ದೊಡ್ಡಬಳ್ಳಾಪುರ ( ವಿಜಯಮಿತ್ರ ) : ವಿದ್ಯುತ್ ಲೈನ್ಗಳಿಗೆ, ಕೈಗಾರಿಕೆಗಳಿಗೆ ಫಲವತ್ತಾದ ಕೃಷಿ ಭೂಮಿ ಸ್ವಾಧೀನ ಪಡಿಸಿಕೊಂಡು ಕೃಷಿಗೆ ಸಂಚಕಾರ ತರುವ ಸರ್ಕಾರದ ನೀತಿಗಳನ್ನು ವಿರೋದಿಸಿ, ಸೆ.೪ರಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ನೇತೃತ್ವದಲ್ಲಿ ಜಿಲ್ಲಾಕಾರಿಗಳ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಮುಖಂಡರು ತಿಳಿಸಿದರು.

ರೈತರ ಕೃಷಿ ಪಂಪ್ಸೆಟ್ ಮೀಟರ್ಗಳಿಗೆ ಆಧಾರ್ ಜೋಡಣೆ ಮಾಡುವ ಮೂಲಕ ವಿದ್ಯುತ್ ಖಾಸಗೀಕರಣದ ಹುನ್ನಾರ ನಡೆಯುತ್ತಿರುವುದು ಸ್ಪಷ್ಟವಾಗಿದೆ.ಈ ಮುಂಚೆ ಇದ್ದ ಕರ್ನಾಟಕ ವಿದ್ಯುತ್ ಮಂಡಲಿ (ಕೆಇಬಿ)ಯನ್ನು ಐದು ವಿದ್ಯುತ್ ಸರಬರಾಜು ಕಂಪನಿಗಳನ್ನಾಗಿ ಮಾಡಿ, ಕಂಪನಿಗಳನ್ನು ಖಾಸಗೀಕರಣಕ್ಕೆ ವಹಿಸಲಾಗಿದೆ. ಈ ಕಂಪನಿಗಳು ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್, ಭಾಗ್ಯ ಜ್ಯೋತಿ ಮೊದಲಾದ ಯೋಜನೆಗಳನ್ನು ಜಾರಿಗೆ ತರಲು ಹಿಂದೇಟು ಹಾಕಿ ಸರ್ಕಾರವನ್ನು ಪರೋಕ್ಷವಾಗಿ ಒತ್ತಾಯಿಸುವ ಫಲವಾಗಿ ಇಂದು ಕ್ರಮೇಣ, ಸರ್ಕಾರ ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡುವ ಹೆಜ್ಜೆ ಇರಿಸಿದೆ. ಡಿಜಿಟಲ್ ಮೀಟರ್, ಸಿಮ್ ಕಾರ್ಡ್ ಗಳ ಅಳವಡಿಕೆ ಮಾಡುವ ಮೂಲಕ ದುಬಾರಿ ವೆಚ್ಚ ಹೇರುತ್ತಿವೆ. ಹಾಗಾಗಿ ವಿದ್ಯುತ್ ಖಾಸಗೀಕರಣಕ್ಕೆ ನಮ್ಮ ಪ್ರಬಲ ವಿರೋಧವಿದೆ ಎಂದರು.
ಸರ್ಕಾರ ಈಗ ಉಪ ನಗರದ ಯೋಜನೆಯಡಿ ಹೆಸರು ಬದಲಾವಣೆ ಮಾಡಿ, ರೈತರ ಶೇ.65ರಿಂದ 70 ಭಾಗ ನೀರಾವರಿ ಭೂಮಿಯನ್ನು ಪಡೆಯಲಾಗುತ್ತಿದೆ. ಭೂಮಿ ವಶ ಪಡಿಸಿಕೊಳ್ಳುವದರಲ್ಲಿ ಶೇ. ೩೫ ಭಾಗ ಜಮೀನು ರಸ್ತೆ, ವಿದ್ಯುತ್ ಗೆ ಕಳೆದುಹೋಗುತ್ತಿದೆ. ಇದರ ಬಗ್ಗೆ ನಮ್ಮ ವಿರೋಧವಿದೆ ಎಂದರು.

ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಸನ್ನ ಮಾತನಾಡಿ, ವಿದ್ಯುತ್ ಖಾಸಗೀಕರಣದ ಪ್ರಕ್ರಿಯೆಗಳು ರೈತರಿಗೆ ಮಾರಕವಾಗಿದೆ. ಪವರ್ ಗ್ರಿಡ್ನಿಂದ ರೈತರ ಜಮೀನುಗಳಲ್ಲಿ ಹಾದು ಹೋಗುವ ಬೃಹತ್ ವಿದ್ಯುತ್ ಕಂಬಗಳು ರೈತರ ಕೃಷಿಗೆ ಸಂಚಕಾರ ತಂದಿವೆ. ಇದರಿಂದ ರೈತರ ಜಮೀನಿಗೆ ಬೆಲೆಯೂ ಸಿಗುವುದಿಲ್ಲ . ಸರ್ಕಾರ 1:4 ದರದಲ್ಲಿ ಭೂಮಿ ಖರೀದಿ ಮಾಡಿ, ಆನಂತರ ವಿದ್ಯುತ್ ಲೈನ್ಗಳನ್ನು ಎಳೆಯಲಿ. ಇಲ್ಲವೇ ಅಂಡರ್ ಗ್ರೌಂಡ್ ಕೇಬಲ್ಗಳನ್ನು ಅಳವಡಿಸಲಿ. ಅದು ಬಿಟ್ಟು ರೈತರ ಜಮೀನುಗಳ ಮೇಲೆ ಅತಿಕ್ರಮಣ ಮಾಡುವುದು ಎಷ್ಟು ಸರಿ. ಕೈಗಾರಿಕೆಗಳಿಂದ ಜನಸಾಂದ್ರತೆ ಹೆಚ್ಚಾಗಿ ಜನರ ಜೀವನ ಕಷ್ಟವಾಗುತ್ತದೆ ಎಂದರು.
ಜಿಲ್ಲಾ ಕರ್ಯದರ್ಶಿ ಜಿಂಕೆಬಚ್ಚಹಳ್ಳಿ ಸತೀಶ್ ಮಾತನಾಡಿ, ಬಾಶೆಟ್ಟಿಹಳ್ಳಿಯಲ್ಲಿ ಅಪೇರೆಲ್ ಪಾರ್ಕ್ ಮೂರನೇ ಹಂತಕ್ಕೆ ವಶಪಡಿಸಿಕೊಂಡ ಜಮೀನಿನಲ್ಲಿ ಬಹಳಷ್ಟು ಇನ್ನೂ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ, ಆದರೆ ಸರ್ಕಾರ ಇದೀಗ ದೊಡ್ಡಬಳ್ಳಾಪುರದ ಸುತ್ತಮುತ್ತ ಕೈಗಾರಿಕೆಗಳಿಗೆ ಭೂಸ್ವಾಧೀನ ಮಾಡಿಕೊಳ್ಳುತ್ತಿದೆ. ದೊಡ್ಡಬಳ್ಳಾಪುರ ದಾಬಸ್ ಪೇಟೆ ನಡುವೆ ಸ್ಥಾಪನೆಯಾಗಲಿರುವ ಕೆ.ಎಚ್.ಐ.ಆರ್ ಸಿಟಿಗೆ 2 ಸಾವಿರ ಎಕರೆ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ಆದರೆ ಸ್ಥಳೀಯರಿಗೆ ಕೆಲಸ ಮಾತ್ರ ಸಿಗುವುದಿಲ್ಲ. ಕೈಗಾರಿಕೆಗಳಿಂದ ಕೊಳಗೇರಿ ಆರಂಭವಾಗಿ, ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಅಂತರ್ಜಲ ಕಲುಷಿತ ಗೊಳ್ಳಲಿದೆ. ಕೃಷಿ ಬದುಕನ್ನು ಅಸ್ಥಿರಗೊಳಿಸುವ ಇಂತಹ ಯೋಜನೆಗಳನ್ನು ನಾವು ವಿರೋಧಿಸಿ ಸೆ.೪ ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಈ ವೇಳೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲೂಕು ಘಟಕದ ಅಧ್ಯಕ್ಷ ಹನುಮೇಗೌಡ, ಕರ್ಯದರ್ಶಿ ಆರ್.ಎಸ್.ಸತೀಶ್, ಮುಖಂಡರಾದ ಶಿರವಾರ ರವಿ, ದೇವನಹಳ್ಳಿ ತಾ.ಕರ್ಯದರ್ಶಿ ರಮೇಶ್, ದೇವನಹಳ್ಳಿ ನಾರಾಯಣಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.
