*ಕೇಂದ್ರ ಸರ್ಕಾರದಿಂದ 3,454 ಕೋಟಿ ಬರಪರಿಹಾರ ಬಿಡುಗಡೆ : ಬರಪರಿಹಾರ ಪಡೆಯಲು ರಾಜ್ಯಸರ್ಕಾರದ ಪ್ರಯತ್ನಗಳ ಮಾಹಿತಿ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ*

Spread the love

ಕರ್ನಾಟಕ ಏಪ್ರಿಲ್ 27 ( ವಿಜಯಮಿತ್ರ ) : ಕೇಂದ್ರ ಸರ್ಕಾರ ಕರ್ನಾಟಕ ಸರ್ಕಾರಕ್ಕೆ ಬರ ಪರಿಹಾರ ನೀಡಿದ್ದು ಈ ಹಿನ್ನಲೆ ರಾಜ್ಯ ಸರ್ಕಾರ ಬರ ಪರಿಹಾರ ಪಡೆಯಲು ನೆಡೆಸಿದ ಪ್ರಯತ್ನಗಳ ವಿವರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಂಚಿಕೊಂಡಿದ್ದಾರೆ.

 

ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು ಸುಮಾರು 7 ತಿಂಗಳ ಕಾಲ ಬರ ಪರಿಹಾರಕ್ಕಾಗಿ ಕಾದು ಕಾದು ಅನಿವಾರ್ಯವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸನ್ನಿವೇಶವನ್ನು ಸೃಷ್ಟಿಸಿದ್ದು ಕೇಂದ್ರ ಬಿಜೆಪಿ ಸರ್ಕಾರವೇ. ಕರ್ನಾಟಕದ ರೈತರ ಸಂಕಷ್ಟವನ್ನು, ಕೇಂದ್ರದ ರಾಜಕೀಯ ದುರುದ್ದೇಶವನ್ನು ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟ ನಂತರ ಮೋದಿ ಸರ್ಕಾರಕ್ಕೆ ಕೋರ್ಟ್ ಚಾಟಿಬೀಸಿತ್ತು. ಇದರಿಂದ ಬೇರೆ ದಾರಿಯಿಲ್ಲದೆ ಒಂದು ವಾರದ ಗಡುವು ಪಡೆದು ಕೇಂದ್ರ ಈಗ 3,454 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಎನ್.ಡಿ.ಆರ್.ಎಫ್ ನಿಯಮದಂತೆ ನಾವು ಕೇಳಿದ್ದು ರೂ. 18,171 ಕೋಟಿ. ಈಗ ಬಿಡುಗಡೆ ಆಗಿರುವ ಹಣ ನಾವು ಕೇಳಿದ ಪರಿಹಾರದಲ್ಲಿ ನಾಲ್ಕನೇ ಒಂದು ಭಾಗಕ್ಕೂ ಕಡಿಮೆ.

 

ನಾಡಿನ ರೈತರ ಆಕ್ರೋಶ, ನಮ್ಮ ಹೋರಾಟ ಮತ್ತು ನಾಡಿನ ರೈತರ ಮೇಲೆ ಸುಪ್ರೀಂ ಕೋರ್ಟ್‌ಗೆ ಇರುವ ಕಾಳಜಿಯ ಫಲವಾಗಿ ಬಿಡುಗಡೆಯಾದ ಈ ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ ಎಂದು ಬಿಂಬಿಸುತ್ತಿರುವ ಕರ್ನಾಟಕ ಬಿಜೆಪಿ ಪಕ್ಷಕ್ಕೆ ನಾಚಿಕೆಯಾಗಬೇಕು.

ನರೇಂದ್ರಮೋದಿ ಅವರಿಗೆ ನಿಜವಾಗಿ ಕರ್ನಾಟಕದ ಬಗೆಗೆ ಕಾಳಜಿಯಿದ್ದರೆ ತೆರಿಗೆ ಹಂಚಿಕೆಯಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸಲಿ, 15ನೇ ಹಣಕಾಸು ಆಯೋಗ ಶಿಫಾರಸ್ಸು ಮಾಡಿರುವ ವಿಶೇಷ ಅನುದಾನ, ಕೆರೆಗಳ ಸಂರಕ್ಷಣೆ ಮತ್ತು ಪೆರಿಫರಲ್ ರಿಂಗ್ ರೋಡ್ ಗೆ ಶಿಫಾರಸ್ಸಾದ ಅನುದಾನ, ಭದ್ರಾ ಮೇಲ್ದಂಡೆಗೆ ಬಜೆಟ್‌ನಲ್ಲಿ ಘೋಷಿಸಿದ ಅನುದಾನ ನೀಡಲಿ ಎಂದಿದ್ದಾರೆ.

 

*ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಕಳೆದ ಸೆಪ್ಟೆಂಬರ್ ತಿಂಗಳಿನಿಂದ ಏನು ಮಾಡಿದೆ, ಕೇಂದ್ರ ಸರ್ಕಾರ ಹೇಗೆ ಸ್ಪಂದಿಸಿದೆ ಎಂಬ ಪೂರ್ಣ ವಿವರ ಇಲ್ಲಿದೆ..*

 

ಸೆಪ್ಟೆಂಬರ್ 13, 2023:

ರಾಜ್ಯದ 195 ತಾಲೂಕುಗಳಲ್ಲಿ ಬರ; 30,432 ಕೋಟಿ ರೂ. ನಷ್ಟ, ರಾಜ್ಯ ಸರ್ಕಾರದ ಘೋಷಣೆ

 

ಸೆಪ್ಟೆಂಬರ್ 22, 2023:

ಬರ ಪರಿಸ್ಥಿತಿಯ ಸಮಗ್ರ ವರದಿ ಸಹಿತ ನೆರವು ಕೋರಿಕೆಯ ಮನವಿ ಪತ್ರ ಹಾಗೂ ಜತೆಗೆ ಹಸಿರು ಬರದ ಚಿತ್ರಣವನ್ನೂ ಸಲ್ಲಿಸಲು ರಾಜ್ಯ ಸರಕಾರ ಸಿದ್ಧತೆ

 

ಸೆಪ್ಟೆಂಬರ್ 23, 2023:

ಬರ ಪರಿಸ್ಥಿತಿ ಇರುವುದರಿಂದ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಅಡಿ ಕುಡಿಯುವ ನೀರು ಪೂರೈಕೆಗೆ 4,860 ಕೋಟಿ ರೂ ನೆರವಿಗೆ ಮೊದಲ ಮನವಿ.

 

ಅಕ್ಟೋಬರ್ 5, 2023:

ಕೇಂದ್ರ ತಂಡದಿಂದ ನಾಲ್ಕು ದಿನಗಳ ಬರ ಅಧ್ಯಯನ. ಬಾಗಕಲೋಟೆ, ಚಿತ್ರದುರ್ಗ, ದಾವಣಗೆರೆ, ವಿಜಯನಗರ ಜಿಲ್ಲೆಗಳಲ್ಲಿ ಪ್ರವಾಸ.

 

ಅಕ್ಟೋಬರ್ 25, 2023:

ರೈತರಿಗೆ ಪರಿಹಾರ ನೀಡಲು 17,901.73 ಕೋಟಿ ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ.

 

ನವೆಂಬರ್ 15, 2023:

ಬರಪರಿಹಾರ ಬಿಡುಗಡೆ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ನನ್ನಿಂದ ಮನವಿ ಪತ್ರ.

 

ನವೆಂಬರ್ 20, 2023:

ರಾಜ್ಯ ಕೃಷಿ ಸಚಿವರಿಂದ, ಗೃಹ ಸಚಿವರ ನೇತೃತ್ವದ ಉನ್ನತ ಸಮಿತಿಯ ಮುಂದಿಡಲು ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಉಪ ಸಮಿತಿಯ ಶಿಫಾರಸುಗಳನ್ನು ಒಳಗೊಂಡ ಪ್ರಸ್ತಾವನೆ ರವಾನೆ.

 

ಡಿಸೆಂಬರ್ 19, 2023:

ನಾನು ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ, ಬರ ಪರಿಹಾರ ಬಿಡುಗಡೆಗೆ ಮನವಿ ಮಾಡಿದೆವು.

 

ಡಿಸೆಂಬರ್ 20, 2023:

ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ, ಬರ ಪರಿಹಾರ ಬಿಡುಗಡೆಗೆ ಮನವಿ ಮಾಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ ಮತ್ತು ನಾನು.

 

ಮಾರ್ಚ್ 24, 2024:

ವಿಳಂಬ ವಿರೋಧಿಸಿ ಬರಪರಿಹಾರ ಬಿಡುಗಡೆಗೆ ಕೇಂದ್ರ ಸರ್ಕಾರಕ್ಕೆ ಸೂಚಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಜ್ಯ ಸರ್ಕಾರ

 

ಏಪ್ರಿಲ್ 2, 2024:

ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ಬರ ಪರಿಹಾರ ಕೇಳುವಲ್ಲಿ ಕರ್ನಾಟಕದಿಂದ ವಿಳಂಬ ಎಂಬ ಸುಳ್ಳುಹೇಳಿಕೆ.

 

ಏಪ್ರಿಲ್‌ 6, 2024:

ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ ವಿಳಂಬವಾಗಲು ಕಾರಣ ಕೇಂದ್ರ ಸರ್ಕಾರವಲ್ಲ. ಉನ್ನತಾಧಿಕಾರಿ ಸಭೆ ನಡೆಸಲು ಚುನಾವಣಾ ಆಯೋಗ ಅನುಮತಿ ನೀಡದಿರುವುದು ಎಂದು ಹೇಳಿ ಜಾರಿಕೊಂಡ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌

 

ಏಪ್ರಿಲ್ 8, 2024:

ಎರಡು ವಾರಗಳಲ್ಲಿ ಪ್ರತಿಕ್ರಿಯಿಸುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ. ನೋಟೀಸ್‌ ನೀಡದಿರುವಂತೆ ಮನವಿ ಮಾಡಿದ್ದ ಸರ್ಕಾರ ಪರ ವಕೀಲ ತುಷಾರ್ ಮೆಹ್ತಾ.

 

ಏಪ್ರಿಲ್ 22, 2024:

ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ ಮಾಡಲು ಚುನಾವಣಾ ಆಯೋಗದ ಒಪ್ಪಿಗೆ. ಅಗತ್ಯ ಕ್ರಮಗಳನ್ನು ಶೀಘ್ರವೇ ತೆಗೆದುಕೊಳ್ಳುವುದಾಗಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ ಸರ್ಕಾರ.

 

ಏಪ್ರಿಲ್ 27, 2024:

ಕೇಂದ್ರ ಸರ್ಕಾರದಿಂದ ರೂ. 3498.98 ಕೋಟಿ ಬರಪರಿಹಾರಕ್ಕೆ ಅನುಮೋದನೆ, ರೂ. 3,454 ಕೋಟಿ ಬಿಡುಗಡೆ

Leave a Reply

Your email address will not be published. Required fields are marked *

© 2026 Malnad TV. All Rights Reserved.