ನಿಮ್ಮ ವಿಶೇಷ ದಿನಗಳನ್ನು ನಿರಂತರ ಅನ್ನದಾಸೋಹ ಸಮಿತಿಯೋಟ್ಟಿಗೆ ಆಚರಿಸಿ – ಹೆಚ್. ರಾಜು

Spread the love

ದೊಡ್ಡಬಳ್ಳಾಪುರ : ತಮ್ಮ 30 ವರ್ಷದ ಹುಟ್ಟುಹಬ್ಬದವನ್ನು ನೂರಾರು ನಿರ್ಗತಿಕ ಕಡುಬಡವರಿಗೆ ವಯೋವೃದ್ದರಿಗೆ ಆಹಾರ ವಿತರಣೆ ಮಾಡುವ ಮೂಲಕ ದರ್ಗಾ ಜೋಗಿ ಹಳ್ಳಿಯ ನಿರಂತರ ಅನ್ನದಾಸೋಹ ಸಮಿತಿಯ ಸಹಯೋಗದೊಂದಿಗೆ ಎಚ್. ರಾಜು ಆಚರಿಸಿಕೊಂಡರು.

ಈ ವೇಳೆ ಮಾತನಾಡಿದ ಅವರು ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿ ಈ ರೀತಿ ಆಚರಿಸಿಕೊಂಡಿರುವುದು ಅತ್ಯಂತ ಸಂತೋಷ ತಂದಿದೆ . ಮುಂದೆ ನನ್ನ ಹಿತೈಷಿಗಳ ಸಂಬಂಧಿಕರ ಹಾಗೂ ಸ್ನೇಹಿತರ ಹುಟ್ಟುಹಬ್ಬವನ್ನು ನಿರಂತರ ಅನ್ನದಾಸೋಹ ಸಮಿತಿಯೊಟ್ಟಿಗೆ ಆಚರಿಸಲು ಬಯಸುತ್ತೇನೆ.

ಇಲ್ಲಿ ನಮ್ಮ ಹಣ ಪೋಲಾಗುವುದಿಲ್ಲ ಜೊತೆಗೆ ನಮ್ಮ ವಿಶೇಷ ದಿನವನ್ನು ನೂರಾರು ಹಸಿದ ಹೊಟ್ಟೆಗಳನ್ನು ತುಂಬಿಸುವ ಮೂಲಕ ಆಚರಿಸಿಕೊಳ್ಳುವುದು ವಿಶೇಷವೆನಿಸುತ್ತದೆ. ಅಲ್ಲದೇ ನಮ್ಮ ಸಂಭ್ರಮ ಕೇವಲ ಸಂಬ್ರಮವಾಗಿ ಉಳಿಯದೆ ಸಮಾಜಕ್ಕೆ ನಮ್ಮ ಕೈಲಾದ ಸೇವೆಯನ್ನು ಅನ್ನದಾಸೋಹ ಮಾಡುವ ಮೂಲಕ ನೀಡುವಂತಾಗುತ್ತದೆ ಎಂದರು.

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಪ್ರಚಾರ ಸಂಸ್ಥೆಯ ರಾಜ್ಯಧ್ಯಕ್ಷ ಎಚ್ ರಾಘವೇಂದ್ರ ಮಾತನಾಡಿ ನಾವು ನಮ್ಮ ಕುಟುಂಬದ ಹಾಗೂ ಆಪ್ತ ಬಳಗದ ಎಲ್ಲ ವಿಶೇಷ ದಿನಗಳನ್ನು ಮಲ್ಲೇಶ್ ಮತ್ತು ತಂಡ ಕಳೆದ ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಅನ್ನ ದಾಸೋಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಆಚರಿಸಿಕೊಳ್ಳುವುದು ವಿಶೇಷ ಅಂತೆಯೇ ಇಂದು ನಮ್ಮ ತಮ್ಮ ಎಚ್ ರಾಜುರವರ ಹುಟ್ಟುಹಬ್ಬವನ್ನು ಅನ್ನದಾಸೋಹ ನಡೆಸುವ ಮೂಲಕ ಆಚರಿಸಿಕೊಂಡಿರುವುದು ಸಂತಸ ತಂದಿದೆ ಎಂದರು.

 

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಪ್ರಚಾರ ಸಂಸ್ಥೆಯ ಜಿಲ್ಲಾಧ್ಯಕ್ಷ ಎಚ್ ಶಿವಕುಮಾರ್ ಮಾತನಾಡಿ ಪ್ರತಿ ಬಾರಿ ನಾವು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗಲೂ ಮನಸ್ಸಿಗೆ ಉಲ್ಲಾಸ ಮತ್ತು ಸಂತೋಷ ಸಿಗುತ್ತದೆ ನಮ್ಮ ಸೇವೆಯಿಂದ ನೂರಾರು ಕುಟುಂಬಗಳು ಹಸಿವನ್ನು ನೀಗಿಸಿಕೊಳ್ಳುತ್ತವೆ ಇಂತಹ ಉತ್ತಮ ಅವಕಾಶವನ್ನು ಕಲ್ಪಿಸಿದ ಮಲ್ಲೇಶ್ ಮತ್ತು ತಂಡಕ್ಕೆ ಶುಭವಾಗಲಿ. ಮುಂದಿನ ದಿನಗಳಲ್ಲಿ ನಮ್ಮ ಪ್ರಚಾರ ಸಂಸ್ಥೆಯ ವತಿಯಿಂದ ನಿರಂತರ ಅನ್ನದಾಸೋಹ ಸಮಿತಿಗೆ ವಿಶೇಷ ನೆರವು ಕಲ್ಪಿಸಲಾಗುವುದು ಎಂದರು.

ಸ್ಥಳೀಯ ಮುಖಂಡರಾದ ಎಚ್. ಮಂಜುನಾಥ್ ಮಾತನಾಡಿ ಕೋವಿಡ್ ಸಮಯದಲ್ಲಿ ಜನರ ಹಸಿವನ್ನು ನೀಗಿಸಲು ಪ್ರಾರಂಭಗೊಂಡ ಈ ನಿರಂತರ ಅನ್ನದಾಸೋಹ ಸಮಿತಿಯು ಇಂದಿಗೆ 2081ನೇ ದಿನಕ್ಕೆ ಕಾಲಿಟ್ಟಿದ್ದು, ಮಲ್ಲೇಶ್ ಮತ್ತು ತಂಡ ನಿರಂತರ ದಾನಿಗಳ ಸಂಪರ್ಕದಿಂದಾಗಿ ಯಾವುದೇ ಅಡೆತಡೆಗಳಿಲ್ಲದೆ ಈ ಅನ್ನದಾಸೋಹ ಕಾರ್ಯಕ್ರಮವನ್ನು ಸದಾ ನೆಡೆಸಿಕೊಂಡು ಬರುತ್ತಿದೆ ಮಲ್ಲೇಶ್ ರವರ ಈ ಕಾರ್ಯಕ್ಕೆ ನಾವು ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು.

ಕಾರ್ಯಕ್ರಮದ ಆಯೋಜಕ ಮಲ್ಲೇಶ್ ಮಾತನಾಡಿ ದಿನೇ ದಿನೇ ನಮ್ಮಲ್ಲಿ ಆಹಾರ ಬಯಸಿ ಬರುವ ಸಾರ್ವಜನಿಕರ ಸಂಖ್ಯೆ ಹೆಚ್ಚಾಗುತ್ತಿದ್ದು ನಮಗೆ ದಾನಿಗಳ ನೆರವಿನ ಅವಶ್ಯಕತೆ ಇದೆ. ನೀಡಲು ಇಚ್ಛೆ ಇರುವಂತಹ ವ್ಯಕ್ತಿಗಳು ತಮ್ಮ ವಿಶೇಷ ದಿನಗಳನ್ನು ನಮ್ಮ ಸಮಿತಿಯೊಟ್ಟಿಗೆ ಆಚರಿಸುವ ಮೂಲಕ ನೂರಾರು ಜನರ ಹಸಿವು ನೀಗಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.

Leave a Reply

Your email address will not be published. Required fields are marked *

© 2026 Malnad TV. All Rights Reserved.