ಕಿತ್ತೂರು ರಾಣಿ ಚೆನ್ನಮ್ಮ  ತಮ್ಮ‌  ವ್ಯಕ್ತಿತ್ವದಿಂದಲೇ  ಎಲ್ಲರಿಗೂ ಪ್ರೇರಣೆಯಾಗಿದ್ದಾರೆ – ಪ್ರೊ.ಕೆ.ಆರ್.ರವಿಕಿರಣ್

Spread the love

ದೊಡ್ಡಬಳ್ಳಾಪುರ : ಭಾರತೀಯ ಮಹಿಳೆಯರು  ಹಿಂದಿನಿಂದಲೂ   ಸಾಧಕರ ಸಾಲಿನಲ್ಲಿ  ತಮ್ಮದೇ  ಹೆಜ್ಜೆ ಗುರುತು ಉಳಿಸಿದ್ದಾರೆ.  ಇಂದಿಗೂ ಸಹ  ಬಾಹ್ಯಾಕಾಶಯಾನದಲ್ಲಿ  ಸಾಧನೆ ಮಾಡಿರುವ  ಕಲ್ಪನಾ ಚಾವ್ಲಾ, ಸುನೀತಾ ವಿಲಿಯಂ   ಇಬ್ಬರೂ ಭಾರತೀಯ ಮಹಿಳೆಯರೇ ಆಗಿದ್ದಾರೆ.  ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಕೊಡುಗೆ ಅಪಾರವಾಗಿದೆ ಎಂದುಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್ ತಿಳಿಸಿದರು.

 

ಅವರು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ  ಬಾಲಕಿಯರ ವಿದ್ಯಾರ್ಥಿನಿಲಯಲ್ಲಿ ನಡೆದ ಕಿತ್ತೂರು ರಾಣಿ ಚೆನ್ನಮ್ಮ  ವಿಜಯದಿನ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ಬದುಕಿನಲ್ಲಿ ಎದುರಾಗುವ ಎಂತಹ ಪರಿಸ್ಥಿತಿಯಲ್ಲೂ  ಅಸಹಾಯಕರಾಗದೆ, ಧೈರ್ಯವಾಗಿ ಹೋರಾಡಬೇಕು ಎಂಬುದಕ್ಕೆ  ಕಿತ್ತೂರು ರಾಣಿ ಚೆನ್ನಮ್ಮ  ಒಂದು ಮಾದರಿಯಾಗಿದ್ದಾರೆ. ಸಾಹಸಭರಿತ, ಧೈರ್ಯವಂತ, ಸಾವಿಗೆ ಅಂಜದ, ದೇಶಪ್ರೇಮದ ಮಹೋನ್ನತ ಹೆಜ್ಜೆಯಾಗಿದ್ದಾರೆ ಎಂದರು.

 

ಕಿತ್ತೂರು ರಾಣಿ ಚೆನ್ನಮ್ಮ   ಬ್ರಿಟಿಷರ ವಿರುದ್ದ   ನಡೆಸಿದ ಹೋರಾಟದಲ್ಲಿ  ವಿಜಯಗಳಿಸಿ 200  ವರ್ಷ  ಪೂರೈಸಿದೆ. ಬ್ರಿಟಿಷರ ವಿರುದ್ದ  ಮೊದಲ ಮಹಿಳಾ  ಹೋರಾಟಗಾರ್ತಿಗೆ  1824 ರಲ್ಲಿ  ದೊರೆತ ವಿಜಯವು ಆಗಿದೆ ಎಂದು‌ ತೂಬಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕಿ ಟಿ.ಎಸ್. ಸರಸ್ವತಿ ತಿಳಿಸಿದರು.

 

 

1857 ರಲ್ಲಿ ನಡೆದ ಸಿಪಾಯಿ ದಂಗೆಗೂ  ಮೊದಲೇ 1824 ರಲ್ಲಿ  ಬ್ರಿಟಿಷರ ವಿರುದ್ದ  ಹೋರಾಟ ನಡೆಸಿ ಗೆಲುವು ಸಾಧಿಸಿದ  ಕಿತ್ತೂರು ರಾಣಿ ಚೆನ್ನಮ್ಮನ ಧೀರತ್ವ ಮತ್ತು ದೇಶಪ್ರೇಮ,  ದಕ್ಷ ಆಡಳಿತ ವಿಧಾನ ಎಲ್ಲರಿಗೂ ಆದರ್ಶಪ್ರಾಯ ಎಂದರು.

 

ಕಿತ್ತೂರು ಸಂಸ್ಥಾನದ  ದೇಸಾಯಿ ಧೂಳಪ್ಪ ದೇಸಾಯಿ‌ ಮಗಳಾದ   ಚೆನ್ನಮ್ಮ ಎಳೆ ವಯಸ್ಸಿನಲ್ಲಿಯೆ ಕುದುರೆ ಸವಾರಿ ಹಾಗು ಬಿಲ್ಲುವಿದ್ಯೆಗಳನ್ನು ಕರಗತ ಮಾಡಿಕೊಂಡಿದ್ದಳು. ಚೆನ್ನಮ್ಮ ಅನಿವಾರ್ಯವಾಗಿ ಕಿತ್ತೂರು  ‌ಸಂಸ್ಥಾನದ  ಮುಖ್ಯ ಸ್ಥಾನದಲ್ಲಿ ಜವಾಬ್ದಾರಿ ನಿರ್ವಹಿಸಬೇಕಾದಗುತ್ತದೆ. ಅದನ್ನು ಚೆನ್ನಮ್ಮ  ಧೈರ್ಯವಾಗಿ ಎದುರಿಸಿದ ರೀತಿ ಭಾರತದ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದೆ. ಕಿತ್ತೂರು ರಾಣಿ ಚೆನ್ನಮ್ಮ   ಬ್ರಿಟಿಷರಿಗೆ  ತೆರಿಗೆ ಕೊಡುವುದಿಲ್ಲ ಎಂದು ಹೇಳುವ ಮೂಲಕ ನಮಗೆ ಸ್ವಾಭಿಮಾನ ಪ್ರದರ್ಶನ ಮಾಡಿದರು.

 

ಕಿತ್ತೂರು ರಾಣಿ ಚೆನ್ನಮ್ಮನ ಶೌರ್ಯ ದೇಶದ ಮಹಿಳೆಯರಿಗೆ ಸ್ಪೂರ್ತಿಯಾಗಿದೆ. ಹೆಣ್ಣಿನ ಧೈರ್ಯ, ಸಾಹಸ,  ಮಾನಸಿಕ ಮತ್ತು ದೈಹಿಕ ಹೋರಾಟ, ಆಡಳಿತ, ಸ್ವಾಭಿಮಾನ ಮತ್ತು   ಸ್ವಾವಲಂಬನೆ‌ ಮುಂತಾದ ವಿಚಾರಗಳು ಬಂದಾಗ  ಕಿತ್ತೂರು ರಾಣಿ ಚೆನ್ನಮ್ಮ ಅವರ   ನೆನಪು  ಬರುತ್ತದೆ. ‌ ಬ್ರಿಟಿಷರ ಬಲಿಷ್ಠವಾದ ಸೈನ್ಯದ  ವಿರುದ್ದ  ರಾಣಿ ಚೆನ್ನಮ್ಮ  ತನ್ನ ಸಣ್ಣ ಸೈನ್ಯದೊಂದಿಗೆ ಕೆಚ್ಚೆದೆಯ ಧೈರ್ಯ ಮತ್ತು ಸಾಹಸದಿಂದ ಹೋರಾಡಿದರು. ಆಗ ಆಕೆಗೆ ಅಷ್ಟೇ ಸಮರ್ಥವಾಗಿ, ಅತ್ಯಂತ ನಿಷ್ಠೆಯಿಂದ, ಪ್ರಾಮಾಣಿಕತೆಯಿಂದ, ಕೆಚ್ಚೆದೆಯ ಧೈರ್ಯದಿಂದ ಬೆನ್ನೆಲುಬಾಗಿ ನಿಂತು ಹೋರಾಡಿದ್ದು ಸಂಗೊಳ್ಳಿ ರಾಯಣ್ಣ‌ ಎಂದರು.

ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ  ಬಾಲಕಿಯರ ವಿದ್ಯಾರ್ಥಿನಿಲಯದ ಮೇಲ್ವಿಚಾರಕಿ ರಾಧಮಣಿ,  ಶಿಕ್ಷಣ ಇಲಾಖೆ ‌ಕ್ಷೇತ್ರ  ಸಂಪನ್ಮೂಲ ವ್ಯಕ್ತಿ ಬಿ.ಆರ್. ಗಂಗಾಧರ್,ದೊಡ್ಡಬಳ್ಳಾಪುರ ತಾಲ್ಲೂಕು   ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ‌‌ ಪಿ.ಗೋವಿಂದರಾಜು, ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾಮಹಾದೇವ್, ಕೋಶಾಧ್ಯಕ್ಷ ಜಿ.ಸುರೇಶ್, ಕನ್ನಡಪರ ಹೋರಾಟಗಾರರಾದ ಗುರುರಾಜಪ್ಪ, ಚೌಡರಾಜು, ಹರೀಶ್, ನವೋದಯ ವಿದ್ಯಾಲಯ ನಿವೃತ್ತ ಅಧ್ಯಾಪಕ ವಿ.ಎಸ್.ಹೆಗಡೆ,  ಭಾರತ್ ಸ್ಕೌಟ್ಸ್ ಮತ್ತು ಗೈಡ್ ಸಹಾಯಕ ಆಯುಕ್ತ  ವೆಂಕಟರಾಜು,  ಕಲಾವಿದರುಗಳಾದ ದರ್ಗಾಜೋಗಿಹಳ್ಳಿ, ಕುಮಾರ್,  ಎಂ.ರಾಮಕೃಷ್ಣ, ಶೋಭಾ, ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

© 2026 Malnad TV. All Rights Reserved.