ಕೆಳಗಿನ ಜೂಗಾನಹಳ್ಳಿ- ಗುಂಜೂರು ರಸ್ತೆ ಸಂಪರ್ಕ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ

ತೂಬಗೆರೆ : ಕೆಳಗಿನ ಜೂಗಾನಹಳ್ಳಿ ಹಾಗೂ ಗುಂಜೂರು ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣ ಕಾಮಗಾರಿ ವರ್ಷದೊಳಗೆ ಪೂರ್ಣಗೊಂಡು ಗ್ರಾಮಸ್ಥರ ಓಡಾಟಕ್ಕೆ ಅನುಕೂಲವಾಗಲಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರು ಹೇಳಿದರು.

 

ದೊಡ್ಡಬಳ್ಳಾಪುರ ತಾಲ್ಲೂಕಿನ ಕೆಳಗಿನ ಜೂಗಾನಹಳ್ಳಿ ಮತ್ತು ಗುಂಜೂರು ಗ್ರಾಮದ ಮಧ್ಯೆ ರಸ್ತೆ ಸಂಪರ್ಕಿಸಲು ಸಣ್ಣ ನೀರಾವರಿ ಇಲಾಖೆ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಸೇತುವೆ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು. ಕೆಳಗಿನ ಜೂಗಾನಹಳ್ಳಿ-ಗುಂಜೂರು ಗ್ರಾಮಸ್ಥರ ಬಹು ದಿನಗಳ ಬೇಡಿಕೆ ಈಡೇರುತ್ತಿದ್ದು, 5 ಕೋಟಿ ರೂ. ವೆಚ್ಚದಲ್ಲಿ 60 ಮೀಟರ್ ಉದ್ದದ ಸೇತುವೆ ನಿರ್ಮಾಣದಿಂದ ಜನರು 7 ಕಿ.ಮೀ ದೂರ ಕ್ರಮಿಸುವುದು ಕಡಿಮೆ ಮಾಡುತ್ತದೆ. ಜತೆಗೆ ಎರಡು ಗ್ರಾಮದ ರೈತರು ಹಾಗೂ ಜನರು ವ್ಯಾಪಾರ ವಹಿವಾಟುಗಳ ಸಂಚಾರಕ್ಕೆ ಬಹಳಷ್ಟು ಅನುಕೂಲವಾಗುತ್ತದೆ ಎಂದರು.

 

ತೂಬಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ ಸಿದ್ದಪ್ಪ ಮಾತನಾಡಿ ಈ ಕಾಮಗಾರಿಯು ಸ್ಥಳೀಯ ರೈತರಿಗೆ ಅತ್ಯಂತ ಸಹಕಾರಿಯಾಗಲಿದೆ . ಈ ಮೊದಲು ಹೈವೇ ತಲುಪಬೇಕಾದರೆ ಮಾಕಳಿ ಮೂಲಕ ತಲುಪಬೇಕಿತ್ತು ಆದರೆ ಮೇಲ್ಸೇತುವೆ ನಿರ್ಮಾಣಗೊಂಡ ನಂತರ ಗ್ರಾಮಗಳ ರೈತರು ಶೀಘ್ರವಾಗಿ ಹೆದ್ದಾರಿಯನ್ನು ತಲುಪಬಹುದಾಗಿದೆ.

ಈ ಸಂಪರ್ಕ ಸೇತುವೆಯು ಎಸ್ ಎಸ್ ಘಾಟಿ, ಕೆಳಗಿನಜೂಗನಹಳ್ಳಿ, ಮೇಲಿನಜೂಗನಹಳ್ಳಿ, ಬಂಡೆಹೊಸೂರು, ಲಘುಮೇನಹಳ್ಳಿ, ಪಲ್ಪಲ್ ದಿನ್ನೆ ,ಗೆದ್ದಲ ಪಾಳ್ಯ ತೂಬಗೆರೆ, ಗುಂಜೂರು ಗ್ರಾಮಗಳಿಗೆ ಹೆದ್ದಾರಿ ತಲುಪಲು ಸಹಕರಿಯಾಗಲಿದೆ ಎಂದರು.

 

 

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಬಿ.ರಾಜಣ್ಣ, ಘಾಟಿ ಪ್ರಾಧಿಕಾರದ ಅಧ್ಯಕ್ಷ ರಂಗಪ್ಪ, ತೂಬಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರವಿ ಸಿದ್ದಪ್ಪ, ಘಾಟಿ ಗ್ರಾ.ಪಂ ಅಧ್ಯಕ್ಷರಾದ ಉಮಾಬಾಯಿ, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ದುರ್ಗಶ್ರೀ, ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮಂಜುನಾಥ ಎನ್.ಎಸ್, ಸಹಾಯಕ ಅಭಿಯಂತರರಾದ ವಿಕಾಸ. ಎನ್ ಸೇರಿ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *