಖರ್. ರಾಜ್ಯಪ್ರದಾನ ಕಾರ್ಯದರ್ಶಿ ಆರ್ ರಮೇಶ್. ರಾಜ್ಯ ಮುಖಂಡ ಪಿ ವಾಸು. ಜಿಲ್ಲಾ ಯುವ ಘಟಕ ಅಧ್ಯಕ್ಷ ರಂಜಿತ್ ಗೌಡ. ತಾಲೂಕು ಅಧ್ಯಕ್ಷ ವಿನಯ ಆರಾಧ್ಯ. ತಾಲೂಕು ಕಾರ್ಯದರ್ಶಿ ಪ್ರದೀಪ್ ಕುಮಾರ್ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.
