ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ವಿದ್ಯಾ ಸಂಸ್ಥೆಯಿಂದ ಕಂದಾಯ ಇಲಾಖೆಗೆ ತಾಂತ್ರಿಕ ಪರಿಕರಗಳ ಕೊಡುಗೆ

Spread the love

ದೊಡ್ಡಬಳ್ಳಾಪುರ : ಸುಮಾರು ₹4.5 ಲಕ್ಷ ವೆಚ್ಚದ ಕಂಪ್ಯೂಟರ್‌ಗಳು ಹಾಗೂ ಪ್ರಿಂಟರ್‌ಗಳನ್ನು ಶ್ರೀ ದೇವರಾಜ ಅರಸ್‌ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ.ರಾಜೇಂದ್ರ ಅವರು ತಹಶೀಲ್ದಾರ್‌ ವಿಭಾವಿದ್ಯಾ ರಾಥೋಡ್‌ ಅವರಿಗೆ ಹಸ್ತಾಂತರಿಸಿದರು.

 

 

ತಾಲ್ಲೂಕಿನ ಶ್ರೀ ದೇವರಾಜ ಅರಸ್‌ ಎಜುಕೇಶನಲ್‌ ಟ್ರಸ್ಟ್‌ನ ವತಿಯಿಂದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಮುತ್ಸದ್ದಿ ರಾಜಕಾರಣಿ ದಿವಂಗತ ಆರ್.ಎಲ್.ಜಾಲಪ್ಪ ಅವರ 99ನೇ ಜನ್ಮದಿನಾಚರಣೆ ಅಂಗವಾಗಿ ಸೇವಾ ಕಾರ್ಯದ ಭಾಗವಾಗಿ ತಾಲೂಕಿನ ಕಂದಾಯ ಇಲಾಖೆಗೆ ತಾಂತ್ರಿಕ ಪರಿಕರಗಳ ವಿತರಣೆ ಕಾರ್ಯಕ್ರಮ ಗುರುವಾರ ಸಂಜೆ ನಡೆಯಿತು.

 

 

ಈ ವೇಳೆ ಮಾತನಾಡಿದ ಅವರು, ಜಾಲಪ್ಪ ಅವರ ಸಾಮಾಜಿಕ ಕಾಳಜಿ ಮತ್ತು ದೂರದೃಷ್ಟಿಯ ಆಲೋಚನೆಗಳಿಗೆ ಪೂರಕವಾಗಿ ದೇವರಾಜ ಅರಸ್‌ ಶಿಕ್ಷಣ ಸಂಸ್ಥೆ ಶೈಕ್ಷಣಿಕವಾಗಿ ಮಾತ್ರವಲ್ಲದೆ, ಜನಪರ ಆಲೋಚನೆಯನ್ನೂ ಅನುಷ್ಠಾನದ ಭಾಗವಾಗಿಸಿಕೊಂಡಿದೆ. ಅಧಿಕಾರಿಗಳ ಬೇಡಿಕೆಗೆ ಅನುಗುಣವಾಗಿ ಸಂಸ್ಥೆಯಿಂದ ಅಗತ್ಯ ನೆರವನ್ನು ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕು ಕಚೇರಿ ಆವರಣದಲ್ಲಿ ಕಚೇರಿ ಪಾಳ್ಯಕ್ಕೆ ಹೊಂದಿಕೊಂಡಂತೆ ಇರುವ ಸಾರ್ವಜನಿಕ ಶೌಚಾಲಯವನ್ನು ಪುನಶ್ಚೇತನಗೊಳಿಸಿ ಹೈಟೆಕ್‌ ಶೌಚಾಲಯವಾಗಿ ಅಭಿವೃದ್ದಿ ಪಡಿಸಲು ನಮ್ಮ ಶಿಕ್ಷಣ ಸಂಸ್ಥೆಯಿಂದ ತೀರ್ಮಾನಿಸಲಾಗಿದ್ದು, ಶೀಘ್ರ ಕೆಲಸ ಆರಂಭಿಸಲಾಗುವುದು ಎಂದು ತಿಳಿಸಿದರು.

 

ತಹಶೀಲ್ದಾರ್‌ ವಿಭಾ ವಿದ್ಯಾರಾಥೋಡ್ ಮಾತನಾಡಿ, ತಾಂತ್ರಿಕ ಪರಿಕಗಳನ್ನು ಒದಗಿಸಿಕೊಡುವ ಮೂಲಕ ನೆರವು ಒದಗಿಸಿರುವುದು ಅಭಿನಂದನೀಯ. ಶೌಚಾಲಯ ಪುನರ್‌ನಿರ್ಮಾಣಕ್ಕೆ ಸಹಕಾರಿಸುವುದಾಗಿ ಭರವಸೆ ನೀಡಿರುವ ದೇವರಾಜ ಅರಸ್‌ ಶಿಕ್ಷಣ ಸಂಸ್ಥೆಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

 

ಆರ್‌ಎಲ್‌ಜೆಐಟಿ ಪ್ರಾಂಶುಪಾಲ ಡಾ.ವಿಜಯ್‌ಕಾರ್ತಿಕ್, ಮಾನವ ಸಂಪನ್ಮೂಲ ನಿರ್ದೇಶಕ ಬಾಬುರೆಡ್ಡಿ, ಲಯನ್ಸ್‌ ಕ್ಲಬ್‌ ಆಫ್‌ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ನ ಉಪಾಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್, ಕಾರ್ಯದರ್ಶಿ ಕೆ.ಸಿ.ನಾಗರಾಜ್, ಕಂದಾಯ ಅಧಿಕಾರಿ ನರಸಿಂಹಯ್ಯ, ಸಿಬ್ಬಂದಿ ನರಸಿಂಹಮೂರ್ತಿ, ಕಾಲೇಜಿನ ತಾಂತ್ರಿಕ ವಿಭಾಗದ ಮಂಜುಳಾ, ಗಿರಿಭೂಷಣ್, ಮುಖೇಶ್, ರಮೇಶ್, ಮುಖಂಡ ಮುತ್ತಣ್ಣ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

© 2026 Malnad TV. All Rights Reserved.