ದೊಡ್ಡಬಳ್ಳಾಪುರ : ತಾಲೂಕಿನ ಪೆರುಮಗೊಂಡನಹಳ್ಳಿ ಗ್ರಾಮದ ಶ್ರೀ ದಿನ್ನೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ರಾಥೋತ್ಸವ ಕಾರ್ಯಕ್ರಮ ನಡೆಯಿತು.

ಹನುಮತ್ವ್ರತದ ಪ್ರಯುಕ್ತ ಇಂದು ದೇವಾಲಯದಲ್ಲಿ ವಿಶೇಷ ಫಲ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಅಲಂಕಾರ ಹಾಗೂ ಗ್ರಾಮಸ್ಥರಿಂದ ಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಯಿತು.
ಈ ಕುರಿತು ದೇವಾಲಯದ ಪ್ರಧಾನ ಅರ್ಚಕರಾದ ವಾಸುದೇವಾಚಾರ್ ಮಾತನಾಡಿ ಹನುಮತ್ವ್ರತದ ಸುಸಂದರ್ಭದಲ್ಲಿ ಲೋಕಕಲ್ಯಾಣಾರ್ಥವಾಗಿ ಭಕ್ತಾಧಿಗಳ ಸಂಕಷ್ಟ ಪರಿಹಾರಕ್ಕಾಗಿ ಪ್ರತ್ಯಂಗಿರ ಮಹಾಕಾಳಿ ಯಾಗ ಸೇರಿದಂತೆ ಹನುಮ ದೇವರಿಗೆ ವಿಶೇಷ ಪೂಜೆ, ಹೋಮ ಹವನ ನೆರವೇರಿಸಿದ್ದೇವೆ. ಉದ್ಭವ ದಿನ್ನೆ ಆಂಜನೇಯ ಸ್ವಾಮಿಗೆ ಸುಮಾರು 800 ವರ್ಷಗಳ ಇತಿಹಾಸವಿದ್ದು. ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಇಂದಿನ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಗಿದೆ. ಹನುಮತ್ವ್ರತದ ದಿವಸ ಕೈಗೊಳ್ಳುವ ಯಾವುದೇ ಸಂಕಲ್ಪ ನಿಸ್ಸಂದೇಹವಾಗಿ ನೆರವೇರುತ್ತದೆ ಎಂಬುದು ನಂಬಿಕೆ. ಹನುಮ ದೇವರು ರಾಮ ದೇವರನ್ನು ಭೇಟಿ ಮಾಡಿದ ದಿನವನ್ನು ಹನುಮತ್ವ್ರತ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.

ದೇವಾಲಯಕ್ಕೆ ಬಂದ ಭಕ್ತಾದಿಗಳು ಮಾತನಾಡಿ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿಗೆ ಸರಿಹೊಂದುವಂತೆ ಕಾಡಿನ ಭಾಗದಲ್ಲಿ ಇರುವ ದಿನ್ನೆ ಆಂಜನೇಯ ಸ್ವಾಮಿಯು ಭಕ್ತರ ಸಕಲ ಇಷ್ಟಾರ್ಥಗಳು ಈಡೇರಿಸುವ ಮೂಲಕ ಬಹಳ ಪ್ರಸಿದ್ಧಿ ಪಡೆದಿದೆ. ಕೇವಲ ನಮ್ಮ ಜಿಲ್ಲೆ, ರಾಜ್ಯ ವಷ್ಟೇ ಅಲ್ಲದೆ ಹೊರ ರಾಜ್ಯಗಳಿಂದಲೂ ಕೂಡ ಭಕ್ತಾದಿಗಳು ಇಲ್ಲಿಗೆ ಬಂದು ದೇವರಿಗೆ ಹರಕೆ ತೀರಿಸಿ ಹೋಗುವುದು ವಿಶೇಷ ಇಂದಿನ ಕಾರ್ಯಕ್ರಮ ವಿಶೇಷವಾಗಿದ್ದು ಸುಮಾರು 20ರಿಂದ 30 ದೇವರುಗಳ ವಿಗ್ರಹಗಳನ್ನು ಮೆರವಣಿಗೆ ಮಾಡಲಾಗಿದೆ ಜೊತೆಗೆ ಹನುಮ ದೇವರ ರಥೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಗಿದೆ ಎಂದರು.

