
ದೊಡ್ಡಬಳ್ಳಾಪುರ : ನಗರದ ಗಾಂಧಿ ವೃತ್ತದ ಬಳಿ ಇರುವ ಗುರುತ್ವ ಅಕಾಡೆಮಿಯಲ್ಲಿ ತರಬೇತಿ ಪಡೆದು ಸೈನಿಕ್ ಮತ್ತು ಜವಾಹರ ನವೋದಯ ವಿದ್ಯಾಸಂಸ್ಥೆಗಳಿಗೆ 4 ಪ್ರತಿಭಾನ್ವಿತ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು,ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸಂಸ್ಥೆವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ನವೋದಯ ವಿದ್ಯಾಸಂಸ್ಥೆಗೆ ಅನನ್ಯ ಎಚ್.ಎಸ್ ಹಾಗೂ ಹರ್ಷಿತ್.ವಿ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾದರೆ, ಸೈನಿಕ್ ಶಾಲೆಗೆ ಹರಿಪ್ರಿಯ ಹಾಗೂ ತೇಜಸ್ ರೆಡ್ಡಿ ಪಿ.ಎನ್ ಆಯ್ಕೆಯಾಗಿದ್ದಾರೆ.
ಸೈನಿಕ್ ಮತ್ತು ಜವಾಹರ ನವೋದಯ ವಿದ್ಯಾಸಂಸ್ಥೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗುರುತ್ವ ಅಕಾಡೆಮಿ ವತಿಯಿಂದ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು
ಸಂಸ್ಥೆಯ ಮುಖ್ಯಸ್ಥ ಶ್ರೀನಿವಾಸ್ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಮಾಡಿ ಮಾತನಾಡಿದರು ಗುರುತ್ವ ಅಕಾಡೆಮಿ ಪ್ರಾರಂಭದಿಂದ ಇಲ್ಲಿಯವರೆಗೆ ಸುಮಾರು 150 ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತರಬೇತಿ ಪಡೆದಿದ್ದಾರೆ. ಕಳೆದ ವರ್ಷ ಇಬ್ಬರು ಮಕ್ಕಳು ಆಯ್ಕೆಯಾಗಿದ್ದರು. ಈ ವರ್ಷ ನಾಲ್ವರು ವಿದ್ಯಾರ್ಥಿಗಳು ಸೈನಿಕ್ ಮತ್ತು ಜವಾಹರ ನವೋದಯ ವಿದ್ಯಾಸಂಸ್ಥೆಗಳಿಗೆ ಆಯ್ಕೆಯಾಗಿದ್ದಾರೆ ಎಂದರು.
ಗುರುತ್ವ ಅಕಾಡೆಮಿಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದು. ಮಕ್ಕಳಿಗೆ ಅರ್ಥವಾಗುವ ರೀತಿ, ಮಕ್ಕಳ ಬೌದ್ಧಿಕ ಗುಣಮಟ್ಟಕ್ಕೆ ಅನುಗುಣವಾಗಿ ತರಬೇತಿ ನೀಡಲಾಗುತ್ತದೆ. ಶಿಕ್ಷಣ ಅನ್ನೋದು ಮಕ್ಕಳಿಗೆ ಹೊರೆ ಆಗಬಾರದು, ಮಕ್ಕಳು ಶಿಕ್ಷಣವನ್ನು ಇಷ್ಟಪಟ್ಟು ಪಡೆಯಬೇಕು. ಆ ನಿಟ್ಟಿನಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಕಲಿಸಬೇಕು ಎಂದರು.
ನಂತರ ನವೋದಯ ವಿದ್ಯಾಸಂಸ್ಥೆಗೆ ಆಯ್ಕೆಯಾದ ವಿದ್ಯಾರ್ಥಿಗಳು ಮಾತನಾಡಿ, ಗುರುತ್ವ ಅಕಾಡೆಮಿಯಲ್ಲಿ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಉತ್ತಮ ತರಬೇತಿ ನೀಡಲಾಗುತ್ತಿದೆ. ಇಲ್ಲಿ ನಾನು ತರಬೇತಿ ಪಡೆದಿದ್ದರಿಂದ ನವೋದಯ ಶಾಲೆಗೆ ಆಯ್ಕೆಯಾಗಿದ್ದಾನೆ. ಇಂಗ್ಲಿಷ್, ಹಿಂದಿ ಭಾಷೆ ಕಲಿಸಿ ಭಾಷಾ ಜ್ಞಾನ ವೃದ್ಧಿ ಮಾಡುತ್ತಿದ್ದಾರೆ. ಈ ಅಕಾಡೆಮಿಯಲ್ಲಿ ನಾನು ಸಾಕಷ್ಟು ಕಲಿತಿದ್ದೇನೆ ಎಂದರು.
ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ರಾಜಘಟ್ಟ ರವಿ,ಆರ್. ಎಲ್. ಜಾಲಪ್ಪ ಕಾಲೇಜಿನ ಪ್ರಾಂಶುಪಾಲರಾದ ವಿಜಯ ಕಾರ್ತಿಕ್ ಸೇರಿದಂತೆ ಪೋಷಕರು ಗಣ್ಯರು ಹಾಜರಿದ್ದರು.